ಹಳಿಯಾಳ:- ಜುಲೈ ಒಂದನೇ ದಿನಾಂಕದೊಳಗೆ ಉತ್ತರ ಕನ್ನಡ ಜಿಲ್ಲೆಯೊಳಗೆ ಶಿಕ್ಷಕರ ಕೊರತೆ ನಿವಾರಣೆ ಆಗಬೇಕು. ಎಲ್ಲಿಯೂ ಶಿಕ್ಷಕರ ಕೊರತೆ ಬಗ್ಗೆ ದೂರುಗಳು ಕೇಳಿ ಬರಬಾರದು ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನೀಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ದಿವಾಕರ ಶೆಟ್ಟಿ ಅವರಿಗೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕಟ್ಟು ನಿಟ್ಟಿನ ಆದೇಶ ನೀಡಿದರು.
ಜಿಪಂ, ಸಾರ್ವಜನೀಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಶನಿವಾರ ಮುರ್ಕವಾಡ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಉಧ್ಘಾಟನೆ, ಎಲ್.ಕೆಜಿ ವಿಭಾಗ, 1ನೇ ತರಗತಿಯ ಆಂಗ್ಲ ಮಾಧ್ಯಮ ಶಾಲೆ, ಹೊಸ ಕಟ್ಟಡಕ್ಕೆ ಅಡಿಗಲ್ಲು, ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಎಸಿಸಿ ಕಂಪೆನಿಯಿಂದ ನಿರ್ಮಿತ ನೂತನ ಶೌಚಾಲಯ ಕಟ್ಟಡ ಉಧ್ಘಾಟನೆ ಸೇರಿದಂತೆ ವನಮಹೋತ್ಸವ ಕಾರ್ಯಕ್ರಮ ನೆರವೆರಿಸಿ ಬಳಿಕ ನಡೆದ ಸಮಾರಂಭವನ್ನುದ್ದೇಶಿಸಿ ಸಚಿವರು ಮಾತನಾಡಿದರು.
ಪ್ರಸ್ತುತ ವಿಶ್ವ ಮಾರುಕಟ್ಟೆಯಲ್ಲಿ ಸ್ಪರ್ದೆಗಳು ನಡೆಯುತ್ತಿವೆ ಹೀಗಾಗಿ ಭಾಷಾ ಪ್ರಾವಿಣ್ಯತೆ ಹೊಂದಬೇಕು. ಕನ್ನಡ ಭಾಷೆಯೊಂದಿಗೆ ಆದಷ್ಟು ಹೆಚ್ಚು ಭಾಷೆಗಳನ್ನು ಕಲಿಯಬೇಕು. ಭಾಷಾ ತಾರತಮ್ಯ ಹಾಗೂ ವಿರೋಧ ಸರಿಯಲ್ಲ ಎಂದ ದೇಶಪಾಂಡೆ ವಿದ್ಯೆ ಸಂಪಾದನೆ ಮಾಡದವರಿಗೆ ಸಮಾಜದಲ್ಲಿ ಗೌರವವಿಲ್ಲ ಎನ್ನುವ ಅಂಶವನ್ನು ಎಲ್ಲರೂ ಮನಗೊಂಡು ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕೆಂದು ಕರೆ ನೀಡಿದರು.
ಯಾವ ರಾಜ್ಯ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳೊಂದಿಗೆ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಒತ್ತು ನೀಡುತ್ತದೆಯೋ ಆ ರಾಜ್ಯ ಅಭಿವೃದ್ದಿ ಹೊಂದುತ್ತದೆ. ಆದ ಕಾರಣ ನಾವು ಜಿಲ್ಲೆಯಲ್ಲಿ ಎಲ್ಲಿಯೂ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕೊರತೆ ಆಗಲು ಆಸ್ಪದ ನೀಡಿಲ್ಲ ಎಂದ ಅವರು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಜನರಲ್ಲಿ ರಾಜಕೀಯ ಪ್ರಜ್ಞೆಯು ಇರುವುದು ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರು ಮತ್ತು ಪಾಲಕರ ನಡುವೆ ಉತ್ತಮ ಸಂಬಂಧಗಳಿರಬೇಕು ಜೊತೆಗೆ ವಿದ್ಯಾರ್ಥಿಗಳ ಪ್ರಗತಿ ವಿವರವನ್ನು ಶಿಕ್ಷಕರು ಪಾಲಕರಿಗೆ ತಿಳಿಸಬೇಕು ಹಾಗೂ ಪಾಲಕರು ಸಹಕರಿಸಬೇಕೆಂದು ಸಲಹೆ ನೀಡಿದರು. ಸ್ವಚ್ಚತೆ ಜನಸಾಮಾನ್ಯರ ಕಾರ್ಯಕ್ರಮವಾಗಬೇಕು ಎಂದ ಸಚಿವರು ಎಲ್ಲೆಡೆ ಸ್ವಚ್ಚತಾ ಆಂದೋಲನ ನಡೆಸುವಂತೆ ಕರೆ ನೀಡಿದರು.
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರಾಜ್ಯದ ಹಲವು ತಾಲೂಕುಗಳಲ್ಲಿ ಬರಗಾಲ ಛಾಯೆ ಮತ್ತೇ ಮುಂದುವರೆದಿರುವ ಕಾರಣ ಜುಲೈ ತಿಂಗಳಿಂದ ಮೊಡ ಬಿತ್ತನೆ ಮಾಡಲು ರಾಜ್ಯ ಸಮ್ಮಿಶ್ರ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದ ಸಚಿವ ದೇಶಪಾಂಡೆ ಮಳೆರಾಯನ ಕೃಪೆಗಾಗಿ ಎಲ್ಲರೂ ದಿನಂಪ್ರತಿ ಶಿವನ ಆರಾಧನೆ ಮಾಡಿರಿ, ಮಳೆಗಾಗಿ ನಿರ್ಮಲ ಮನಸ್ಸಿನಿಂದ ಪ್ರಾರ್ಥಿಸಿರಿ ಎಂದು ಮನವಿ ಮಾಡಿಕೊಂಡರು.
ಹಳಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಅಥಿತಿಗಳನ್ನು ಸ್ವಾಗತಿಸಿ ಮುರ್ಕವಾಡ ಸರ್ಕಾರಿ ಶಾಲೆಗಳ ಅಭಿವೃದ್ದಿಗಾಗಿ ಮಂಜೂರಾದ ಅನುದಾನದ ಬಗ್ಗೆ ವಿವರ ನೀಡಿದರು. ಈ ಶಾಲೆಯಲ್ಲಿ ಎಲ್ಕೆಜಿ ಯಿಂದ ಪಿಯುಸಿವರೆಗೆ ಒಂದೆ ಆಡಳಿತದಡಿ ಶಿಕ್ಷಣ ನೀಡಲಾಗುತ್ತಿದ್ದು 950 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆಂದರು.
ವೇದಿಕೆಯಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ಮಹೇಶ್ರೀ ಮಿಶ್ಯಾಳೆ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಮುರ್ಕವಾಡ ಗ್ರಾಪಂ ಅಧ್ಯಕ್ಷ ಮಾರುತಿ ಕಮ್ಮಾರ, ಅಕ್ರಮ ಸಕ್ರಮ ಸಮೀತಿ ಅಧ್ಯಕ್ಷ ಸುಭಾಷ ಕೊರ್ವೆಕರ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ತಾಪಂ ಇಓ ರಮೇಶ ಕುರಿಯವರ, ಪ್ರಮುಖರಾದ ವೈಪಿ ಕೊರ್ವೆಕರ, ಪಿಶಪ್ಪಾ ಶಿಂಧೆ, ಶ್ರೀಪಾದ ಪಾಟಿಲ, ಪ್ರಚಾರ್ಯ ಪ್ರಮೋದ ನಾಯಕ ಇದ್ದರು.
Leave a Comment