ಹಳಿಯಾಳ:- ತಾಲೂಕಿನಾದ್ಯಂತ ವಿವಿಧ ನೆಟವರ್ಕ ಕಂಪೆನಿಗಳು ಪ್ರಮುಖವಾಗಿ ಏರಟೆಲ್ ಕಂಪೆನಿ ಸಲ್ಲಿಸುತ್ತಿರುವ ಅಸಮರ್ಪಕ ಸೇವೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕದವರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನಾ ಮೇರವಣಿಗೆ ಹಾಗೂ ಏರಟೆಲ್ ಕಚೇರಿ ಎದುರು ಧರಣಿ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಸಂಗೋಳ್ಳಿ ರಾಯಣ್ಣ(ಅರ್ಬನ್ ಬ್ಯಾಂಕ್) ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಥ್ಥಳಿಗೆ ಪೂಜೆ ಸಲ್ಲಿಸಿ, ಕನ್ನಡ ಧ್ವಜವನ್ನು ಹಾರಿಸಿ ಸಾರ್ವಜನಿಕರು, ಗ್ರಾಹಕರೊಂದಿಗೆ ಸೇರಿ ಪ್ರತಿಭಟನಾ ಮೇರವಣಿಗೆ ನಡೆಸಿದರು. ಇಲ್ಲಿಯ ಮಾರುಕಟ್ಟೆ ರಸ್ತೆಯಲ್ಲಿರುವ ಐಡಿಯಾ ಕರೆನ್ಸಿ ವಿತರಕ ಕಚೇರಿ ಎದುರಿಗೆ ಆಗಮಿಸಿ ಅವಿರಗೆ ಮನವಿ ಸಲ್ಲಿಸಿದ ವೇದಿಕೆಯವರು ಬಳಿಕ ಶೀವಾಜಿ ವೃತ್ತಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ಗ್ರಾಹಕರಿಗೆ ತೊಂದರೆ ಆಗದಂತೆ ಸೇವೆ ನೀಡಲು ಆದೇಶಿಸುವುದಾಗಿ ಭರವಸೆ ನೀಡಿದರು. ಬಳಿಕ ಬಿಎಸ್ಎನ್ಎಲ್ ಕಚೇರಿಗೆ ಆಗಮಿಸಿ ಅವರಿಗೆ, ಬಸ್ ನಿಲ್ದಾಣದ ಎದುರಿಗೆ ಇರುವ ವೊಡಾಫೊನ್ ವಿತರಕರಿಗೆ ಮನವಿ ಸಲ್ಲಿಸಿ ಉತ್ತಮ ನೆಟವರ್ಕ ಸೇವೆ ನೀಡುವಂತೆ ಹಾಗೂ 4ಜಿ ಸೇವೆ ಒದಗಿಸುವಂತೆ ಆಗ್ರಹಿಸಿದರು. ತದ ನಂತರ ಕೆಎಸ್ಆರ್ಟಿಸಿ ವಾಣಿಜ್ಯ ಮಳಿಗೆಯಲ್ಲಿರುವ ಏರಟೆಲ್ ಕರೆನ್ಸಿ ವಿತರಕರ ರಾಜ ಏಜೆನ್ಸಿ ಎದುರು ಧರಣಿ ಕುಳಿತ ಪ್ರತಿಭಟನಾಕಾರರು ಏರಟೆಲ್ ವಿರುದ್ದ ಘೊಷಣೆಗಳನ್ನು ಕೂಗಿ ಕಳೆದ 8 ತಿಂಗಳಿಂದ ಅನುಭವಿಸುತ್ತಿರುವ ನೆಟವರ್ಕ ಸಮಸ್ಯೆಯ ಪರಿಹಾರಕ್ಕೆ ಆಗ್ರಹಿಸಿದರು. ಸುಮಾರು 1ಗಂಟೆ ಕಾಲ ಧರಣಿ ನಡೆಸಿದ ಅವರು ವಿತರಕ ಸಂಜಯ ಅವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಪ್ರಮುಖವಾಗಿ ಏರಟೆಲ್ ಕಂಪೆನಿಯವರು ಹಳಿಯಾಳ ಭಾಗದಲ್ಲಿ 4ಜಿ ಸೇವೆ ಎಂದು ಹೇಳಿ 2ಜಿ ಗಿಂತ ಕೆಳಮಟ್ಟದ ಅಸಮರ್ಪಕ ಸೇವೆ ಒದಗಿಸೂವ ಮೂಲಕ ಗ್ರಾಹಕರನ್ನು ದೊಚುತ್ತಿದ್ದಾರೆಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕರವೇ ಹಳಿಯಾಳ ಘಟಕ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಏರಟೆಲ್ನ ಬೆಂಗಳೂರಿನ ಕಾನೂನು ವಿಭಾಗದ ಪ್ರಮುಖ ಸ್ಟಾನ್ಲಿ ಅವರು ಮಾತನಾಡಿ ಅಗಸ್ಟ್ ತಿಂಗಳ ದಿ.16ರ ಒಳಗೆ ಹಳಿಯಾಳ ಭಾಗದಲ್ಲಿ ಉಂಟಾಗಿರುವ ಸಮಸ್ಯೆಯನ್ನು ನಿವಾರಿಸಿ ಉತ್ತಮ ಸೇವೆ ಒದಗಿಸಿ ಕೊಡುವುದಾಗಿ ಮೌಖಿಕವಾಗಿ ಹೇಳಿದ್ದಾರೆ. ಆದರೇ ಈ ಬಗ್ಗೆ ತಹಶೀಲ್ದಾರ್ ಅವರು ಸಭೆ ನಡೆಸುತ್ತೇನೆಂದು ಹೇಳಿದ್ದು ಸಭೆಯ ಬಳಿಕ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಹಳಿಯಾಳ ಆಟೋ ಯುನಿಯನ್, ಗ್ಯಾರೇಜ್ ಸಂಘದವರು, ಹಲವು ವ್ಯಾಪಾರಸ್ಥರು ಬೆಂಬಲ ನೀಡಿದ ಪ್ರತಿಭಟನೆಯಲ್ಲಿ ಪ್ರಮುಖರಾದ ಚಂದ್ರಕಾಂತ ದುರ್ವೆ, ವಿನೋದ ದೊಡ್ಮಣಿ, ನಾಗಯ್ಯಾ ಓಶಿಮಠ, ವಿಜಯ ಫಡ್ನಿಸ್, ಶ್ರೀಶೈಲ್ ಮಠದೇವರು, ಮಹೇಶ ಆನೆಗುಂದಿ, ನಂದು ಕರಂಜೆಕರ, ಸುಧಾಕರ ಕುಂಬಾರ, ಪ್ರಶಾಂತ ಪಾಟೀಲ್, ಈರಯ್ಯಾ ಹಿರೆಮಠ, ಸಚಿನ ಶೆಟ್ಟಿ, ಮಂಜು ಹೊಂಡದಕಟ್ಟಿ, ಶೀವು ಡಮ್ಮಣಿಗಮಠ, ವಿನೋದ ಮಡ್ಡಿ, ಶಿವು ಶೆಟ್ಟರ, ಚಂದ್ರಕಾಂತ ಅರಿಶೀನಗೇರಿ ಇತರರು ಇದ್ದರು.
Leave a Comment