ಹಳಿಯಾಳ: ಸರ್ಕಾರದ ಎಷ್ಟೋ ಯೋಜನೆಗಳು ಹಳ್ಳಿಗಳಲ್ಲಿ ಅನುಷ್ಠಾನಗೊಂಡಿದ್ದರು, ನೀರಿಕ್ಷಿತ ಮಟ್ಟದಲ್ಲಿ ಅಭಿವೃದ್ದಿ ತಲುಪದ ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗಾಗಿ ಹೊಸ ಆಲೋಚನೆಗಳ ಮೂಲಕ ತಾಲೂಕಿನ 2 ಹಳ್ಳಿಗಳನ್ನು ದತ್ತು ಸ್ವೀಕರಿಸಿ ಆದರ್ಶ ಗ್ರಾಮಗಳನ್ನಾಗಿ ಮಾಡುವ ಮಹತ್ವದ ನಿರ್ಧಾರವನ್ನು ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟಿ ಕೈಗೊಂಡಿದೆ ಎಂದು ಆರ್ಸೆಟ್ ಕಾರ್ಯಕಾರಣಿ ಮಂಡಳಿ ಅಧ್ಯಕ್ಷರಾದ ಪ್ರಸಾದ ಆರ್ ದೇಶಪಾಂಡೆ ತಿಳಿಸಿದರು. ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ದೇಶಪಾಂಡೆ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಜನಗಾ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ದೊಡಕೊಪ್ಪ ಹಾಗೂ ಬಂಟರಗಾಳಿ ಈ 2 ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದರು. 2 ವರ್ಷಗಳ ಅವಧಿಗೆ ದತ್ತು :- 119ಮನೆಗಳನ್ನು ಹೊಂದಿರುವ ದೊಡಕೊಪ್ಪ ಗ್ರಾಮ 617ಜನ ಸಂಖ್ಯೆಯನ್ನು ಹೊಂದಿದೆ. ಕೃಷಿಯೇ ಪ್ರಮುಖ ಉದ್ಯೋಗ. ಒಂದರಿಂದ 5ನೇ ತರಗತಿಯವರೆಗೆ ಪ್ರಾಥಮಿಕ ಶಾಲೆ. 34 ವಿದ್ಯಾರ್ಥಿಗಳನ್ನು ಹೊಂದಿದ್ದು ಸರಿಯಾದ ಪಿಠೋಪಕರಣಗಳ ವ್ಯವಸ್ಥೆ ಇಲ್ಲ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ, ಖಾಯಂ ಅಧ್ಯಾಪಕರು ಇಲ್ಲ. ಕುಡಿಯುವ ನೀರು, ಸಮುದಾಯ ಭವನ, ದೇವಸ್ಥಾನ, ಚರಂಡಿ, ರಸ್ತೆ ಹೀಗೆ ಹಲವಾರು ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇನ್ನೂ ಬಂಟರಗಾಳಿ ಗ್ರಾಮ 216ಜನಸಂಖ್ಯೆ ಹೊಂದಿದ್ದು ದೊಡಕೊಪ್ಪ ಗ್ರಾಮದಂತೆಯೇ ವಿವಿಧ ಮೂಲಭೂತ ಸೌಕರ್ಯಗಳ ಕೊರತೆ ಹೊಂದಿದೆ ಎಂದು ಮಾಹಿತಿ ನೀಡಿದ ಪ್ರಸಾದ ದೇಶಪಾಂಡೆ ಈ ಕೊರತೆಗಳನ್ನು ನೀಗಿಸಿ 2018ರಿಂದ 2 ವರ್ಷಗಳ ಅವಧಿಗೆ ಈ 2 ಗ್ರಾಮಗಳನ್ನು ದತ್ತು ತೆಗೆದುಕೊಂಡು ಆದರ್ಶ ಗ್ರಾಮ ಮಾಡುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು. ಯೋಜನೆ ಉದ್ದೇಶ :- ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಹೋಗುವುದನ್ನು ತಡೆಯುವುದು.ಆದರ್ಶ ಗ್ರಾಮ ಯೋಜನೆಯಿಂದ ಸಮೀಪದ ಇತರ ಹಳ್ಳಿಗಳು ಅಭಿವೃದ್ದಿಗೆ ಆಕರ್ಷಿತರಾಗಿಸುವುದು. ಕೃಷಿ ಉತ್ಪನ್ನ ಹಾಗೂ ಇತರ ಪದಾರ್ಥಗಳಿಗೆ ಸುಲಭ, ಶೀಘ್ರವಾಗಿ ಅಗ್ಗದ ಮಾರುಕಟ್ಟೆ ನಿರ್ಮಾಣ, ಸಮುದಾಯದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಸಾಮಾಜಿಕ ಭದ್ರತೆ ಕಲ್ಪಿಸುವುದು.ಸಹಕಾರ ಮನೋಭಾವದ ಜೀವನ ಕ್ರಮದ ಶೀಘ್ರ ಅಭಿವೃದ್ದಿಯ ಪಥವನ್ನು ಸೃಷ್ಠಿಸುವುದು. ಜಾಗೃತಿ ಕಾರ್ಯಕ್ರಮ ಮತ್ತು ಪ್ರಚಾರಗಳ ಮೂಲಕ ಜನರ ವರ್ತನಾತ್ಮಕ ಬದಲಾವಣೆಗಳತ್ತ ಗಮನಹರಿಸುವುದು. ಮೂಲ ಸೌಕರ್ಯಗಳನ್ನು ಅಭಿವೃದ್ದಿಪಡಿಸುವುದು. ಇನ್ನೂ ಆದರ್ಶ ಗ್ರಾಮಗಳನ್ನಾಗಿ ಪರಿವರ್ತಿಸಲು ಹಮ್ಮಿಕೊಂಡಿರುವ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಪ್ರಸಾದ ಅವರು ಗ್ರಾಮ ಅಭಿವೃದ್ದಿ ಸಮೀತಿ ರಚನೆ. ಗ್ರಾಮೀಣ ಅಭಿವೃದ್ದಿ ಯೋಜನೆ ತಯಾರಿಕೆ. ಆರೋಗ್ಯ,ಶಿಕ್ಷಣ,ಆರ್ಥಿಕ,ಪರಿಸರ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿ. ಸ್ವಸಹಾಯ ಸಂಘ ಮತ್ತು ಯುವಕ ಮಂಡಳ ರಚನೆ. ಕೆರೆ ಹೂಳೆತ್ತುವಿಕೆ,ಕೃಷಿ ಹೊಂಡ ನಿರ್ಮಾಣ. ಯುವಕ-ಯುವತಿಯರಿಗೆ ಕೌಶಲ್ಯಾಭಿವೃದ್ದಿ ತರಬೇತಿ. ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಆಟದ, ಶಾಲಾ ಸಾಮಗ್ರಿಗಳ ವಿತರಣೆ, ಆಟದ ಮೈದಾನ ನಿರ್ಮಾಣ ಮತ್ತು ಶಿಕ್ಷಕರ ನೇಮಕ ಮಾಡುವುದು. ಬಸ್ ವ್ಯವಸ್ಥೆ, ಸಿಸಿ ರೋಡ್, ಒಳಚರಂಡಿ ನಿರ್ಮಾಣ, ಪೈಪ್ಲೈನಗಳ ಅಳವಡಿಕೆ, ರುದ್ರಭೂಮಿ, ಸಭಾಭವನ, ರಂಗ ಮಂದಿರ, ಪಕ್ಕಾ ಮನೆಗಳ ನಿರ್ಮಾಣ, ಬೀದಿ ದೀಪ ಮತ್ತು ಸಿಸಿ ಟಿವಿ ಅಳವಡಿಕೆ ಹಾಗೂ ಅಡುಗೆ ಅನಿಲ ಸಂಪರ್ಕ ನೀಡುವ ಯೋಜನೆಯನ್ನು ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟಿ ಹೊಂದಿದೆ ಎಂದು ಅಧ್ಯಕ್ಷರಾದ ಪ್ರಸಾದ ದೇಶಪಾಂಡೆ ತಿಳಿಸಿದರು. ಸುದ್ದಿಗೊಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ವೈದ್ಯ, ಹಿರಿಯ ಅಧಿಕಾರಿ ಅನಂತಯ್ಯಾ ಆಚಾರಿ, ವಿಆರ್ಡಿಎಮ್ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇದ್ದರು.
Leave a Comment