ಕಾರವಾರ:
ಪರ ವಿರೋಧದ ಜಂಜಾಟದ ಮದ್ಯೆಯೇ ತಾಲೂಕು ಪಂಚಾಯತ್ ಆವರಣದಲ್ಲಿರುವ ಕ್ಯಾಂಟಿನ್ನ್ನು ಬಾಡಿಗೆ ಅವದಿ ಮುಗಿದ ಕಾರಣ ಪಂಚಾಯತ್ ಅಧಿಕಾರಿಗಳು ಪೊಲೀಸರ ಸಹಾಯದಿಂದ ತೆರವು ಮಾಡಿಸಿದರು.
2015ರ ಅ.1ರಿಂದ 2016ರ ಸೆ.31ರವರೆಗೆ ಪ್ರಭಾಕರ ರೇವಣಕರ ಅವರಿಗೆ ಕ್ಯಾಂಟಿನ್ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ಈ ಮಧ್ಯೆ 2016ರ ಜು.14ರಂದು ಪ್ರಭಾಕರ ರೇವಣಕರ ಮೃತಪಟ್ಟಿದ್ದರು. ಹೀಗಾಗಿ 2016ರ ಜು.21ರಂದು ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದಾಗ ಟೆಂಡರ್ ಕರೆದು, ಅತೀ ಹೆಚ್ಚು ದರ ನಮೂದಿಸಿದವರಿಗೆ ನೀಡಲು ಎಲ್ಲರು ಒಪ್ಪಿಗೆ ಸೂಚಿಸಿದರು. ಅದರಂತೆ ಗುರುದಾಸ್ ನಾಯ್ಕ ಎಂಬುವವರು ಹೆಚ್ಚು ದರ ನಮೂದಿಸಿದ್ದು, ಅವರಿಗೆ ನೀಡಲು ಟೆಂಡರ್ ಅನುಮತಿಯಾಗಿತ್ತು. ಆದರೆ ಮೃತ ಪ್ರಭಾಕರ ರೇವಣಕರ ಅವರ ಅಳಿಯ ಸುನೀಲ್ ರಾಯ್ಕರ ಅವರು ತನಗೆ ಕ್ಯಾಂಟಿನ್ ನಡೆಸಲು ನೀಡಬೇಕು ಎಂದು ಕಾರವಾರ ನ್ಯಾಯಾಲಯದ ಮೊರೆ ಹೋಗಿದ್ದರು. ಆಗ ನ್ಯಾಯಾಲಯವು 2016ರ ಆ.31ರವರೆಗೆ ನಡೆಸಲು ಆದೇಶಿಸಿತ್ತು. ಈ ಅವಧಿ ಮುಗಿದರೂ ಕ್ಯಾಂಟೀನ್ ಅನ್ನು ತಾಲ್ಲೂಕು ಪಂಚಾಯತ್ಗೆ ಹಸ್ತಾಂತರಿಸಿರಲಿಲ್ಲ.
ಬಳಿಕ ಧಾರವಾಡ ಹೈಕೋರ್ಟ್ನಲ್ಲಿ ಮತ್ತೆ ಪ್ರಕರಣವನ್ನು ದಾಖಲಿಸಿದ್ದರು. ಅದರಂತೆ 2017ರ ಜು.25ರಂತೆ ಹೊಸದಾಗಿ ದರಪಟ್ಟಿಯ ಪ್ರಕಾರ ಮುಂದುವರಿದು 2017ರ ಆ.11ರವರೆಗೆ ನಡೆಸಲು ಅದು ಆದೇಶಿಸಿತ್ತು. ಈ ಅವಧಿಯು ಮುಗಿದ ಬಳಿಕ ಹೈಕೋರ್ಟ್ನ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದಾಗ ಅದು ತಿರಸ್ಕೃತಗೊಂಡಿದೆ. ತಾಪಂ ವತಿಯಿಂದ ಖಾಲಿ ಮಾಡಲು ಒಂದು ತಿಂಗಳು ಕಾಲವಕಾಶ ನೀಡಲಾಗಿತ್ತು. ಅಲ್ಲದೆ ಹೈಕೋರ್ಟ್ ಆದೇಶದಂತೆ ಸೆ.22ರ ಸಂಜೆ 5.30ರ ಒಳಗೆ ಅವರು ಖಾಲಿ ಮಾಡಿ ನೀಡಬೇಕಿತ್ತು. ಆದರೆ ಅವರು ನೀಡಿರದ ಕಾರಣ ಪೊಲೀಸರ ಸಹಾಯದಿಂದ ಖಾಲಿ ಮಾಡಿಸಲಾಗಿದೆ ಎಂದು ತಾಪಂ ಕಾರ್ಯ ನಿರ್ವಹಣಾಧಿಕಾರಿ ಶ್ರೀಕಾಂತ ಹೆಗಡೆ ತಿಳಿಸಿದರು.
ಅಧಿಕಾರಿಗಳು ಕ್ಯಾಂಟೀನ್ ಖಾಲಿ ಮಾಡಿಸಲು ಮುಂದಾದಾಗ ವಾಗ್ವಾದ ನಡೆಸಿದ ಸುನೀಲ್ ರಾಯ್ಕರ ಹಾಗೂ ಅವರ ಪರ ವಕೀಲೆ ಅಶ್ವಿನಿ ಗೌಡ ಕ್ಯಾಂಟೀನ್ನ್ನು ಖಾಲಿ ಮಾಡಲು ನೋಟಿಸ್ ನೀಡಿಲ್ಲ. ನೋಟಿಸ್ ನೀಡಿ ಕಾಲವಕಾಶ ನೀಡಿದರೆ ಖಾಲಿ ಮಾಡಲಾಗುವುದು. ಅದನ್ನು ಬಿಟ್ಟು ಏಕಾಏಕಾ ಖಾಲಿ ಮಾಡಿಸಲು ಬಂದರೆ ಸರಿ ಇರುವುದಿಲ್ಲ. ಅಲ್ಲದೇ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಆದೇಶದಲ್ಲಿ ನೀವೇ ಖಾಲಿ ಮಾಡಿಸಬೇಕು ಎಂದು ಎಲ್ಲಿಯೂ ನಮೂದಿಸಿಲ್ಲ ಎಂದರು. ಆದರೂ ತೆರವು ಕಾರ್ಯ ಪೂರ್ಣಗೊಳಿಸಿದರು. ಕ್ಯಾಂಟೀನ್ ಖಾಲಿ ಮಾಡಿಸುವ ವೇಳೆ ಇದ್ದ 10 ಸಿಲಿಂಡರ್ಗಳಲ್ಲಿ 5 ಗೃಹ ಬಳಕೆಯದ್ದಾಗಿದ್ದು, ಅದನ್ನು ಆಹಾರ ನಿರೀಕ್ಷಕರು ವಶಕ್ಕೆ ಪಡೆದುಕೊಂಡರು. ಮನೆಗೆ ನೀಡುವ ಅಡುಗೆ ಸಿಲಿಂಡರ್ ಅನ್ನು ಕ್ಯಾಂಟೀನ್ನಲ್ಲಿ ಬಳಸುವುದು ಅಪರಾಧವಾಗಿದ್ದು ಅವುಗಳನ್ನು ವಶಪಡಿಕೊಂಡು ಉಪವಿಭಾಗಾಧಿಕಾರಿಗೆ ಒಪ್ಪಿಸಲಾಗುವುದು. ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಆಹಾರ ನಿರೀಕ್ಷಕ ಎಸ್.ವಿ.ನಾಯ್ಕ ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಉಪಾಧ್ಯಕ್ಷ ರವೀಂದ್ರ ಪವಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ವ್ಯವಸ್ಥಾಪಕ ಶ್ರೀಧರ ಥಾಮ್ಸೆ, ಸದಸ್ಯರಾದ ಸುರೇಂದ್ರ ಗಾಂವ್ಕರ, ಪ್ರಶಾಂತ ಗೋವೇಕರ್, ನಗರ ಠಾಣೆ ಪಿಎಸ್ಐ ಉಮೇಶ ಪಾವಸ್ಕರ್ ಮುಂತಾದವರು ಇದ್ದರು.
Leave a Comment