ಹೊನ್ನಾವರ:
ನ್ಯಾಕ್ ಪೀರ್ ಕಮಿಟಿ ಇಲ್ಲಿನ ಎಸ್.ಡಿ.ಎಂ. ಪದವಿ ಕಾಲೇಜಿಗೆ ಭೇಟಿ ನೀಡಲಿದ್ದು ಮಾ.10 ಹಾಗೂ 11ರಂದು ಎರಡು ದಿನಗಳ ಕಾಲ ಕಾಲೇಜಿನಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಶೈಕ್ಷಣಿಕ ವಿಷಯಗಳ ಗುಣಮಟ್ಟವನ್ನು ಪರಿಶೀಲಿಸಲಿದೆ.
ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನ್ಯಾಕ್ ಪೀರ್ ಕಮಿಟಿಯ ಭೇಟಿ ಹಾಗೂ ಇನ್ನಿತರ ವಿಷಯಗಳ ಕುರಿತು ವಿವರ ನೀಡಿದರು.
‘ಕಾಲೇಜು ಈ ಹಿಂದೆ 2 ಬಾರಿ ನ್ಯಾಕ್ನಿಂದ ಮೌಲ್ಯಾಂಕನಕ್ಕೊಳಗಾಗಿದ್ದು ಪ್ರತಿ ಬಾರಿಯೂ ‘ಎ’ ಗ್ರೇಡ್ ಪಡೆದ ಜಿಲ್ಲೆಯ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಕಾಲೇಜಿನ ಶೈಕ್ಷಣಿಕ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಒಟ್ಟೂ 8 ವಿಭಾಗಳನ್ನು ನ್ಯಾಕ್ ಸಮಿತಿ ಪರಿಶೀಲಿಸಲಿದೆ.ಆಡಳಿತ ಮಂಡಳಿ,ಪಾಲಕರು ಹಾಗೂ ಪೂರ್ವ ವಿದ್ಯಾರ್ಥಿಗಳ ಜೊತೆಗೂ ಸಮಿತಿಯ ಸದಸ್ಯರು ಸಮಾಲೋಚನೆ ನಡೆಸಲಿದ್ದಾರೆ.
ಭಾರತೀಯಾರ್ ಹಾಗೂ ನೂರುಲ್ ಇಸ್ಲಾಂ ವಿಶ್ವವಿದ್ಯಾಲಯಗಳ ಮಾಜಿ ಕುಲಪತಿ ಪ್ರೊ.ಎಸ್.ಶಿವಸುಬ್ರಹ್ಮಣಿಯನ್ ಪೀರ್ ಕಮಿಟಿಯ ಮುಖ್ಯಸ್ಥರಾಗಿದ್ದು ಔರಾಂಗಾಬಾದ್ನ ಬಾಬಾಸಾಹೆಬ್ ಅಂಬೇಡ್ಕರ್ ಮರಾಠವಾಡಾ ವಿವಿಯ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಮಹೇಂದ್ರ ಡಿ.ಶಿರಸಾಟ್ ಹಾಗೂ ಇಂದೋರ್ನ ಶ್ರೀ ಕ್ಲಾತ್ ಮಾರ್ಕೆಟ್ ಕನ್ಯಾ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮಂಗಲ್ ಮಿಶ್ರಾ ಸಮಿತಿಯ ಸದಸ್ಯರಾಗಿದ್ದಾರೆ’ ಎಂದು ಅವರು ತಿಳಿಸಿದರು.
ಡಾ.ವೀರೇಂದ್ರ ಹೆಗ್ಗಡೆ ಆಶೀರ್ವಚನ 7ರಂದು
ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ.ವೀರೇಂದ್ರ ಹೆಗ್ಗಡೆ ಮಾ.7ರಂದು ಮಧ್ಯಾಹ್ನ 3ಕ್ಕೆ ಕಾಲೇಜಿಗೆ ಭೇಟಿ ನೀಡಲಿದ್ದಾರೆ.ಕಾಲೇಜಿನ ಮಹಾಪೋಷಕರಾಗಿರುವ ಡಾ.ವೀರೇಂದ್ರ ಹೆಗ್ಗಡೆ ಅವರು ಕಾಲೇಜಿಗೆ ಭೇಟಿ ನೀಡುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದ್ದು ಕಾಲೇಜಿನ ಸಿಬ್ಬಂದಿಗಳು,ಆಡಳಿತ ಮಂಡಳಿ ಸದಸ್ಯರು,ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅವರು ಆಶೀರ್ವಚನ ನೀಡಲಿದ್ದಾರೆ.ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಗುವುದು’ ಎಂದು ಪ್ರೊ.ಎಸ್.ಎಸ್.ಹೆಗಡೆ ತಿಳಿಸಿದರು.
ರಾಷ್ಟ್ರ ಮಟ್ಟದ ಹಿಂದಿ ವಿಚಾರ ಸಂಕಿರಣ 6ರಿಂದ
“ಹಿಂದಿ ಸಾಹಿತ್ಯ ಕಾ ವರ್ತಮಾನ ಸ್ವರೂಪ’ ಎನ್ನುವ ವಿಷಯದ ಕುರಿತು ಯುಜಿಸಿ ಪ್ರಾಯೋಜಕತ್ವದಲ್ಲಿ 3 ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಮಾ.6ರಿಂದ ನಡೆಯಲಿದೆ.
ಮಾರ್ಚ 6ರಂದು ಬೆಳಿಗ್ಗೆ 10ಕ್ಕೆ ಹಿರಿಯ ಪತ್ರಕರ್ತ ಜಿ.ಯು.ಭಟ್ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸುವರು.ಹೈದರಾಬಾದ್ನ ಕೇಂದ್ರೀಯ ಹಿಂದಿ ನಿರ್ದೇಶನಾಲಯದ ನಿರ್ದೇಶಕಿ ಅನಿತಾ ಗಾಂಗೋಲಿ ದಿಕ್ಸೂಚಿ ಭಾಷಣ ಮಾಡಲಿದ್ದು ಅಲಹಾಬಾದ್ ವಿವಿಯ ನಿವೃತ್ತ ಪ್ರಾಧ್ಯಾಪಕಿ ಡಾ.ಉಷಾ ಯಾದವ,ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ,ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ,ವಿಚಾರ ಸಂಕಿರಣದ ಸಂಯೋಜಕಿ ಡಾ.ಸುವರ್ಣಾ ಗಾಡ್ ಉಪಸ್ಥಿತರಿರುವರು.
3 ದಿನಗಳ ಅವಧಿಯಲ್ಲಿ ವಿವಿಧ ವಿಷಯಗಳ ಕುರಿತು ನಡೆಯುವ ಗೋಷ್ಠಿಗಳಲ್ಲಿ ವಿಷಯ ತಜ್ಞರು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ’ ಎಂದು ಅವರು ತಿಳಿಸಿದರು.
ಕಾಲೇಜಿನ ನ್ಯಾಕ್ ಸಂಯೋಜಕ ಡಾ.ವಿ.ಎಂ.ಭಂಡಾರಿ,ಡಾ.ರೇಣುಕಾದೇವಿ ಗೋಳಿಕಟ್ಟಿ,ಪ್ರೊ.ಎಂ.ಜಿ.ಹೆಗಡೆ,ಡಾ.ಸುವರ್ಣಾ ಗಾಡ್,ಪ್ರೊ.ನಾಗರಾಜ ಹೆಗಡೆ ಅಪಗಾಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
-gaju
Leave a Comment