ಯಲ್ಲಾಪುರ:
ಪಟ್ಟಣ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನ.6 ರಂದು ಚುನಾವಣೆ ನಡೆಯಲಿದ್ದು, ಎರಡೂ ಸ್ಥಾನಗಳಿಗೆ ಹೆಚ್ಚಿನ ಆಕಾಂಕ್ಷಿಗಳಿರುವುದು ಬಿಜೆಪಿ ಪ್ರಮುಖರಿಗೆ ತಲೆನೋವಾಗಿದೆ.
19 ಸದಸ್ಯರನ್ನು ಹೊಂದಿದ ಪ.ಪಂನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ 12 ಜನ ಕಾಂಗ್ರೆಸ್ನಿಂದ, 5 ಜನ ಬಿಜೆಪಿಯಿಂದ, ಜೆಡಿಎಸ್ನಿಂದ 1, ಪಕ್ಷೇತರರಾಗಿ ಒಬ್ಬರು ಆಯ್ಕೆಗೊಂಡಿದ್ದರು. ನಂತರ ಕಾಂಗ್ರೆಸ್ನಿಂದ ಆಯ್ಕೆಗೊಂಡ 9 ಸದಸ್ಯರು ಸಚಿವ ಶಿವರಾಮ ಹೆಬ್ಬಾರರ ಬೆಂಬಲಿಗರಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಆದರೆ ಅವರ್ಯಾರು ಕಾಂಗ್ರೆಸ್ಗೆ ರಾಜೀನಾಮೆ ನೀಡಿಲ್ಲ, ಬಿಜೆಪಿಗೆ ಸೇರ್ಪಡೆಗೊಂಡಿಲ್ಲ. ಬಿಜೆಪಿಯ ಸದಸ್ಯ 14 ಆಗುವುದರಿಂದ ಬಿಜೆಪಿ ಆಡಳಿತದ ಗದ್ದುಗೆ ಏರುವುದು ನಿಶ್ಚಿತಗೊಂಡಿದೆ. ಮಂಜುನಾಥನಗರದ ಸದಸ್ಯ ಸತೀಶ ನಾಯ್ಕ, ರವೀಂದ್ರನಗರದ ಸದಸ್ಯ ಸೋಮೇಶ್ವರ ನಾಯ್ಕ ಆಕಾಂಕ್ಷಿಗಳಾಗಿದ್ದಾರೆ. ಇಬ್ಬರೂ ಸಚಿವರ ಆಪ್ತರಾಗಿದ್ದಾರೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಬಂದಿರುವುದರಿಂದ 5 ಸದಸ್ಯರು ಅಧ್ಯಕ್ಷ ಗಾದಿ ಏರಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆನ್ನಲಾಗಿದೆ. ಪುಷ್ಪಾ ನಾಯ್ಕ ಕಾಂಗ್ರೆಸ್ನಿಂದ ಆಯ್ಕೆಗೊಂಡಿದ್ದರೂ, 3 ಅವಧಿಗಳ ಕಾಲ ಪ.ಪಂ ಆಡಳಿತದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ ಮೂಲ ಬಿಜೆಪಿಯ ಶ್ಯಾಮಿಲಿ ಪಾಟಣಕರ ಅಧ್ಯಕ್ಷ ಹುದ್ದೆಗೆ ತೀವೃ ಪೈಪೋಟಿ ನಡೆಸುತ್ತಿರುವುದು ಗೌಪ್ಯವಾಗಿ ಉಳಿದಿಲ್ಲ. ಅಲ್ಲದೇ ಸುನಂದಾ ದಾಸ ಅವರು ಅಧ್ಯಕ್ಷರಾಗಬೇಕೆಂದು ಮಾಜಿ ಅಧ್ಯಕ್ಷರ ಬಳಗವೊಂದು ಸಚಿವರ ಮೇಲೆ ಒತ್ತಡ ಹೇರುತ್ತಿದೆ ಎನ್ನಲಾಗಿದೆ. ಹೆಸರಿಗೆ ಹೈಕಮಾಂಡ್ ತೀರ್ಮಾನ ಅಂತಿಮ ಎಂದು ಹೇಳಲಾಗುತ್ತಿದ್ದರೂ, ಸಚಿವ ನಿರ್ಧಾರವೇ ಅಂತಿಮ ಎಂಬುದು ಸ್ಪಷ್ಟ.
Leave a Comment