ಹಳಿಯಾಳ : ದೇಶದಲ್ಲಿ ಹಿಂದೂಗಳಿಗೆ ಭಗವತ್ ಗೀತೆ, ಕ್ರಿಶ್ಚಿಯನ್ರಿಗೆ ಬೈಬಲ್ ಮತ್ತು ಮುಸ್ಲಿಂರಿಗೆ ಕುರಾನ್ ಇರುವಂತೆಯೇ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ ದೇಶಕ್ಕಾಗಿ ರಚಿಸಿದ ಸಂವಿಧಾನವು ಒಂದು ಪವಿತ್ರ ಗ್ರಂಥವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹಳಿಯಾಳ ಪುರಸಭೆ ನೂತನ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ ಸಂವಿಧಾನ ಗ್ರಂಥದ ಗೌರವ ಮತ್ತು ಪಾವಿತ್ರತೆ ಕಾಪಾಡುವ ಕೆಲಸ ನಾವೆಲ್ಲರೂ ಮಾಡಬೇಕಿದೆ ಎಂದು ಕರೆ ನೀಡಿದರು.
ಹಳಿಯಾಳದ ಯಲ್ಲಾಪುರ ನಾಕಾದ ಡಾ.ಬಾಬಾಸಾಹೇಬ ಅಂಬೇಡ್ಕರ ಅಭಿಮಾನಿ ಬಳಗದವರು ಯಲ್ಲಾಪೂರ ನಾಕದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಹಾನಾಯಕ ಧಾರವಾಹಿಯ ಪೋಸ್ಟರ್ ಅನಾವರಣ ಮತ್ತು ಪುರಸಭೆಗೆ ಆಯ್ಕೆಯಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅಂಬೇಡ್ಕರ ಅವರ ಜೀವನ ಚರಿತ್ರೆಗಳನ್ನು ಸಾರುವ ಗ್ರಂಥಗಳನ್ನು ಅಧ್ಯಯನ ಮಾಡುವ ಮೂಲಕ ಅವರ ಸಮಗ್ರ ಜೀವನವನ್ನು ಅರಿಯಬೇಕಾಗಿದೆ ಎಂದರು.
ಪುರಸಭೆ ಉಪಾಧ್ಯಕ್ಷೆ ಸುವರ್ಣಾ ಸುಂದರರಾಜ್ ಮಾದರ ಮಾತನಾಡಿ, ದಲಿತರು ಮತ್ತು ಶೋಷಿತ ಸಮುದಾಯಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಕೂಡುಗೆಯು ಅಪಾರವಾಗಿದೆ. ಸಮಾಜದಲ್ಲಿನ ಅಸಮಾನತೆ ಮತ್ತು ಮೂಡನಂಬಿಕೆಗಳನ್ನು ಬೇರು ಸಮೇತ ಕಿತ್ತು ಹಾಕುವ ಶಪಥ ಮಾಡಿದ ಮಹಾನ್ ನಾಯಕ ಡಾ. ಅಂಬೇಡ್ಕರ ಅವರ ಆದರ್ಶ ನಮಗೆ ದಾರಿ ದೀಪವಾಗಿವೆ ಎಂದು ಅಭಿಪ್ರಾಯಿಸಿದರು.
ಪುರಸಭೆ ಅಧ್ಯಕ್ಷರಾದ ಅಜರ ಬಸರಿಕಟ್ಟಿ, ಉಪಾಧ್ಯಕ್ಷೆ ಸುವರ್ಣಾ ಮಾದರ, ಎಸ್ಸಿ-ಎಸ್ಟಿ ಸದಸ್ಯರಾದ ಪ್ರಭಾಕರ ಗಜಾಕೋಶ, ಲಕ್ಷ್ಮೀ ವಡ್ಡರ, ಸುರೇಶ ತಳವಾರ ಮತ್ತು ದಲಿತ ಸಮಾಜದ ಮುಖಂಡರಾದ ಗುರುನಾಥ ದಾನಪ್ಪನ್ನವರ, ಚಂದ್ರು ಕಲಭಾವಿ, ಯಲ್ಲಪ್ಪಾ ಹೊನ್ನೋಜಿ, ಮಾರುತಿ ಕಲಭಾವಿ, ಆನಂದ ವಡ್ಡರ, ರವಿ ಹಂಚಿನಮನಿ, ಹನುಮಂತ ತಳವಾರ, ಹನುಮಂತ ಮೇತ್ರಿ, ಜಯಲಕ್ಷ್ಮೀ ಚವ್ಹಾಣ, ಮಂಜುನಾಥ್ ಚಲವಾದಿ, ಮಾರುತಿ ಕುರಿಯಾರ್ ಮತ್ತು ಪ್ರಕಾಶ ಗೌಡಪ್ಪನ್ನವರ ಅವರನ್ನು ಸಹ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಲಕ್ಷ್ಮಣ ಗಜಾಕೋಶ, ಜ್ಞಾನೇಶ್ವರ ಗಜಾಕೋಶ, ಮಂಜುಳಾ ಮಾದರ, ನಾಗಮ್ಮ ಚಲವಾದಿ, ಪೂಜಾ ತಾಳಿಕೋಟಿ, ಮಂಜುನಾಥ ಶೇರಖಾನೆ ಇದ್ದರು.
Leave a Comment