ಹಳಿಯಾಳ: ಅಪಘಾನಿಸ್ತಾನದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಉತ್ತರ ಕನ್ನಡ ಜಿಲ್ಲೆ ಕಾಗವಾಡದ ಪ್ಯಾಟ್ಸನ್ ರೋಡ್ರಿಗ್ಸ್ ಅವರನ್ನು ಹತ್ಯೆ ಮಾಡಿರುವ ಘಟನೆಗೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತೀವೃ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ಸಂತಾಪ ಸೂಚಿಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಉದ್ಯೋಗವನ್ನು ಅರಸಿಕೊಂಡು ಹೋಗಿದ್ದ ಅಮಾಯಕ ವ್ಯಕ್ತಿಗಳನ್ನು ಬರ್ಬರವಾಗಿ ಕಗ್ಗೊಲೆಗೈದಿರುವ ಘಟನೆಯು ಹೇಡಿಗಳ ಕೃತ್ಯವಾಗಿದೆ. ಮನುಕುಲಕ್ಕೆ ಕಳಂಕ ತರುವಂತಹ ಇಂತಹ ಘಟನೆಗಳು ತೀವೃ ಖಂಡನಾರ್ಹ ಎಂದು ಹೇಳಿದ್ದಾರೆ. ಪ್ಯಾಟ್ಸನ್ ಅವರ ಈ ದುರಂತ ಅಂತ್ಯಕ್ಕೆ ಕಾರಣರಾದವರನ್ನು ಅಪಘಾನಿಸ್ತಾನ ಸರ್ಕಾರವು ಕೂಡಲೇ ಪತ್ತೇ ಹಚ್ಚಿ, ಶಿಕ್ಷಿಸಬೇಕು. ಕೇಮದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ಇಂತಹ ಘಟನೆಗಳು ಮರುಕಳಿಸದಂತೆ ಆ ದೇಶದ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ ಆಗ್ರಹ ಪಡಿಸಬೇಕು ಎಂದಿದ್ದಾರೆ ದೇಶಪಾಂಡೆ. ಪ್ಯಾಟ್ಸನ್ ಸಾವಿನಿಂದ ಉಂಟಾಗಿರುವ ದುಃಖವನ್ನು ಭರಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತನು ಆ ಕುಟುಂಬ ವರ್ಗದವರಿಗೆ ನೀಡಲಿ ಮತ್ತು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಸಂತಾಪ ಸೂಚಿಸಿರುವ ಸಚಿವರು ಇಂತಹ ಸಂಕಷ್ಟದ ಸಂದರ್ಭದಲ್ಲಿ ಇಡಿ ಸಮಾಜ ಪ್ಯಾಟ್ಸನ್ ಕುಟುಂಬದ ಬೆಂಬಲಕ್ಕೆ ನಿಲ್ಲಬೇಕು ಎಂದು ಸಚಿವರು ವಿನಂತಿಸಿದ್ದಾರೆ.
Leave a Comment