ಹೊನ್ನಾವರ: ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯ ಕಡ್ನೀರು, ಹೊದ್ಕೆಶಿರೂರು ಭಾಗದಲ್ಲಿ ಬುಧವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಕಟಾವು ಮಾಡಿದ ಭತ್ತದ ಗದ್ದೆ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, ರೈತರ ತೋಟಗಳಿಗೂ ವಿಪರೀತ ಹಾನಿ ಸಂಭವಿಸಿದೆ.
ಚಂದಾವರದ ತೊರಗೋಡು, ಕಡ್ನೀರು, ಹೊದ್ಕೆ ಶಿರೂರು, ಹಳ್ಳಿಮೂಲೆ ಸೇರಿದಂತೆ ಹಲವು ಭಾಗಗಳಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆಗಳ ಕಾಲ ಧಾರಾಕಾರವಾಗಿ ಮಳೆ ಸುರಿದಿದೆ. ಇದರಿಂದಾಗಿ ಚಂದಾವರ ವ್ಯಾಪ್ತಿಯ ಜನರಿಗೆ ಮತ್ತೆ ಜಲಾಘಾತ ಎದುರಾಗಿದೆ. ರೈತರ ತೋಟ, ಬಾವಿ, ಹೊಲ-ಗದ್ದೆಗಳಿಗೆ ನೀರು ತುಂಬಿ ತೋಟ, ಹಳ್ಳ-ಕೊಳ್ಳಗಳು ಸಂಪೂರ್ಣ ಜಲಾವೃತವಾಗಿರುವುದರಿಂದ ರೈತರು ಮತ್ತೆ ಕಂಗಾಲಾಗಿದ್ದಾರೆ.
ಭತ್ತಕ್ಕೆ ಮಳೆ ಇಫೆಕ್ಟ್: ಈ ಬಾರಿ ರೈತರಿಗೆ ಕಟಾವಿಗೆ ಬಂದ ಭತ್ತವನ್ನು ಸುರಕ್ಷಿತವಾಗಿ ಕಟಾವು ಮಾಡಲು ಮಳೆ ಬಿಡುವು ನೀಡುತ್ತಿಲ್ಲ. ಬೆಳಿಗ್ಗೆ ಬಿಸಿಲಿನ ವಾತಾವರಣ ಕಂಡುಬಂದು ರಾತ್ರಿಯಾಗುತ್ತಿದ್ದಂತೆ ಮಳೆ ಅಬ್ಬರಿಸುತ್ತಿರುವುದು ರೈತರಲ್ಲಿ ಇನ್ನೂ ಹೆಚ್ಚಿನ ಆತಂಕ ಎದುರಾಗಿದೆ. ಬುಧವಾರ ಬೆಳಿಗ್ಗೆ ಎಳೆಬಿಸಿಲಿನ ವಾತಾವರಣ ನೋಡಿ ರೈತರು ಇನ್ನೇನು ಮಳೆ ದೂರವಾಯಿತು ಎಂದುಕೊಂಡು ಆಳುಗಳನ್ನು ನೇಮಿಸಿಕೊಂಡು ಭತ್ತದ ಕಟಾವಿನಲ್ಲಿ ತೊಡಗಿದ್ದರು. ಎಕರೆಗಟ್ಟಲೆ ಭತ್ತದ ಪೈರುಗಳನ್ನು ಕಟಾವು ಮಾಡಿದ್ದು, ಬುಧವಾರ ತಾಲೂಕಿನ ನೂರಾರು ಎಕರೆ ಭತ್ತದ ಗದ್ದೆ ಜಲಾವೃತವಾಗಿದೆ. ಇದರಿಂದ ರೈತರು ಭತ್ತದ ಬೆಳೆಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲಾಗದೆ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಅಕ್ಟೋಬರ್ ತಿಂಗಳು ಮುಗಿದು ನವೆಂಬರ್ ಬಂದರೂ ಭತ್ತದ ಕಟಾವಿಗೆ ಮಳೆ ಕಾಲಾವಕಾಶ ನೀಡದಿರುವುದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ದಿನ ಕಳೆದಂತೆ ಭತ್ತದ ತೆನೆ ತುಂಡಾಗಿ ರೈತ ಬೆಳೆದ ಬೆಳೆ ಕೈಗೆ ಸಿಗುವುದು ಕಷ್ಟಸಾಧ್ಯ. ಇದರಿಂದಾಗಿ ತಾಲೂಕಿನ ಬಹುತೇಕ ರೈತರು ಮಳೆಯ ಬಿಡುವನ್ನೇ ಕಾಯುತ್ತಿದ್ದಾರೆ.
ಹೊದ್ಕೆಯಲ್ಲಿ ಸೇತುವೆ ಜಲಾವೃತ: ಹೊದ್ಕೆಯ ಗೋಳಿ ಗುಂಡಿ ಹಳ್ಳ ಸಂಪೂರ್ಣ ಜಲಾವೃತವಾಗಿದ್ದು, ಕಣಿವೆ ಮಾರ್ಗದಿಂದ ಸಾಂತಗಲ್, ಸಿದ್ಧಾಪುರಕ್ಕೆ ಸಂಪರ್ಕ ಕಲ್ಪಿಸುವ ಪಿಡಬ್ಲ್ಯೂಡಿ ಮುಖ್ಯ ರಸ್ತೆಯಲ್ಲಿ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಸಿದ್ಧಾಪುರಕ್ಕೆ ಸಂಪರ್ಕ ಕಲ್ಪಿಸು ರಸ್ತೆಯಾಗಿದ್ದರಿಂದ ಅನೇಕ ವಾಹನಗಳು ರಸ್ತೆಯಲ್ಲಿ ಜಮಾವಣೆಗೊಂಡಿದ್ದವು. ದೂರದ ಊರುಗಳಿಗೆ ಹೋಗಬೇಕಾದ ಜನರು ರಸ್ತೆ ಸಂಪರ್ಕ ಕಡಿತವಾಗಿದ್ದರಿಂದ ತೊಂದರೆ ಅನುಭವಿಸಬೇಕಾಯಿತು. ಹೊದ್ಕೆಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲಿಸುವ ಸೇತುವೆ ಮುಳುಗಡೆಯಾಗಿದ್ದು, ಸೇತುವೆಯ ಪಿಲ್ಲರ್ ಕೊಚ್ಚಿ ಹೋಗಿದೆ. ಇದರಿಂದ ಶರನ್ನವರಾತ್ರಿಗೆ ತೆರಳುವ ಭಕ್ತರಿಗೆ ಮತ್ತು ಆ ಭಾಗದ ಸುಮಾರು 70 ಮನೆಗಳಿಗೆ ಸಂಪರ್ಕ ಕಡಿತವಾಗಿದೆ. ಹೂವಿನ ಹಿತ್ಲದಲ್ಲಿ ರಾಮಕೃಷ್ಣ ಭಂಡಾರಿ, ಪರಮೇಶ್ವರ, ಹೇರಂಭ, ನಾರಾಯಣ ಗೌಡ, ಜುವಾವ್ ಪಿಂಟೊ ಅವರ ತೋಟ, ಮನೆಗಳಿಗೆ ನೀರು ನುಗ್ಗಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ.
………………………….
ಇನ್ನೇನು ಮಳೆ ಮುಗಿಯಿತು ಎಂಬ ನಿರೀಕ್ಷೆಯಲ್ಲಿರಲಾಗಿತ್ತು. ಬುಧವಾರ ಆಳುಗಳನ್ನು ನೇಮಿಸಿಕೊಂಡು ಭತ್ತದ ಕಟಾವನ್ನೂ ಮಾಡಿದ್ದೇವೆ. ಮಳೆ ಅಬ್ಬರಿಸಿ ಸಾಕಷ್ಟು ನಷ್ಟ ತಂದೊಡ್ಡಿದೆ. ಆಗಾಗ ಮಳೆಯಾಗುತ್ತಲೇ ಇದೆ. ಅಡಿಕೆ, ಬಾಳೆ, ತೆಂಗು ಎಲ್ಲವೂ ಕೊಚ್ಚಿ ಹೋಗಿದೆ. ಈಗ ಭತ್ತದ ಬೆಳೆಗೂ ಮಳೆ ಅಡ್ಡಿಮಾಡಿದೆ. ಇನ್ನು ನಮ್ಮ ಕೈಯಲ್ಲಿ ಏನೂ ಇಲ್ಲ. ದೇವರ ಮೊರೆ ಹೋಗುತ್ತೇವೆ.
ಗಣೇಶ ಬಿಳಿಯಪ್ಪ ನಾಯ್ಕ, ಪ್ರಗತಿಪರ ಕೃಷಿಕರು
……………………………….
ಅಕಾಲಿಕ ಮಳೆಯಿಂದ ರೈತರ ಗದ್ದೆಗೆ ನೀರು ನುಗ್ಗಿದ್ದು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸುತ್ತಿದ್ದು, ಸರ್ಕಾರದಿಂದ ಬೆಳೆಹಾನಿಗೆ ಪರಿಹಾರ ಒದಗಿಸಲು ಅವಕಾಶವಿದೆ. ರೈತರು ಕೃಷಿ ಇಲಾಖೆಗೆ ಸೂಕ್ತದಾಖಲೆಯೊಂದಿಗೆ ಅರ್ಜಿ ಸ್ವೀಕರಿಸುವ ಅವಕಾಶವಿದೆ ರೈತರು ಇಲಾಖೆಗೆ ಆಗಮಿಸಿ ಈ ಬಗ್ಗೆ ಮಾಹಿತಿ ಪಡೆಯಬಹುದು.
ಲಕ್ಷ್ಮೀ.ಎಸ್.ದಳವಾಹಿ ಕೃಷಿ ಇಲಾಖೆಯ ಅಧಿಕಾರಿ ಹೊನ್ನಾವರ.
……………………………….
Leave a Comment