ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ಏಕೈಕ ಹಳಿಯಾಳ ತಾಲೂಕಿನ ಹುಲ್ಲಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಶುಕ್ರವಾರ ರೈತರ ಆಕ್ರೋಶ ಭುಗಿಲೆದ್ದಿತ್ತು, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಹಳಿಯಾಳ ಘಟಕದ ನೇತೃತ್ವದಲ್ಲಿ ನೂರಾರು ರೈತರು 2 ಗಂಟೆಗೂ ಅಧಿಕ ಕಾಲ ರಾಜ್ಯ ಹೆದ್ದಾರಿ ತಡೆದು ಕಾರ್ಖಾನೆ ವಿರುದ್ದ ರೈತರು ಆಕ್ರೋಶ ಹೊರಹಾಕಿದರು.
ಪಟ್ಟಣದ ಯಲ್ಲಾಪುರ ನಾಕಾ ಪ್ರದೇಶದ ರುಡಸೇಟ್ ಸಮೀಪ ಸಕ್ಕರೆ ಕಾರ್ಖಾನೆಗೆ ತೆರಳುವ ಪ್ರಮುಖ ಮಾರ್ಗವನ್ನು ಹಾಗೂ ಹಳಿಯಾಳ-ದಾಂಡೇಲಿ ರಾಜ್ಯ ಹೆದ್ದಾರಿಯನ್ನು ತಡೆದು ರಸ್ತಾ ರೋಖೋ ನಡೆಸಿ ಕಾರ್ಖಾನೆ ವಿರುದ್ದ ಘೋಷಣೆ ಮೊಳಗಿಸಿ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. 2 ಗಂಟೆಗೂ ಅಧಿಕ ಕಾಲ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಲಾದ್ದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು.
ರೈತರ ಪ್ರಮುಖ ಬೇಡಿಕೆಗಳು :- ಹಿಂದಿನ ಪ್ರತಿ ಟನ್ ಕಬ್ಬಿಗೆ 305 ರೂ.ಬಾಕಿ ರೈತರಿಗೆ ಕೊಡಬೇಕು, 2019-20ನೇ ಸಾಲಿನ ಎರಡನೇ ಕಂತಿನ ಬಾಕಿ ಹಣ, ಕಬ್ಬು ಕಟಾವು-ಸಾಗಾಣಿಕೆ(ಎಚ್ಎನ್ಟಿ) ವ್ಯತ್ಯಾಸದ ಹಣ ಹಾಗೂ ಪ್ರಸಕ್ತ ವರ್ಷದ ಕಬ್ಬಿಗೆ ದರ ನಿಗದಿ ಪಡಿಸುವುದು.
ರೈತರ ಪ್ರತಿಭಟನೆಯನ್ನುದ್ದೇಶಿಸಿ ಹಿರಿಯ ರೈತ ಮುಖಂಡ ಎಸ್.ಕೆ. ಗೌಡಾ ಮಾತನಾಡಿ ರೈತರ ಕೊಟ್ಯಂತರ ರೂ. ಬಿಲ್ ಬಾಕಿ ಇಟ್ಟುಕೊಂಡು, ಪ್ರಸಕ್ತ ವರ್ಷದ ಕಬ್ಬಿಗೆ ದರ ನಿಗದಿ ಪಡಿಸದೆ ಕಾರ್ಖಾನೆ ಆರಂಭಿಸುವ ಪ್ರಯತ್ನ ಮಾಡುತ್ತಿರುವುದು ರೈತ ವಿರೋಧಿ ಧೋರಣೆಯಾಗಿದೆ ಅಲ್ಲದೇ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು ರೈತರ ಸಮಸ್ಯೆ ಬಗೆಹರಿಸಲು ವಿಫಲವಾಗಿದ್ದಾರೆಂದು ಕಿಡಿಕಾರಿದರು.
ಕಬ್ಬು ಬೆಳೆಗಾರ ಸಂಘದ ಕಾರ್ಯಧ್ಯಕ್ಷ ಕುಮಾರ ಬೋಬಾಟಿ ಮಾತನಾಡಿ ಮುಗ್ದ ರೈತರನ್ನು ಸದಾಕಾಲ ಮೊಸ ಮಾಡುತ್ತ ಬಂದಿರುವ ಪ್ಯಾರಿ ಕಾರ್ಖಾನೆ ಹಳೆಯ ಬಾಕಿ ನೀಡದೆ ಪ್ರಸಕ್ತ ವರ್ಷದ ಕಬ್ಬಿಗೆ ದರ ನಿಗದಿಪಡಿಸದೆ, ಸರ್ಕಾರದ ನಿರ್ದೇಶನಗಳನ್ನು ಪಾಲಿಸದೆ ಕಾರ್ಖಾನೆ ಆರಂಭಕ್ಕೆ ಪ್ರಯತ್ನಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೀಸಿದರು. ರೈತರ ಬಗ್ಗೆ ನಾಲಿಗೆ ಹರಿಬಿಟ್ಟು ಮಾತನಾಡುವ ಕಂಪೆನಿಯವರು ಗ್ರಾಮಾಂತರ ಭಾಗಕ್ಕೆ ಬರಲಿ ರೈತ ಶಕ್ತಿಯನ್ನು ತೋರಿಸುತ್ತೇವೆ ಎಂದ ಅವರು ಮುಂದಿನ ವಾರದೊಳಗೆ ರೈತರ ಸಮಸ್ಯೆಗೆ ಪರಿಹಾರ ದೊರಕದೆ ಇದ್ದರೇ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ಮನೆ ಎದುರು ಪ್ರತಿಭಟನೆ ನಡೆಸುವ ಖಡಕ್ ಎಚ್ಚರಿಕೆಯನ್ನು ನೀಡಿದರು.
ಕಬ್ಬು ಬೆಳೆಗಾರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ ಮಾತನಾಡಿ ತಹಶೀಲ್ದಾರ್ ಹಾಗೂ ಅಸಿಸ್ಟಂಟ್ ಕಮೀಷನರ್ ಅವರ ಸಭೆಯಲ್ಲಿ ರೈತರಿಗೆ ತಿಳುವಳಿಕೆ ನೀಡಿ ರೈತರೊಂದಿಗೆ ದ್ವೀಪಕ್ಷೀಯ ಒಪ್ಪಂದ ಆದಮೇಲೆ ಕಾರ್ಖಾನೆ ಆರಂಭಿಸುವಂತೆ ಹೇಳಿದ್ದರು ಕೂಡ ಪ್ಯಾರಿ ಕಂಪೆನಿ ರೈತರನ್ನು ಕಡೆಗಣಿಸಿದ್ದು, ಸರ್ಕಾರದ ಅಧಿಕಾರಿಗಳ ಸೂಚನೆ ಉಲ್ಲಂಘಿಸಿದೆ ಹೀಗಾಗಿ ಜಿಲ್ಲಾಧಿಕಾರಿಗಳು ಹಳಿಯಾಳಕ್ಕೆ ಬಂದು ಮತ್ತೊಮ್ಮೆ ಸಭೆ ಕರೆದು ದರ ನಿಗದಿ ಪಡಿಸಬೇಕು ಜೊತೆಗೆ ಕಳೆದ ಸಾಲಿನ ಬಾಕಿ ಕೊಡಿಸಬೇಕೆಂದು ಆಗ್ರಹಿಸಿದರು.
ಕಬ್ಬು ಬೆಳೆಗಾರ ಸಂಘದ ಹಳಿಯಾಳ ಅಧ್ಯಕ್ಷ ಶಂಕರ ಕಾಜಗಾರ ಮತ್ತು ಮುಖಂಡ ಸುರೇಶ ಶಿವಣ್ಣವರು ಮಾತನಾಡಿ ಜಿಎಮ್ಆರ್ ಬಳಿಕ ಬಂದ ಇಐಡಿ ಪ್ಯಾರಿ ರೈತರ ಹಿತಾಸಕ್ತಿಗೆ ಕೊಳ್ಳಿ ಇಟ್ಟಿದೆ. ರೈತರಿಗೆ ಕಡಿಮೆ ದರ ನೀಡಿ ರೈತರಿಗೆ ಮೊಸ ಮಾಡುತ್ತಿದೆ. ಕಂಪೆನಿ ಮುಚ್ಚುವ ಬೆದರಿಕೆ ನೀಡುವ ಕಾರ್ಖಾನೆ ಅವರು ಮೊದಲು ಅರಿತುಕೊಳ್ಳಲಿ ಹಳಿಯಾಳದಲ್ಲಿ ಕಾರ್ಖಾನೆ ಆಗುವ ಮೊದಲು ಸ್ಥಳೀಯ ಕಬ್ಬು ಬೆಳೆಗಾರರು ಬೆರೆ ಕಂಪೆನಿಗಳಿಗೆ ಕಬ್ಬು ಸಾಗಿಸುತ್ತಿದ್ದರು ಸದ್ಯ ಈಗಲೂ ಬೇರೆಡೆ ಸಾಗಿಸುವ ಸಾಮಥ್ರ್ಯ ರೈತರಿಗಿದೆ ಕಂಪೆನಿಯ ಗೊಡ್ಡು ಬೆದರಿಕೆಗೆ ಹೆದರುವ ಅಗತ್ಯ ರೈತರಿಗಿಲ್ಲ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ, ಹಸೀರು ಸೇನೆಯ ಧಾರವಾಡ ಜಿಲ್ಲಾಧ್ಯಕ್ಷ ರವಿರಾಜ ಕಂಬಳಿ ಮಾತನಾಡಿ ಹಗಲು ಲೂಟಿ ಮಾಡುತ್ತಿರುವ ಕಾರ್ಖಾನೆಗೆ ತಕ್ಕ ಪಾಠ ಕಲಿಸಬೇಕಿದೆ. ರೈತರು ಎಂದಿಗೂ ಮಧ್ಯವರ್ತಿಗಳಿಗೆ ಕಿವಿಗೊಡಬೇಡಿ. ಎಲ್ಲ ಪಕ್ಷದವರು ಸೇರಿ ರೈತರನ್ನು ಬಲಿ ಕೊಡುತ್ತಿದ್ದಾರೆಂದು ಕಿಡಿ ಕಾರಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಮಾತನಾಡಿ ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ಅವರು ಮಾತನಾಡಿದ್ದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು ರೈತರು ಸಹಕರಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ 8 ದಿನಗಳ ಗಡುವು ನೀಡಿದ ಕಬ್ಬು ಬೆಳೆಗಾರರು 8 ದಿನದಲ್ಲಿ ರೈತರ ಬೇಡಿಕೆ ಈಡೇರಿಸದೆ ಇದ್ದರೇ ಮುಂದಿನ ದಿನಗಳಲ್ಲಿ ಊಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಗೀರಿಶ ಟೋಸುರ, ಅನ್ವರ ಪುಂಗಿ, ಪುಂಡ್ಲಿಕ್ ಗೊಡಿಮನಿ, ನಾರಾಯಣ ಗಾಡೆಕಾರ ಇತರರು ಇದ್ದರು.
Leave a Comment