ಹಳಿಯಾಳ:- ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಈಗ ಆಡಳಿತದಲ್ಲಿರುವ ಮೈತ್ರಿ ಸರ್ಕಾರಗಳು ರೈತಪರವಾಗಿವೆ. ಸಾಲ ಮನ್ನಾ, ಕೃಷಿ ಸಾಲ ಸೌಲಭ್ಯ, ತಾಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಟಾನಗೊಳಿಸುವ ಮುಖಾಂತರ ಸರ್ಕಾರ ರೈತರ ಬದುಕನ್ನು ಹಸನಾಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದು ಕೆ.ಡಿ.ಸಿ.ಸಿ ಬ್ಯಾಂಕ ಅಧ್ಯಕ್ಷ ಹಾಗೂ ಉ.ಕ.ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ನುಡಿದರು. ಪಟ್ಟಣದ ಕೆ.ಡಿ.ಸಿ.ಸಿ ಬ್ಯಾಂಕ್ ಸಭಾ ಭವನದಲ್ಲಿ ನಡೆದ “ಬೆಳೆ ವಿಮಾ ಪರಿಹಾರ ರೈತರ ಖಾತೆಗಳಿಗೆ ಜಮಾ ಆದ ಹಿನ್ನಲೆಯಲ್ಲಿ ತಾಲೂಕಿನ ಸಹಕಾರಿ ಸಂಘಗಳು ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ ಮತ್ತು ರೈತರು ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಹಿರಿಯ ಸಚಿವ ಆರ್.ವಿ.ದೇಶಪಾಂಡೆ ತಾಲೂಕಿನಲ್ಲಿ ರೈತಪರ ಹಲವಾರು ಯೋಜನೆಗಳನ್ನು ತಂದಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಕೃಷಿ ಹಾಗೂ ರೈತಪರ ಯೋಜನೆಗಳು ಅನುಷ್ಟಾನಗೊಳ್ಳಲಿದೆ ಎಂದರು. ತಾಲೂಕಿಗೆ ಈ ಬಾರಿ ಫಸಲ ಭೀಮಾ ಯೋಜನೆಯಲ್ಲಿ 17.41ಕೋಟಿ ಬೆಳೆ ವಿಮೆ ಮಂಜೂರಾಗಿದ್ದು, ಇಷ್ಟೋಂದು ದೊಡ್ಡ ಪ್ರಮಾಣದಲ್ಲಿ ಬೆಳೆ ಮಂಜೂರಾಗುವಲ್ಲಿ ಸಕಾಲದಲ್ಲಿ ಕಂದಾಯ, ಕೃಷಿ ಇಲಾಖೆ, ಸಹಕಾರಿ ಸಂಘಗಳು ನೀಡಿದ ಸಹಕಾರ ಅಭಿನಂದನೀಯವಾಗಿದೆ ಎಂದು ಘೊಟ್ನೇಕರ ಶ್ಲಾಘಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತಹಸೀಲ್ದಾರ ವಿದ್ಯಾಧರ ಗುಳಗುಳೆ, ಕೃಷಿ ಸಹಾಯಕ ನಿರ್ದೇಶಕ ನಾಗೇಶ ಎಸ್ ನಾಯ್ಕ, ಕೆ.ಡಿ.ಸಿ.ಸಿ ಬ್ಯಾಂಕ್ ನಿವೃತ್ ವ್ಯವಸ್ಥಾಪಕ ನಿರ್ದೇಶಕ ಬಾಂದುರ್ಗಿ, ಬ್ಯಾಂಕ್ ಶಾಖಾ ವ್ಯವಸ್ಥಾಪಕ ಡಿ.ಆರ್.ಆಚಾರಿ, ಜಿಲ್ಲಾ ಸೇವಾ ಸಹಕಾರಿ ಸಂಘಗಳ ಯುನಿಯನ್ ಉಪಾಧ್ಯಕ್ಷ ಶಿವಪುತ್ರಪ್ಪ ನುಚ್ಛಂಬ್ಲಿ ಇದ್ದರು. ಸಹಕಾರಿ ಸಂಘಗಳ ಕಾರ್ಯದರ್ಶಿಗಳಾದ ಜಿ.ಜೆ.ನಾಯ್ಕ, ಕೆ.ಪಿ.ಪೂಜಾರಿ ಹಾಗೂ ಶಾಮರಾವ್ ಮಂಗನಗೌಡ್ರ ಕಾರ್ಯಕ್ರಮ ನಿರ್ವಹಿಸಿದರು.
Leave a Comment