ಹಳಿಯಾಳ:- ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಸೇವಾ ಭದ್ರತೆ ಕೂಡ ನೀಡಲಾಗುತ್ತಿಲ್ಲ ಮಾತ್ರವಲ್ಲದೇ ಕನ್ನಡ ಭಾಷೆ ಮಾತನಾಡುವವರನ್ನು ಕಡೆಗಣಿಸಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಗುರುವಾರ ಸಾಯಂಕಾಲ ಈ ಕಾರ್ಖಾನೆಯಲ್ಲಿ ನಡೆದ ಅವಘಡದಲ್ಲಿ ಓರ್ವ ಯುವಕ ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಪ್ಯಾರಿ ಕಂಪೆನಿಯಲ್ಲಿ ಪ್ರೋಮೊಟೆಕ್ ಕಂಪೆನಿಯವರ ಬಳಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಇವರಾಗಿದ್ದು ಕ್ರೇನ್ ಮೂಲಕ ಮಾಡಬೇಕಾದ ಕೇಲಸವನ್ನು ಒತ್ತಾಯ ಪೂರ್ವಕವಾಗಿ ಕಾರ್ಮಿಕರಿಂದ ಮಾಡಿಸಿದ್ದೇ ಅವಘಡಕ್ಕೆ ಕಾರಣವಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಅಲ್ಲದೇ ಕಳೆದ 7 ತಿಂಗಳ ಹಿಂದೆ ಮೃತಪಟ್ಟಿದ್ದ ಇನ್ನೊರ್ವ ಕಾರ್ಮಿಕ ಗುರುಸಿದ್ದಯ್ಯಾ ಹಿರೇಮಠ ಅವರಿಗೆ ಈವರೆಗೆ ಕಂಪೆನಿಯವರು ಪರಿಹಾರ ನೀಡದೆ ಆತನ ಕುಟುಂಬ ಸಂಕಷ್ಟದಲ್ಲಿದೆ ಎಂದು ಆರೋಪಿಸಿರುವ ಕಾರ್ಮಿಕರು ಕಂಪೆನಿಯಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ಇರದೆ ತೆಲಗು, ತಮಿಳು ಭಾಷೆ ಮಾತನಾಡುವ ಹೊರಗಿನವರಿಗೆ ಪ್ರಾಧಾನ್ಯತೆ ನೀಡಲಾಗುತ್ತಿದ್ದು ಸ್ಥಳೀಯ ಕಾರ್ಮಿಕರನ್ನು ಕೀಳಾಗಿ ಕಾಣಲಾಗುತ್ತಿದೆ. ಹೆಚ್ಚುವರಿ ಕೆಲಸ ಮಾಡಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ ಇದನ್ನು ಪ್ರತಿಭಟಿಸಿದರೇ ಕೆಲಸದಿಂದ ಕಿತ್ತೊಗೆಯುವ ಬೇದರಿಕೆಯನ್ನು ಹಾಕಲಾಗುತ್ತಿದೆ ಎಂದು ಬಹಿರಂಗವಾಗಿ ಗಂಭೀರ ಆರೋಪ ಮಾಡಿದರು.
ಶುಕ್ರವಾರ ಕಂಪೆನಿಯ 150ಕ್ಕೂ ಹೆಚ್ಚು ಕಾರ್ಮಿಕರು ಮೃತ ಕಾರ್ಮಿಕ ರಾಘವೇಂದ್ರನ ಶವಸಂಸ್ಕಾರದ ಬಳಿಕ ನೇರವಾಗಿ ಹಳಿಯಾಳ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಕಂಪೆನಿಯ ವರ್ತನೆಯನ್ನು ಖಂಡಿಸಿದರು. ಬಳಿಕ ತಹಶೀಲ್ದಾರ್ ವಿದ್ಯಾಧರ ಹಾಗೂ ಪೋಲಿಸ್ ಇಲಾಖೆಗೆ ತೆರಳಿ ಡಿವೈಎಸ್ಪಿ ಮೋಹನಪ್ರಸಾದ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ 10 ಅಂಶಗಳನ್ನು ಉಲ್ಲೇಖಿಸಲಾಗಿದ್ದು ಎಲ್ಲಾ ಕಾರ್ಮಿಕರ ಬೇಡಿಕೆ ಪ್ರಕಾರ ಕಂಪನಿಯ ಒಳಗಡೆ ಒಂದೆ ಕಂಪೆನಿಯ ಕೆಲಸಗಾರ ಇರತಕ್ಕದ್ದು(ಪ್ರಮೋಟಿಕ್ ಅಥವಾ ಪ್ಯಾರಿ), ಕಾರ್ಮಿಕರ ಕನಿಷ್ಠ ವೇತನ ಜಾರಿಯಾಗಬೇಕು, ಹುದ್ದೇಗೆ ಅನುಸಾರವಾಗಿ ಕೆಲಸ ನಿರ್ವಹಿಸಲು ಅನುಮತಿ ನೀಡಬೇಕು, ವಯಸ್ಸು ಮತ್ತು ಕೆಲಸದ ಅನುಭವದ ಮೇಲೆ ವೇತನ ನಿಗದಿ ಪಡಿಸಬೇಕು. ಗುತ್ತಿಗೆದಾರರಿಗೆ ಕೊಡುವ ಕೆಲಸಗಳನ್ನು ಕಂಪೆನಿಯ ಕಾರ್ಮಿಕರಿಗೆ ನೀಡಕೂಡದು, 5ರಿಂದ 6 ಜನರು ಮಾಡುವ ಗುಂಪು ಕೆಲಸವನ್ನು ಕೇವಲ 2ರಿಂದ 3 ಜನರಿಗೆ ನಿರ್ವಹಿಸಲು ಒತ್ತಾಯಿಸುತ್ತಿರುವುದಕ್ಕೆ ಕಡಿವಾಣ ಹಾಕಬೇಕು.
ಹೆಚ್ಚಿನ ಕಾರ್ಮಿಕರ ಭರ್ತಿ ಮಾಡಬೇಕು, ಅನಾಹುತವಾದ ವ್ಯಕ್ತಿಗೆ ಒಂದು ದಿನ ಸಂಬಳ ಕಡ್ಡಾಯವಾಗಿ ಅವರ ಕುಟುಂಬಕ್ಕೆ ಕೊಡಬೇಕು, ಮೇಲಾಧಿಕಾರಿಗಳು ಒತ್ತಾಯಪೂರ್ವಕವಾಗಿ ಹೆಚ್ಚುವರಿ ಕೆಲಸ ಮಾಡಿಸಿಕೊಳ್ಳುತ್ತಿರುವುದನ್ನು ತಡೆಯಬೇಕು ಹಾಗೂ ಎಲ್ಲಾ ಕಾರ್ಮಿಕರಿಗೆ ಇಎಸ್ಐ ಸೌಲಭ್ಯ ದೊರೆಯಬೇಕೆಂದು ಆಗ್ರಹಿಸಲಾಗಿದೆ.
ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಗುತ್ತಿಗೆದಾರ ಕಂಪೆನಿಗಳ 200 ಕಾರ್ಮಿಕರ ಸಹಿಯನ್ನೊಳಗೊಂಡ ಮನವಿಯ ಪ್ರತಿಗಳನ್ನು ಸಚಿವ ಆರ್.ವಿ.ದೇಶಪಾಂಡೆ, ಎಮ್ಎಲ್ಸಿ ಎಸ್.ಎಲ್.ಘೋಟ್ನೇಕರ, ರಾಜ್ಯ ಸರ್ಕಾರ, ಕಾರ್ಮಿಕ ಇಲಾಖೆ, ಕೈಗಾರಿಕಾ ಮಂತ್ರಿಗಳು, ಜಿಲ್ಲಾಧಿಕಾರಿ ಸೇರಿದಂತೆ ಇತರ ಹಿರಿಯ ಇಲಾಖೆ ಅಧಿಕಾರಿಗಳಿಗೆ ಮನವಿಯ ಪ್ರತಿಗಳನ್ನು ರವಾನಿಸಲಾಗಿದೆ.
ಸಿಐಟಿಯು ಸಂಘಟನೆಯ ಮುಖಂಡ ಡಿ ಸ್ಯಾಮಸನ್ ಕಾರ್ಮಿಕರ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
Leave a Comment