ಭಟ್ಕಳ: ಎರಡು ವರ್ಷಗಳ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿದ್ದ ಸುವರ್ಣ ತ್ರಿ ಭುಜ ಬೋಟ್ ಹಾಗೂ ಅದರಲ್ಲಿನ 7 ಮಂದಿ ಮೀನುಗಾರರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಧನ ನೀಡಬೇಕೆಂದು ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಂದಿಸಿ ಶನಿವಾರದಂದು ವಿಧಾನಸೌಧದಲ್ಲಿ ಕಣ್ಮರೆಯಾದ ಮೀನುಗಾರರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಿದ್ದಾರೆ.
ಕಳೆದ ಎರಡು ವರ್ಷದ ಹಿಂದೆ ಡಿಸೆಂಬರ್ 16 ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ 7 ಮಂದಿ ಮೀನುಗಾರರು ಆಕಸ್ಮಿಕವಾಗಿ ಕಣ್ಮರೆಯಾಗಿದ್ದು ಅವರ ಕುಟುಂಬಕ್ಕೆ ಅವರೇ ಆಧಾರ ಸ್ಥಂಭವಾಗಿದ್ದರು. ಆದರೆ ಅವರ ಪತ್ತೆ ಇನ್ನು ಆಗದ ಹಿನ್ನೆಲೆಯಲ್ಲಿ ಬಡ ಕುಟುಂಬಕ್ಕೆ ಜೀವನ ನಡೆಸಲು ಅನೂಕೂಲವಾಗುವ ನಿಟ್ಟಿನಲ್ಲಿ
ಹಿಂದೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಅವರೊಂದಿಗೆ ಮತ್ತು ಕುಮಟ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಜೊತೆಗೆ ಭಟ್ಕಳ ಶಾಸಕ ಸುನೀಲ ನಾಯ್ಕ ಅವರ ನಿಯೋಗದ ತಂಡವೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ “ಸುವರ್ಣ ತ್ರಿಭುಜ” ಬೋಟ್ ಮುಳುಗಡೆಯಾಗಿ ಕಣ್ಮರೆಯಾದ 7 ಜನ ಮೀನುಗಾರರ ಕುಟುಂಬಕ್ಕೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ತಲಾ ರೂ. 10 ಲಕ್ಷ ಪರಿಹಾರ ಘೋಷಣೆ ಮಾಡುವಂತೆ ಮನವಿ ಮಾಡಲಾಗಿತ್ತು.
ಅದರಂತೆ ರಾಜ್ಯ ಸರಕಾರಕ್ಕೆ ಸಚಿವರು ಸಹಿತ ಉಡುಪಿ, ಕುಮಟಾ, ಭಟ್ಕಳ ಶಾಸಕರು ಒತ್ತಾಯ ಮಾಡುತ್ತಾ ಬಂದ ಹಿನ್ನೆಲೆ ಕುಟುಂಬಕ್ಕೆ ಸದ್ಯ ಸರಕಾರವೂ ಭಾರಿ ದೊಡ್ಡ ಮೊತ್ತದ ಪರಿಹಾರವೂ ಸಿಗುವಂತಾಗಿದ್ದು ಮೀನುಗಾರಿಕಾ ಸಚಿವರ, ಉಡುಪಿ, ಕುಮಟಾ ಹಾಗೂ ಪ್ರಮುಖವಾಗಿ ಭಟ್ಕಳ ಶಾಸಕರ ಪಾತ್ರ ಮೆಚ್ಚುವಂತಹದ್ದಾಗಿದೆ.
ಸದ್ಯ ಸಚಿವರು, ಶಾಸಕರುಗಳ ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಂತ್ರಸ್ತ ಕುಟುಂಬಗಳಿಗೆ ಇದೇ ಶನಿವಾರ ವಿಧಾನಸೌಧದಲ್ಲಿ ತಲಾ 10 ಲಕ್ಷ ರೂಪಾಯಿಯ ಚೆಕ್ ನ್ನು ಹಸ್ತಾಂತರಿಸಲಿದ್ದಾರೆ. ಈ ಹಿನ್ನೆಲೆ ಗುರುವಾರದಂದು ಈ ಬಗ್ಗೆ 7 ಕುಟುಂಬಗಳಿಗೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಸವಿವರವಾಗಿ ಮಾಹಿತಿ ನೀಡಿದ್ದು ಬೆಂಗಳೂರಿಗೆ ಕುಟುಂಬಸ್ಥರು ತೆರಳಲಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ಧನವು ಸಂತ್ರಸ್ತ ಕುಟುಂಬಗಳಿಗೆ ನೀಡಲಾಗಿತ್ತು.
ಡಿಸೆಂಬರ್ 13 ರಂದು ಉಡುಪಿಯ ಮಲ್ಪೆಯಿಂದ ಹೊರಟ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ರತ್ನಗಿರಿ ಪ್ರದೇಶದ ಸಮುದ್ರದಲ್ಲಿ ಡಿಸೆಂಬರ್ 15 ರ ರಾತ್ರಿ 1 ಘಂಟೆ ವರೆಗೆ ಸಂಪರ್ಕದಲ್ಲಿತ್ತು. ನಂತರ ಸಂಪರ್ಕ ಕಳೆದುಕೊಂಡಿತ್ತು. ಸಹಜವಾಗಿ ಮೀನುಗಾರರು ಅಪಾಯದಲ್ಲಿ ಸಿಲುಕಿದಾಗ ಜಿಪಿಎಸ್ ಅಥವಾ ಮೊಬೈಲ್ ಸಂಪರ್ಕ ದಲ್ಲಿ ಒಬ್ಬರಿಗೊಬ್ಬರು ಸಂಪರ್ಕದಲ್ಲಿರುತ್ತಾರೆ. ಆದರೆ ಸುವರ್ಣ ತ್ರಿಭುಜ ಬೋಟ್ ನ ಯಾವೊಬ್ಬ ಮೀನುಗಾರರೂ ಬೇರೆ ಮೀನುಗಾರರ ಸಂಪರ್ಕ ಮಾಡಿಲ್ಲ. ಇದಲ್ಲದೇ ಜಿಪಿಎಸ್ ಮೊಬೈಲ್ ಸಿಗ್ನಲ್ ಸಹ ಸಂಪರ್ಕ ಕಳೆದುಕೊಂಡಿತ್ತು. ಈ ಕಾರಣದಿಂದ ಯಾವುದೋ ಕಡಲಗಳ್ಳರು ಬೋಟನ್ನು ಅಪಹರಿಸಿರಬಹುದು ಎಂದು ಹೇಳಲಾಗಿತ್ತು.
Leave a Comment