ಹೊನ್ನಾವರ : ಈ ಸೃಷ್ಠಿಗೂ ಮೊದಲಿದ್ದದ್ದು ಯಾವುದು? ಅದು ಮೃತ್ಯು, ಮೃತ್ಯುವಿನ ಒಡಲಿನಿಂದ ಈ ಪ್ರಪಂಚದ ಎಲ್ಲವೂ ಸೃಷ್ಠಿಯಾಯಿತು ಎಂದು ಉಪನಿಷತ್ತು ಹೇಳುತ್ತದೆ ಎಂದು ಖ್ಯಾತ ವಿದ್ವಾಂಸ ಲಕ್ಷ್ಮೀಶ ತೊಳ್ಪಾಡಿ ಹೇಳಿದರು.
ಅವರು ದೊಡ್ಡಹೊಂಡದ ಲಕ್ಷ್ಮೀನಾರಾಯಣ ಹೆಗಡೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ನ.ರವಿಕುಮಾರ ಅವರ ಉಪನಿಷತ್ತು ಪುಸ್ತಕ ಬಿಡುಗಡೆಗೊಳಿಸಿ ಉಪನ್ಯಾಸ ನೀಡಿ ಮಾತನಾಡಿದರು. ಉಪನಿಷತ್ತಿನಲ್ಲಿ ಒಂದು ಮಾತಿದೆ ಅಶನಾಯಾಯ ಮೃತ್ಯು ಎಂದು. ಈ ಜಗತ್ತನ್ನು ಹಸಿವು ಎಂಬ ಮೃತ್ಯು ಆವರಿಸಿದೆ. ಬದುಕ ಬೇಕಾದರೆ ಆಹಾರ ಬೇಕು, ಆದರೆ ಮೃತ್ಯುವಿಗೆ ಬದುಕೆ ಆಹಾರ. ಹತ್ತಿರ ಕುಳಿತು ಮಾತಾಡುವುದೇ ಉಪನಿಷತ್ತಾಯ್ತು. ಹಾಗೆ ಕುಳಿತು ಮಾತಾಡುವಾಗ ರಹಸ್ಯವನ್ನು ಕಂಡುಕೊಳ್ಳುವುದೇ ಉಪನಿಷತ್ತಿನ ಸಾರ. ಇದು ನಾಗರೀಕ ಜಗತ್ತಿನ ಎಲ್ಲ ಪ್ರಕ್ರಿಯೆಗಳಿಂದ ಹೊರತಾದದ್ದು ಎಂದರು. ಅಭಿನವ ರವಿಕುಮಾರ ಮಾತನಾಡಿ ಇವತ್ತು ನಮ್ಮ ವಾಙ್ಮಯ ಉಳಿಯಬೇಕು, ಸಂಸ್ಕøತಿ, ಪರಂಪರೆ ಉಳಿಯಬೇಕು ಎಂದೆಲ್ಲಾ ಮಾತನಾಡುತ್ತೇವೆ. ಆದರೆ ಮುಂದಿನ ಜನಾಂಗಕ್ಕೆ ಆಧುನಿಕ ಪರಿಭಾಷೆಯಲ್ಲಿ ಅದರ ಮೌಕಿಖತೆಯನ್ನು ಕಟ್ಟಿಕೊಡುವ ಕೆಲಸ ಆಗಬೇಕು. ಹೀಗಾಗಿ ಮಕ್ಕಳಿಗಾಗಿ ಈ ಪುಸ್ತಕ ಬರೆದೆ ಎಂದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗರಾಜ ಹೆಗಡೆ ಅಪಗಾಲ ಮಾತನಾಡಿ ಕನ್ನಡದ ಬಹುಮುಖ್ಯ ಪ್ರಕಾಶನ ಸಂಸ್ಥೆಯಾದ ಅಭಿನವದಲ್ಲಿ ಈವರೆಗೆ 500 ಪುಸ್ತಕಗಳನ್ನು ಪ್ರಕಟಿಸಿದ್ದರೂ ತಮ್ಮ ಒಂದು ಪುಸ್ತಕವನ್ನು ಪ್ರಕಟಿಸಿಕೊಳ್ಳದೆ ದೊಡ್ಡಹೊಂಡದ ಪ್ರಣತಿ ಪ್ರಕಾಶನದ ಮೂಲಕ ಪ್ರಕಟಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಬಿಡುಗಡೆಗೊಳಿಸಲು ಅನುವುಮಾಡಿಕೊಟ್ಟ ರವಿಕುಮಾರರದು ಮೆಚ್ಚುವಂಥ ವ್ಯಕ್ತಿತ್ವ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಧ್ಯಾ ಹೆಗಡೆ ‘ನಮ್ಮ ಅಪ್ಪ ದೊಡ್ಡ ಹೆಸರು ಮಾಡಲಿಲ್ಲ, ಚಿರಪರಿಚಿತರಾಗಿಯೂ ಇರಲಿಲ್ಲ. ಆದರೆ ಅವರ ಆಲೋಚನೆ, ಚಿಂತನೆ, ವ್ಯಕ್ತಿತ್ವಗಳ ಮೂಲಕ ದೊಡ್ಡದನ್ನು ಕಟ್ಟಿಕೊಟ್ಟರು ಎಂದರು. ನಾಲ್ಕು ವರ್ಷಗಳಿಂದ ಅಪ್ಪನ ಹೆಸರಿನಲ್ಲಿ ಪುಸ್ತಕ ಬಿಡುಗಡೆ, ತಾಳಮದ್ದಲೆ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ. ಈ ವರ್ಷ ಲಕ್ಷ್ಮೀಶ ತೊಳ್ಪಾಡಿ ಮತ್ತು ನಾಗರಾಜ ಹೆಗಡೆ ಅಪಗಾಲ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ವಿನಾಯಕ ಹೆಗಡೆ ವಂದಿಸಿದರು. ಪ್ರಶಾಂತ ಹೆಗಡೆ ಮೂಡಲಮನೆ ನಿರೂಪಿಸಿದರು. ನಂತರ ದತ್ತಾತ್ರೇಯ ಭಟ್ ಸಾಲ್ಕೋಡ ಅವರ ನಿರ್ದೇಶನದಲ್ಲಿ ಸ್ಥಳೀಯ ಕಲಾವಿದರು ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಲೆ ನಡೆಸಿಕೊಟ್ಟರು. ಹೊನ್ನಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪ್ರಣತಿ ದೊಡ್ಡಹೊಂಡ ಸಂಯುಕ್ತವಾಗಿ ಕಾರ್ಯಕ್ರಮ ಏರ್ಪಡಿಸಿತ್ತು. ಇದೇ ಸಂದರ್ಭದಲ್ಲಿ ಮಹೇಶ ಹೆಗಡೆ ಅವರ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಯಿತು.
Leave a Comment