ಹಳಿಯಾಳ:- ದಾಂಡೇಲಿ ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಮತ್ತು ಕ್ರೀಯಾಶೀಲ ವ್ಯಕ್ತ್ತಿತ್ವದ ನ್ಯಾಯವಾದಿ ಅಜಿತ ನಾಯಕರ ಬರ್ಬರ ಹತ್ಯೆಯನ್ನು ಖಂಡಿಸುವುದಾಗಿ ಹಾಗೂ ಶೀಘ್ರವಾಗಿ ಆರೋಪಿಗಳನ್ನು ಬಂಧಿಸಲು ಪೋಲಿಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ತಮ್ಮ ಶೋಕ ಸಂದೇಶದಲ್ಲಿ ಹೇಳಿಕೆ ನೀಡಿರುವ ಅವರು ಅಜೀತ್ ಹತ್ಯೆಯ ಬಗ್ಗೆ ತಿಳಿದು ತುಂಬಾ ಆಘಾತವಾಯಿತು. ದಾಂಡೇಲಿಯ ಪ್ರಸಿದ್ಧ ನ್ಯಾಯವಾದಿಗಳಾಗಿದ್ದ ಅವರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ನಗರಸಭಾ ಅಧ್ಯಕ್ಷರಾಗಿ ಗಮನಾರ್ಹ ಸೇವೆ ಸಲ್ಲಿಸಿದ್ದರು. ಅಲ್ಲದೇ ದಾಂಡೇಲಿ ಬಚಾವೋ ಸಮಿತಿಯ ಅಧ್ಯಕ್ಷರಾಗಿ, ವಕೀಲ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು ಚಿರಸ್ಮರಣಿಯ ಎಂದಿದ್ದಾರೆ. ಅಜಿತ ನಾಯ್ಕ ಅವರ ಹತ್ಯೆಗೆ ಕಾರಣರಾಗಿರುವವರನ್ನು ಆದಷ್ಟೂ ಶೀಘ್ರವಾಗಿ ಬಂಧಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ನ್ಯಾಯಯುತವಾದ ತನಿಖೆ ನಡೆಸಿ ಇಂತಹ ಸಮಾಜ ಘಾತುಕರನ್ನು ಕಠಿಣವಾದ ಶಿಕ್ಷೆಗೆ ಒಳಪಡಿಸಿ ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಕೊಳ್ಳಲಾಗುವುದು. ಅಮಾಯಕರ ಹತ್ಯೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ದೇಶಪಾಂಡೆ ಹೇಳಿದ್ದಾರೆ. ಅಜೀತ್ ಸಾವು ಸಮಾಜದಲ್ಲಿ ತುಂಬಲಾರದ ನಷ್ಟವಾಗಿದ್ದು ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಮತ್ತು ಅವರ ಕುಟುಂಬದವರಿಗೆ ಈ ಆಘಾತವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಸಚಿವ ದೇಶಪಾಂಡೆ ಪ್ರಾರ್ಥಿಸಿದ್ದಾರೆ.
Leave a Comment