ಹಳಿಯಾಳ : ರಾಜ್ಯದಲ್ಲಿ ಭೀಕರ ಬರಗಾಲವು ಆವರಿಸಿದ್ದು ಮುಂಗಾರಿನಲ್ಲಿ 100 ಮತ್ತು ಹಿಂಗಾರಿನಲ್ಲಿ 156 ತಾಲೂಕುಗಳು ಬರಗಾಲದಿಂದ ತತ್ತರಿಸುತ್ತಿವೆ. ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಒಟ್ಟೂ 2436 ಕೋಟಿ ರೂಗಳ ಪ್ರಸ್ತಾವಣೆ ಕಳುಹಿಸಲಾಗಿದ್ದು ಇದರಲ್ಲಿ 950 ಕೋಟಿ ಮಂಜೂರಾಗಿ ರಾಜ್ಯ ಸರ್ಕಾರದ ಕೈ ಸೇರಿದ್ದು ಇನ್ನೂಳಿದ ಹಣವು ಮುಂದಿನ ದಿನಗಳಲ್ಲಿ ಬರುವ ವಿಶ್ವಾಸವನ್ನು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವ್ಯಕ್ತಪಡಿಸಿದರು.
ಪಟ್ಟಣದ ರುಡಸೆಟ್ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು 156 ತಾಲೂಕುಗಳ ಬರಗಾಲವನ್ನು ಅಧ್ಯಯನ ಮಾಡಲು ಕೇಂದ್ರದ ತಂಡವು ಆಗಮಿಸಿ ಸಮೀಕ್ಷೆ ಮಾಡುವುದರ ಜೊತೆಗೆ ಅದರ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದೆ ಎಂದರು.
ಬರಗಾಲದ ಕಾರಣ ಗ್ರಾಮಾಂತರ ಭಾಗದ ಹಾಗೂ ಅರಣ್ಯದಂಚಿನ ಜನರು, ಜಾನುವಾರುಗಳಿಗೆ ಹಾಗೂ ವನ್ಯ ಜೀವಿಗಳಿಗೆ ಸಹ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ನೀರಿನ ಸಮಸ್ಯೆ ಇದ್ದಲ್ಲಿ ಅವಶ್ಯಕತೆ ಕಂಡು ಬಂದಲ್ಲಿ ಹೊಸ ಬೋರವೆಲ್ಗಳನ್ನು ಕೊರೆದು ಆ ಮೂಲಕ ನೀರನ್ನು ದೂರದ ಪ್ರದೇಶಗಳಿಗೆ ಟ್ಯಾಂಕ್ರಗಳ ಮೂಲಕ ಸಾಗಿಸಲು ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ ಇದಕ್ಕಾಗಿ ಕೋಟ್ಯಂತರ ರೂ.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಯಾವ ಭಾಗದಲ್ಲೂ ಸಮಸ್ಯೆಯಾಗದಂತೆ ಕುಡಿಯುವ ನೀರು ಪೊರೈಕೆ , ಜಾನುವಾರುಗಳಿಗೆ ಮೇವು ಸರಬರಾಜು, ಹೊಸ ಕೊಳವೆ ಬಾವಿಗಳ ಸಮೇತ ಪೈಪ್ಲೈನ್ಗಳ ಅಳವಡಿಕೆ, ಖಾಸಗಿ ಬೋರವೆಲ್ದಿಂದ ನೀರು ಪಡೆಯುವುದು ಸೇರಿದಂತೆ ಇನ್ನಿತರ ತುರ್ತು ಕೆಲಸ ಮತ್ತು ಕಾಮಗಾರಿಗಳನ್ನು ಯುದ್ದೋಪಾದಿಯಲ್ಲಿ ನಿರ್ವಹಿಸಲು ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ 600 ಕೋಟಿ ರೂಗಳನ್ನು ಅವರ ಖಾತೆಗಳಿಗೆ ಸಂದಾಯ ಮಾಡಲಾಗಿದೆ ಎಂದ ದೇಶಪಾಂಡೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ, ಜಿಲ್ಲಾಧಿಕಾರಿ, ತಹಶೀಲ್ದಾರ್, ತಾಪಂ ಇಓಗಳಿಗೆ ಸೂಕ್ತವಾದ ನಿದೇರ್ಶನ ನೀಡುವುದರ ಜೊತೆಗೆ ದೂರುಗಳು ಕೇಳಿ ಬಂದಲ್ಲಿ ತಕ್ಷಣ ಕಾರ್ಯಪ್ರವತ್ತರಾಗಿ ಪರಿಹಾರ ನೀಡಲು ಸೂಚಿಸಲಾಗಿದೆ ಎಂದರು.
ಬರಗಾಲ ಪೀಡಿತ ತಾಲೂಕುಗಳಿಗೆ ಜೂನ್ ತಿಂಗಳವರೆಗೂ ಕುಡಿಯುವ ನೀರು ಮತ್ತು ಮೇವು ಇನ್ನಿತರ ಸೌಲಭ್ಯಗಳನ್ನು ನೀಡಲು ನಿರ್ಧರಿಸಲಾಗಿದೆ. ಜನರು ಉದ್ಯೋಗಕ್ಕಾಗಿ ಗುಳೆ ಹೋಗಬಾರದು ಎಂದು ವಿನಂತಿಸಿದ ಅವರು ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡಲು ತೀರ್ಮಾನಿಸಲಾಗಿದೆ. ಕಳೆದ ಬಾರಿ 8 ಕೋಟಿ ಮಾನವ ದಿನಗಳನ್ನು ಈ ಬಾರಿ 10 ಕೋಟಿಗೆ ಎರಿಸಲಾಗಿದೆ ಎಂದು ಅವರು ಹೇಳಿದರು.
ನಾನು ಹಾಗೂ ಮಗನು ಸ್ಪರ್ದಿಸುವುದಿಲ್ಲ :-
ಪತ್ರಕರ್ತರು ಕೇಳಿದ ಪ್ರಶ್ನೇಗೆ ಉತ್ತರಿಸಿದ ದೇಶಪಾಂಡೆ ಮತದಾರರು ದೇವರು ಅವರು ನೀಡುವ ನಿರ್ಣಯಕ್ಕೆ ತಲೆಬಾಗಲೇಬೇಕು. ಲೋಕಸಭಾ ಚುನಾವಣೆಯಲ್ಲಿ ಕೆನರಾ ಕ್ಷೇತ್ರದಿಂದ ತಾವು ಸ್ಪರ್ಧಿಸುವುದಿಲ್ಲ ಎಂದು ಹೈಕಮಾಂಡಗೆ ಸ್ಪಷ್ಟವಾಗಿ ಹೇಳಿದ್ದೇನೆ ಹಾಗೂ ತಮ್ಮ ಮಗ ಪ್ರಶಾಂತ ಕೂಡ ಚುನಾವಣೆಗೆ ಸ್ಪರ್ದಿಸುವ ಇಚ್ಚೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ಗೆ ಬಿಟ್ಟು ಕೊಡಲ್ಲ:-
ಇಗಾಗಲೇ ಮೂವರ ಹೆಸರುಗಳನ್ನು ಹೈಕಮಾಂಡ್ಗೆ ತಿಳಿಸಲಾಗಿದ್ದು ಸೂಕ್ತ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡಗೆ ಬಿಟ್ಟ ವಿಚಾರ. ಜೆಡಿಎಸ್ ನಮ್ಮ ಮಿತ್ರ ಪಕ್ಷ ಆದರೇ ಕೆನರಾ ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿ ಅಷ್ಟೇನು ಇಲ್ಲ ಹಾಗೂ ಬಿಜೆಪಿಗೆ ಪ್ರಭಲ ಸ್ಪರ್ದೆ ನೀಡುವುದು ಕಾಂಗ್ರೇಸ್ ಪಕ್ಷ ಮಾತ್ರ ಆಗಿರುವುದರಿಂದ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಪ್ರಶ್ನೇಯೇ ಬರುವುದಿಲ್ಲ ಎಂದ ದೇಶಪಾಂಡೆ ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ಇರುವ ತನ್ನ ಶಕ್ತಿ ಉಪಯೋಗಿಸಿಕೊಂಡು ಕಾಂಗ್ರೇಸ್ ಅಭ್ಯರ್ಥಿಗೆ ಬೆಂಬಲ ನೀಡಿದರೇ ನಮ್ಮ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದರು. ಸುದ್ದಿಗೊಷ್ಠಿಯಲ್ಲಿ ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್ ಮತ್ತು ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಸುಭಾಶ ಕೋರ್ವೆಕರ ಇದ್ದರು.
Leave a Comment