ಹೊನ್ನಾವರ – ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿರುವ ಗ್ರಾಮಪಂಚಾಯತಗಳ ಚುನಾವಣೆ ಮೀಸಲಾತಿ ಪ್ರಕಟವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ದಿನಾಂಕವೂ ನಿಗಧಿಯಾಗಲಿದೆ. ಈಗಾಗಲೇ ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳಲು ಭರ್ಜರಿ ತಯಾರಿ ನಡೆಸುತ್ತಿರುವ ಸಂಭಾವ್ಯ ಅಭ್ಯರ್ಥಿಗಳಲ್ಲಿ ಹಲವರು ಹಿಂದೆ ಚುನಾಯಿತರಾಗಿದ್ದರವರ ವೀಕ್ನೆಸ್ ಹುಡುಕಲು ಆರ್.ಟಿ.ಐ ಮೊರೆ ಹೋಗುತ್ತಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.
ಸಕ್ರೀಯ ರಾಜಕಾರಣದ ಮೊದಲ ಮೆಟ್ಟಿಲು ಎಂದೇ ಕರೆಸಿಕೊಳ್ಳುವ ಗ್ರಾಮಪಂಚಾಯತ ಚುನಾವಣೆಯಲ್ಲಿ ಯಾವುದೇ ಪಕ್ಷದ ಚಿಹ್ನೆಯಡಿಯಲ್ಲಿ ಸ್ಪರ್ದಿಸಲು ಸಾಧ್ಯವಿಲ್ಲ. ಪಕ್ಷ ಅಥವಾ ಸಿದ್ಧಾಂತಗಳಿಗಿoತ ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸೇ ಚುನಾವಣೆಯಲ್ಲಿ ನಿರ್ಣಾಯಕವಾಗುವ ಸಾಧ್ಯತೆ ಅಧಿಕವಾಗಿರುವುದರಿಂದ ಎದುರಾಳಿಯ ಬಲ ಹಾಗೂ ದೌರ್ಬಲ್ಯವವನ್ನು ಲೆಕ್ಕಹಾಕಿ ಅದಕ್ಕೆ ತಕ್ಕ ಪ್ರತಿ ತಂತ್ರ ಹೆಣೆಯುವುದು ಅತೀ ಅಗತ್ಯ. ಇದೇ ಲೆಕ್ಕಾಚಾರದಲ್ಲಿಯೇ ಹೊಸದಾಗಿ ಅದೃಷ್ಟಪರೀಕ್ಷೆಗೆ ಮುಂದಾಗಲಿರುವ ಅನೇಕರು ಹಿಂದಿನ ಅವಧಿಯಲ್ಲಾದ ಅಭಿವೃದ್ಧಿ ಕೆಲಸಗಳ ಮಾಹಿತಿ ಕೊಡಿ ಎಂದು ಪಂಚಾಯತಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದಿನ ಅವಧಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ ಸದಸ್ಯರಿಗೆ ಆತಂಕವಿಲ್ಲವಾದರೂ ಈ ದಿಡೀರ್ ಬೆಳವಣಿಗೆಯಿಂದ ಐದು ವರ್ಷ ಉಂಡಾಡಿಗುoಡರಾಗಿ ಯಾವುದೇ ಕೆಲಸ ಮಾಡದೇ ತಮ್ಮ ಅವಧಿ ಮುಗಿಸಿದ ಸದಸ್ಯರಿಗೆ ಹಾಗೂ ಕೆಲಸ ಮಾಡಿದಂಗೆ ಮಾಡಿ ಕಳಪೆಕಾಮಗಾರಿಯಿಂದ ತಮ್ಮ ಜೇಬಿನ ಭಾರ ಹೆಚ್ಚಿಸಿಕೊಂಡವರೆಲ್ಲಾ ಒಳಗೊಳಗೇ ಬೆವರುತ್ತಾ, ಕುದಿಯುತ್ತಾ ಇದ್ದಾರೆ ಎನ್ನುವುದು ಅನೇಕ ಕಡೆ ಕೇಳಿಬರುತ್ತಿರುವ ಮಾತಾಗಿದೆ. ತಾಲೂಕಿನಲ್ಲಿ ನಡೆಯುತ್ತಿರುವ ಈ ಅನಿರೀಕ್ಷಿತ ಬೆಳವಣಿಗೆ ಗ್ರಾಮಪಂಚಾಯತ ಚುನಾವಣೆಯ ಬಗೆಗಿದ್ದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಯಾವ ಸದಸ್ಯರೂ ಎತ್ತುವುದಿಲ್ಲ ಭ್ರಷ್ಟಾಚಾರದ ಸೊಲ್ಲು..ಯಾಕೆಂದರೆ ಇಲ್ಲಿ ಸರ್ವರಿಗೂ ಸಮ ಪಾಲು..!
ಗ್ರಾಮಪಂಚಾಯತ ಚುನಾವಣೆ ನಡೆದು ಅಭ್ಯರ್ಥಿಗಳು ಆಯ್ಕೆಯಾದಮೇಲೆ ಅಧ್ಯಕ್ಷರ ಆಯ್ಕೆಯಾಗುವ ವರೆಗೆ ಮಾತ್ರ ರಾಜಕೀಯ ತುರುಸು ಇರುತ್ತದೆ. ಅಧ್ಯಕ್ಷರ ಆಯ್ಕೆಯಾದ ನಂತರ ಪಕ್ಷ ರಾಜಕಾರಣ ಮರೆಯಾಗುತ್ತದೆ. ಹೆಸರಿಗೆ ಮಾತ್ರ ಒಬ್ಬೊಬ್ಬರು ಒಂದೊoದು ಪಕ್ಷದ ಬೆಂಬಲಿಗರಾಗಿರುತ್ತಾರೆ ಬಿಟ್ಟರೆ ಸರ್ಕಾರದಿಂದ ಬಂದ ಅನುದಾನವನ್ನೆಲ್ಲಾ ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಾರೆ. ಇದು ಇಡೀ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಬೆಳವಣಿಗೆ ಅನ್ನಿಸಿದರೂ ಅದು ತೋರಿಕೆ ಮಾತ್ರ. ಯಾವುದಾದರೂ ಒಬ್ಬ ಸದಸ್ಯನಿಗೆ ಪಾಲು ಕಡಿಮೆಯಾದರೆ ಆತ ಉಳಿದವರು ಮಾಡಿದ ಕಳಪೆಕೆಲಸಗಳನ್ನೆಲ್ಲಾ ಊರಿಗೆ ಡಂಗುರ ಸಾರುತ್ತಾನೆ ಎನ್ನುವ ಭಯಕ್ಕೆ ಈ ಪಾಲಿಸಿ ಎನ್ನುವುದು ಹಲವರ ಗುಮಾನಿ, ಇದರಿಂದಾಗಿಯೇ ಗ್ರಾಮಪಂಚಾಯತಗಳಲ್ಲಿ ನಡೆಯುವ ಬಹುತೇಕ ಹಗರಣಗಳು ಹೊರಗೇ ಬರುವುದಿಲ್ಲ ಎನ್ನುವ ಆರೋಪವೂ ಇದೆ.
ಗೆದ್ದವರೆಲ್ಲಾ ನಮ್ಮವರಲ್ಲ ಸೋತವರೆಲ್ಲಾ ನಿಮ್ಮವರಲ್ಲ
ಗ್ರಾಮಪಂಚಾಯತ ಚುನಾವಣೆಯಲ್ಲಿ ಪಕ್ಷ ರಾಜಕಾರಣ ಇಲ್ಲವೆನ್ನುವುದು ನಿಜವಾದರೂ ಪ್ರತಿಯೊಂದು ಪಕ್ಷಕ್ಕೂ ತಳಮಟ್ಟದಲ್ಲಿ ಗಟ್ಟಿಯಾದ ನೆಲೆ ಕಂಡುಕೊಳ್ಳಲು ತಮ್ಮ ಪಕ್ಷದ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವುದನ್ನು ಯಾರೂ ಅಲ್ಲಗೆಳೆಯಲಾರರು. ಆದರೆ ಚುನಾವಣೆಗೂ ಮೊದಲು ಯಾವುದೇ ಪಕ್ಷದ ಬೆಂಬಲಿಗರಾಗಿ ಕಣಕ್ಕಿಳಿದರೂ ಗೆದ್ದನಂತರ ಅಧಿಕಾರದಲ್ಲಿರುವ ಪಕ್ಷ ಹಾಗೂ ಶಾಸಕರ ಜೊತೆ ಗುರುತಿಸಿಕೊಳ್ಳುವವರ ಸಂಖ್ಯೆ ಪಂಚಾಯತಗಳಲ್ಲಿ ಹೆಚ್ಚಿರುತ್ತದೆ. ಇದರಿಂದ ಆ ಕ್ಷಣಕ್ಕೆ ಪಕ್ಷ ಪ್ರಾಬಲ್ಯ ಮೆರೆದಂತೆ ಕಂಡರೂ ಸಾರ್ವತ್ರಿಕ ಚುನಾವಣೆಗಳು ಎದುರಾದಾಗ ಲೆಕ್ಕಾಚಾರಗಳು ಅದಲುಬದಲಾಗಿರುತ್ತದೆ.
“ಯಾವುದೇ ಪಕ್ಷದ ನಾಯಕರಾದವರು ತಮ್ಮ ಪಕ್ಷದ ಬೆಂಬಲಿಗರನ್ನಾಗಿ ಯಾರನ್ನಾದರೂ ಪಂಚಾಯತ ಚುನಾವಣೆಯಲ್ಲಿ ಕಣಕ್ಕಿಳಿಸುವ ಮುನ್ನ ಆತನ ಪೂರ್ವಾಪರ ನೋಡಿಕೊಂಡು ಕಣಕ್ಕಿಳಿಸಿ. ಯಾಕೆಂದರೆ ಪಂಚಾಯತ ಅಭಿವೃದ್ಧಿಯಾಗಬೇಕು ಆ ಸದಸ್ಯನಲ್ಲ” ಎನ್ನುವ ಸ್ಲೋಗನ್ಗಳು ಈಗಾಗಲೇ ಸದ್ದುಮಾಡುತ್ತಿದೆ”
[ನಮ್ಮ ಪಂಚಾಯತದಲ್ಲೂ ಐದು ವರ್ಷಗಳ ಅಭಿವೃದ್ಧಿ ಕೆಲಸಗಳ ಮಾಹಿತಿ ಕೇಳಿ ಹಲವರು ಆರ್.ಟಿ.ಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಾನು ಅಧ್ಯಕ್ಷನಾಗಿದ್ದ ಐದು ವರ್ಷ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎನ್ನುವ ಆತ್ಮವಿಶ್ವಾಸವಿದೆ ಈ ಬಗ್ಗೆ ಯಾವುದೇ ಅಂಜಿಕೆಯಿಲ್ಲ. ಕೂಡ್ಲ ವಾರ್ಡಿನ ಸದಸ್ಯರು ಆ ಭಾಗಕ್ಕೆ ಮೀಸಲಿಟ್ಟಿದ್ದ ಅನುದಾನವನ್ನು ಐದು ವರ್ಷದಲ್ಲಿ ಒಮ್ಮೆಯೂ ಬಳಸಿಲ್ಲ. ಅವಧಿ ಮುಗಿಯುವ ಹಂತದಲ್ಲಿ ತರಾತುರಿಯಲ್ಲಿ ಎಲ್ಲಾ ಅನುದಾನವನ್ನು ಖರ್ಚುಮಾಡಿ ದುರುಪಯೋಗಮಾಡಿಕೊಳ್ಳಲು ಮುಂದಾಗಿದ್ದರೂ ನಾನು ಅದಕ್ಕೆ ಅವಕಾಶ ನೀಡಿಲ್ಲ. – ಮಾಬ್ಲ ರಾಮ ನಾಯ್ಕ, ಮಾಜಿ ಅಧ್ಯಕ್ಷರು ಗ್ರಾ.ಪಂ.ಖರ್ವಾ]
Leave a Comment