
ಹಳಿಯಾಳ:- ಸಾಗರಮಾಲಾ ಯೋಜನೆಯ ಪ್ರತಿಭಟನೆ ಸಂದರ್ಭದಲ್ಲಿ ಕೆನರಾ ಸಂಸದ ಅನಂತಕುಮಾರ ಹೆಗಡೆ ಮತ್ತು ಶಾಸಕಿ ರೂಪಾಲಿ ನಾಯ್ಕರ ಭಾವಚಿತ್ರಗಳಿಗೆ ಮಸಿ ಬಳಿದು, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ತೀವೃವಾಗಿ ಖಂಡಿಸುವುದಾಗಿ ಹೇಳಿದ ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಎಲ್ಲರ ಹಕ್ಕು ಆದರೇ ನಿಂದನೆ ಮಾಡುವುದು ಸರಿಯಲ್ಲ ಎಂದರು.
ಪಟ್ಟಣದಲ್ಲಿ ಸಂಕ್ರಾಂತಿ ಹಬ್ಬದ ದಿನ ಬಿಜೆಪಿ ಪಕ್ಷದವರು ಕರೆದ ತುರ್ತು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದಾಗ ಡಿಸೆಂಬರ್ 2017ರಲ್ಲೇ ಸಾಗರಮಾಲಾ ಯೋಜನೆಗೆ ಶಿಲಾನ್ಯಾಸ ಮಾಡಲಾಗಿತ್ತು. ಅಂದು ಕಾರವಾರಕ್ಕೆ ಸತೀಶ ಸೈಲ್ ಶಾಸಕರಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಲ್ಲದೇ ಈ ಯೋಜನೆಯಲ್ಲಿ ಕಾರವಾರ ಕೈತಪ್ಪಿ ಮಂಗಳೂರು ಸೇರ್ಪಡೆಯಾದಾಗ ಇದೇ ಸೈಲ್ ಸಿದ್ದರಾಮಯ್ಯನವರ ಮೇಲೆ ಒತ್ತಡ ಹಾಕಿ ಸಂಸದ ಅನಂತಕುಮಾರ ಹೆಗಡೆ ಅವರ ಪ್ರಯತ್ನದಿಂದ ಕಾರವಾರಕ್ಕೆ ಯೋಜನೆ ಮಂಜೂರಿ ಮಾಡಿಸಿಕೊಂಡಿದ್ದರು ಆದರೇ ಇಂದು ಮುಗ್ದ ಮೀನುಗಾರರ ದಿಕ್ಕು ತಪ್ಪಿಸಿ ಯೋಜನೆ ವಿರೋಧಿಸುವ ನಾಟಕವಾಡುತ್ತಿರುವುದು ಇವರ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದರು.
ಸಾಗರಮಾಲಾ ಯೋಜನೆ (ದ ಗ್ರೇಟ್ ಗ್ರೌಂಡ್ ಪೊರ್ಟ) ಅನುಷ್ಠಾನದಿಂದ ಬಂದರು ಅಭಿವೃದ್ದಿಗೊಂಡು ಉತ್ತರ ಕರ್ನಾಟಕದ ಚಿತ್ರಣವೇ ಬದಲಾಗಲಿದೆ. ಉತ್ತರ ಕನ್ನಡ ಜಿಲ್ಲೆ ಸರಕು ಸಾಗಾಣೆಯ ಹೆಬ್ಬಾಗಿಲು ಆಗಲಿದೆ. ಇಲ್ಲಿ 5 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಾಣೆ ಆಗುವ ಮೂಲಕ ಜಿಲ್ಲೆ ಸಂಪರ್ಕಿಸುವ ಎಲ್ಲ ಹೆದ್ದಾರಿಗಳು ಅಭಿವೃದ್ದಿಗೊಳ್ಳುತ್ತವೆ. ಈ ಮೂಲಕ ಪ್ರವಾಸೋಧ್ಯಮ ಬೆಳೆಯುತ್ತದೆ. ಜಿಲ್ಲೆಯ ಯುವಕರಿಗೆ ಹೆರಳ ಉದ್ಯೋಗಾವಕಾಶ ದೊರೆಯಲಿದೆ ಎಂದು ಸುನೀಲ್ ಹೆಗಡೆ ವಿವರಿಸಿದರು.

ಬಿಜೆಪಿ ಪಕ್ಷ ಜನರಿಗೆ ತೊಂದರೆ ಕೊಡುವ ಯಾವುದೇ ಯೋಜನೆ ಜಾರಿಗೆ ತರುವುದಿಲ್ಲ. ಮೀನುಗಾರರನ್ನು ಆರ್ಥಿಕವಾಗಿ ಮುಂದೆ ತರುವುದು, ಈ ಸಮುದಾಯವನ್ನು ಅಭಿವೃದ್ದಿ ಪಡಿಸುವುದು ಜೊತೆಗೆ ಅವರ ರಕ್ಷಣೆಗೆ ಬಿಜೆಪಿ ಪಕ್ಷ ಸದಾ ಬದ್ದವಾಗಿದೆ ಎಂದು ಸ್ಪಷ್ಟಪಡಿಸಿದ ಸುನೀಲ್ ಹೆಗಡೆ ಅವರು ಕಾರವಾರದಿಂದ ಹೊನ್ನಾವರ ವರೆಗೆ ಸಾಗರಮಾಲಾ ಯೋಜನೆಯಿಂದ ಬಂದರು ಅಭಿವೃದ್ದಿಗೊಂಡು ಉದ್ಯೋಗಾವಕಾಶಗಳು ದೊರೆತು ಜನರು ಆರ್ಥಿಕವಾಗಿ ಮುಂದೆ ಬರಲಿದ್ದಾರೆಂದು ಹೇಳಿದರು.
ತಾನೇ ಶಾಸಕನಿದ್ದಾಗ ಯೋಜನೆ ಆರಂಭಿಸಿದ್ದ ಸೈಲ್ ಅಂದು ವಿರೋಧ ವ್ಯಕ್ತಪಡಿಸದೆ ಇಂದು ಗುತ್ತಿಗೆದಾರರಿಂದ ಕಮಿಷನ್ಗಾಗಿ ಮುಗ್ದ ಜನರನ್ನು ಬಲಿಪಶು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆಪಾದನೆ ಮಾಡಿದ ಹೆಗಡೆ ಸಾಗರಮಾಲಾ ಯೋಜನೆಯಿಂದ ಕಾರವಾರದ ಸೌಂದರ್ಯ ಹಾಳಾಗುವ ಪ್ರಶ್ನೆಯೇ ಇಲ್ಲ, ಎಲ್ಲ ಸಾಧಕ ಬಾಧಕಗಳು ಹಾಗೂ ಪರಿಸರ ಸಂರಕ್ಷಣೆ ವಿವಿಧ ಎಲ್ಲ ಆಯಾಮಗಳಲ್ಲಿ ಸುಧೀರ್ಘ ಚಿಂತನೆ ಮಾಡಿಯೇ ಸರ್ಕಾರ ಕಾಮಗಾರಿಗೆ ಹಸಿರು ನಿಶಾನೆ ತೊರಿಸಿದೆ ಎಂದರು.
ಮಿನುಗಾರರು ಹಾಗೂ ಸ್ಥಳೀಯ ಜನರು ಯೋಜನೆಯ ಸಂಪೂರ್ಣ ವಿವರವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಅದನ್ನು ಬಿಟ್ಟು ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ದ್ವಿಮುಖ ನೀತಿ ತೊರುತ್ತಿರುವ ಸೈಲ್, ಆನಂದ ಅಸ್ನೋಟಿಕರ ಇತರರ ಮಾತು ಕೇಳಿ ತಪ್ಪು ಕಲ್ಪನೆ ಹೊಂದಬಾರದು ಎಂದು ಮನವಿ ಮಾಡಿದರು.
ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಗಣಪತಿ ಕರಂಜೆಕರ, ಶಿವಾಜಿ ನರಸಾನಿ, ಅನಿಲ ಮುತ್ನಾಳ್, ಸಂತೋಷ ಘಟಕಾಂಬಳೆ, ಉದಯ ಹೂಲಿ ಮೊದಲಾದವರು ಇದ್ದರು.
Leave a Comment