ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (ಪಿಎಂಇಜಿಪಿ) ಅಡಿ ಸಣ್ಣ ಕೈಗಾರಿಕೆ, ಕೃಷಿ, ಶಿಕ್ಷಣ, ವಸತಿ ಮತ್ತಿತರ ಆದ್ಯತಾ ವಲಯದ ಯೋಜನೆಗಳಿಗೆ ಸಾಲ ಮಂಜೂರು ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಬ್ಯಾಂಕರುಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನಲ್ಲಿ ಕೇಂದ್ರ ಸಚಿವರು, ಲೀಡ್ ಬ್ಯಾಂಕ್ ಅಗಿರುವ ಕೆನರಾ ಬ್ಯಾಂಕು ಹಾಗೂ ಇತರೆ ಬ್ಯಾಂಕರುಗಳೊಂದಿಗೆ ವಿವಿಧ ಸಾಲಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸೇರಿ ಕೇಂದ್ರ ಸರ್ಕಾರದ ಎಲ್ಲ ರಿಯಾಯಿತಿಗಳೂ ನೇರ ವರ್ಗಾವಣೆ ಮೂಲಕ ನಡೆಯತ್ತದೆ. ಯಾರೊಬ್ಬರೂ ವಿಶೇಷವಾಗಿ ರೈತರು ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗಬಾರದು. ಬೆಂಗಳೂರು ವ್ಯಾಪ್ತಿಯಲ್ಲಿ (ಹೊರವಲಯದಲ್ಲಿ) ಕೃಷಿ, ತೋಟಗಾರಿಕೆ, ಒಳನಾಡು ಮೀನುಗಾರಿಕೆ, ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಕುಟುಂಬಗಳ ಸಮೀಕ್ಷೆ ನಡೆಸಿ ಪ್ರತಿಯೊಂದು ಕುಟುಂಬಕ್ಕೂ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವ ವ್ಯವಸ್ಥೆ ಮಾಡುವಂತೆ ಸಚಿವ ಸದಾನಂದ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಮೇಗೌಡರಿಗೆ ಸೂಚಿಸಿದರು.
ಅನುಸೂಚಿತ ಜಾತಿ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ವಾಲ್ಮಿಕಿ ನಿಗಮ ಮತ್ತಿತರ ನಿಗಮ-ಮಂಡಳಿಗಳು, ಪ್ರಾಯೋಜಿಸುವ ಅನೇಕ ಸಾಲ ಯೋಜನೆಗಳ ಬಹುತೇಕ ಅರ್ಜಿಗಳು ಹಾಗೂ ಬಿಬಿಎಂಪಿ ಶಿಫಾರಸು ಮಾಡಿರುವ ಬೀದಿ ಬದಿ ವ್ಯಾಪಾರಿಗಳ ಕಿರುಸಾಲದ ಅರ್ಜಿಗಳು ಅನೇಕ ತಿಂಗಳುಗಳಿಂದ ಬಾಕಿ ಇರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಅರ್ಜಿಗಳಿಗೆ ಮಂಜೂರಾತಿ ನೀಡುವಲ್ಲಿ ಅನಗತ್ಯ ಹಾಗೂ ಸಕಾರಣವಿಲ್ಲದೆ ವಿಳಂಬ ಮಾಡುವುದನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಸಿದ ಸಚಿವರು, ಅರ್ಜಿಗಳು ಸಾಲಕ್ಕೆ ಅರ್ಹವಾಗಿಲ್ಲದಿದ್ದರೆ ಅಂತ ಅರ್ಜಿಗಳನ್ನು ಸಕಾರಣ ಕೊಟ್ಟು ತಿರಸ್ಕರಿಸಿ. ತಿಂಗಾಳುನಗಟ್ಟಲೆ ಬಾಕಿ ಇಟ್ಟುಕೊಳ್ಳಬೇಡಿ. ಮುಂದಿನ 15 ದಿನಗಳಲ್ಲಿ ತಮಗೆ ಅನುಸರಣಾ ವರದಿ ಸಲ್ಲಿಸಿ ಎಂದು ಸೂಚಿಸಿದರು.
ಕೊರೊನಾದಿಂದ ಬ್ಯಾಂಕರಗಳು ಎದುರಿಸುತ್ತಿರುವ ಸವಾಲುಗಳು, ಕೇಂದ್ರ ಸರಕಾರವು ಘೋಷಿಸಿರುವ ಸ್ವಾವಲಂಬಿ ಯೋಜನೆಗಳ ಜಾರಿಯಲ್ಲಿ ಎದುರಾಗುತ್ತಿರುವ ಅಡಚಣೆಗಳು, ಅದನ್ನು ಯಾವ ರೀತಿ ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು ಎಂಬ ಬಗ್ಗೆ ಹೊಸ ಹೊಸ ಚಿಂತನೆಗಳಿದ್ದರೆ ಅವುಗಳನ್ನು ಸರಕಾರದೊಂದಿಗೆ ಹಂಚಿಕೊಳ್ಳಬಹುದು ಎಂದು ಸಚಿವವರು ಬ್ಯಾಂಕರ್ಗಳಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಮುಕ್ತ ಆಹ್ವಾನ ನೀಡಿದರು.
ಕೊರೊನಾ ಮಧ್ಯೆಯೂ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಂಡ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯವನ್ನು ಸಚಿವರು ಶ್ಲಾಘಿಸಿದರು. ಪಿಎಂಇಜಿಪಿ ಯೋಜನೆಯ ಅನುಷ್ಠಾನದ ಜವಾಬ್ದಾರಿ ವಹಿಸಿಕೊಂಡಿರುವ ಖಾದಿ ಮತ್ತು ಗ್ರಾಮ ಕೈಗಾರಿಕಾ ಆಯೋಗದ (ಕೆವಿಐಸಿ) ರಾಜ್ಯ ಘಟಕವು ಉತ್ತಮ ಕಾರ್ಯನಿರ್ವಹಿಸಿ ದೇಶಕ್ಕೇ ಮೊದಲ ಸ್ಥಾನ ಪಡೆದಿರುವ ಬಗ್ಗೆ ಕೇಂದ್ರ ಸಚಿವರು ಹರ್ಷ ವ್ಯಕ್ತಪಡಿಸಿದರು.
ಕೊರೊನಾ ಸೊಂಕಿನಿಂದಾಗಿ ಕಳೆದೆರಡು ತ್ರೈಮಾಸಿಕ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮಾರ್ಚ್ 2020ಕ್ಕೆ ಕೊನೆಗೊಂಡ 2019-20ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಹಾಗೂ ಪ್ರಸಕ್ತ ಹಣಕಾಸು ವರ್ಷದ ಕಳೆದೆರಡು ತ್ರೈಮಾಸಿಕದಲ್ಲಿ ಆದ ಯೋಜನಾ ಪ್ರಗತಿ ಪರಿಶೀಲಿಸಲಾಯಿತು.
ಮಾರ್ಚ್ ಕೊನೆಗೊಂಡ ತ್ರೈಮಾಸಿಕದಲ್ಲಿ ವಸತಿ ವಲಯವೊಂದನ್ನು ಹೊರತುಪಡಿಸಿ ಉಳಿದೆಲ್ಲ ವಲಯಗಳ ಸಾಲ ಯೋಜನೆಗಳಿಗೆ ಸಂಬಂಧಿಸಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಗುರಿಮೀರಿ ಸಾಧನೆ ಮಾಡಿವೆ. ಉದಾಹರಣೆಗೆ – ಶಿಕ್ಷಣ ಸಾಲದಲ್ಲಿ ಶೇಕಡಾ 100, ರಫ್ತುವಲಯದ ಯೋಜನೆಗಳಿಗೆ ಸಂಬಂಧಿಸಿ ಶೇಕಡಾ 147, ಕೃಷಿ ವಲಯದಲ್ಲಿ ಶೇಕಡಾ 116 ಹಾಗೂ ಸಣ್ಣ ಮತ್ತು ಅತಿಸಣ್ಣ ಕೈಗಾರಿಗಳಿಗೆ (ಎಂಎಸ್ಎಂಇ) ಸಂಬಂಧಿಸಿ ಶೇಕಡಾ 168ರಷ್ಟು ಗುರಿಸಾಧನೆಯಾಗಿತ್ತು.
ಈ ಅವಧಿಯಲ್ಲಿ ಪ್ರಮುಖವಾಗಿ ಕೆನರಾ ಬ್ಯಾಂಕ್ 4861 ಕೋಟಿ ರೂಪಾಯಿ, ಎಸ್ಬಿಐ 14744 ಕೋಟಿ ರೂ, ಎಚ್ಡಿಎಫ್ಸಿ 4810 ಕೋಟಿ ರೂ, ಎಕ್ಸಿಸ್ ಬ್ಯಾಂಕ್ 3714 ಕೋಟಿ ರೂ ಹಾಗೂ ಐಸಿಐಸಿಐ ಬ್ಯಾಂಕ್ 4499 ಕೋಟಿ ರೂ ಸಾಲ ವಿತರಿಸಿದ್ದವು. ಆದರೆ ಕೊರೊನಾದಿಂದಾಗಿ ಮುಂದಿನ ಎರಡು ತ್ರೈಮಾಸಿಕದಲ್ಲಿ ವಹಿವಾಟು ಕುಸಿಯಿತು. ಆದಾಗ್ಯೂ ಕೃಷಿ ಮತ್ತು ಎಂಎಸ್ಎಂಇ ವಲಯಗಳ ಸಾಲ ನೀಡಿಕೆ ಕ್ರಮವಾಗಿ ಶೇಕಡ 99 ಹಾಗೂ ಶೇಕಡ 90ರಷ್ಟು ಪ್ರಗತಿಯಾಗಿವೆ. ಕೊರೊನಾ ಪರಿಣಾಮವಾಗಿ ಶೈಕ್ಷಣಿಕ ಹಾಗೂ ವಸತಿ ಸಾಲಕ್ಕೆ ಬೇಡಿಕೆ ಕುಸಿದಿದ್ದು ಬ್ಯಾಂಕುಗಳು ಕೇವಲ ಶೇಕಡ21 ಹಾಗೂ ಶೇಕಡಾ 20 ಗುರಿ ಸಾಧಿಸಿವೆ.
ಆದರೆ ಈಚಿನ ದಿನಗಳಲ್ಲಿ ಸಾಲ ಯೋಜನೆಗಳು ಬಹುತೇಕ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಇದು ಆರ್ಥಿಕತೆ ಚೇತರಿಕೆಯ ಶುಭಸೂಚನೆಯಾಗಿದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಶ್ರೀ ಕೆ ಎಸ್ ನಾಯಕ್ ವಿವರಿಸಿದರು.
ಕೆವಿಐಸಿ, ಬಿಬಿಎಂಪಿ ಸೇರಿದಂತೆ ಬೇರೆ ಬೇರೆ ಇಲಾಖೆ ಹಾಗೂ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರನ್ಸ್ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡರು.
Leave a Comment