ಭಟ್ಕಳ: ಪಂಚಮಸಾಲಿ ಲಿಂಗಾಯತ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆಗೊಳಿಸುದನ್ನು ವಿರೋಧಿಸಿ ಭಟ್ಕಳ ತಾಲೂಕ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ರಾಜ್ಯಪಾಲರಿಗೆ ಭಟ್ಕಳ ಸಹಾಯಕ ಆಯುಕ್ತರ ಮೂಲಕ ಮಂಗಳವಾರ ಮನವಿ ಸಲ್ಲಿಸಲಾಯಿತು.
ಭಾರತದ ದೇಶದಲ್ಲಿ ಹಿಂದುಳಿದ ವರ್ಗದ ಜನರೇ ಬಹುಸಂಖ್ಯಾತರಾಗಿದ್ದು, ದೇಶವನ್ನು ಕಟ್ಟುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುತ್ತಾರೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದೇಶದಲ್ಲಿ ಹಿಂದುಳಿದ ವರ್ಗದ ಜನರ ಸ್ಥಿತಿ ಶೋಚನೀಯವಾಗಿಯೇ ಇದೆ . ಇಲ್ಲಿಯವರೆಗೆ ನಮ್ಮನ್ನು ಆಳಿದ ಸರಕಾರಗಳು ಹಿಂದುಳಿದ ವರ್ಗದ ಜನಸಂಖ್ಯೆಯ ಬಗ್ಗೆ ಸರಿಯಾದ ಸರ್ವೆಯನ್ನು ನಡೆಸದೆ ಇರುವುದು ಇನ್ನಷ್ಟು ದುಃಖಕರ ಸಂಗತಿಯಾಗಿದೆ. ಹಿಂದುಳಿದ ವರ್ಗದ ಜನರು ಸರಿಯಾದ ಉದ್ಯೋಗವನ್ನು ಕಂಡುಕೊಳ್ಳಲು ಸಾಧ್ಯವಾಗದೆ ಜೀವನ ಸಾಗಿಸುವುದಕ್ಕೂ ಹೆಣಗಾಡುತ್ತಿದ್ದಾರೆ . ರಾಜ್ಯದಲ್ಲಿ 108 ಕ್ಕೂ ಹೆಚ್ಚು ವಿವಿಧ ಹಿಂದುಳಿದ ವರ್ಗದ ಸಮಾಜ ಇದ್ದು ಕೇವಲ 15% ಮೀಸಲಾತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಹಿಂದುಳಿದ ವರ್ಗದ ಜನರ ಜೀವನ ಸ್ಥಿತಿ ಸುಧಾರಿಸದೇ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.
ಪ್ರಸ್ತುತ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರುವ ಮುಂದುವರಿದ (ಮೇಲ್ವರ್ಗದ) ಪಂಚಮಸಾಲಿ ಲಿಂಗಾಯತ ಸಮಾಜವು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಯಾಗುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಬಂದಿದೆ .ಸರ್ಕಾರ ಈ ಒತ್ತಡಕ್ಕೆ ಮಣಿದು ಪಂಚಮಸಾಲಿ ಲಿಂಗಾಯತ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆಗೊಳಿಸಿದೆ ಆದಲ್ಲಿ ನೈಜ ಹಿಂದುಳಿದವರಿಗೆ ಸಿಗುವ ಅಲ್ಪ ಮೀಸಲಾತಿಯಿಂದಲೂ ವಂಚಿತರಾಗಿ, ಅವರ ಜೀವನ ಇನ್ನಷ್ಟು ಶೋಚನೀಯವಾಗಲಿದೆ. ಸರ್ಕಾರ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯದಂತೆ ತಾವು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಈ ಮೂಲಕ ಹಿಂದುಳಿದ ವರ್ಗಕ್ಕೆ ಆಗುವ ಅನ್ಯಾಯವನ್ನು ತಪ್ಪಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ
Leave a Comment