ಹೊನ್ನಾವರ – ಯಕ್ಷಗಾನ ರಂಗದಲ್ಲಿ ಕಲಾಸೇವೆಗೈಯ್ಯುತ್ತಿರುವ ಜಿಲ್ಲೆಯ ಒಕ್ಕಲಿಗರನ್ನು ಒಳಗೊಂಡ ಒಕ್ಕಲಿಗರ ಯಕ್ಷಗಾನ ಬಳಗ ಯಶಸ್ವಿಯಾಗಿ ಮೂರನೇವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸವಿನೆನಪಿಗಾಗಿ ಶನಿವಾರ ಸಂಜೆ ಕೆಳಗಿನೂರಿನಲ್ಲಿರುವ ತಾಲೂಕಾ ಒಕ್ಕಲಿಗರ ಸಭಾಭವನದಲ್ಲಿ ಯಕ್ಷೋತ್ಸವ ನಡೆಯಿತು.
ನಿವೃತ್ತ ಬಿ.ಎಸ್.ಎನ್.ಎಲ್ ನೌಕರ ಟಿ.ಹೆಚ್ ಗೌಡ ಕಾರ್ಯಕ್ರಮ ಉದ್ಘಾಟಿಸಿ ಸಂಸ್ಕøತಿ ಸಂಸ್ಕಾರಗಳು ಮೇಳೈಸಿರುವ ಕಲೆಯಾದ ಯಕ್ಷಗಾನದಲ್ಲಿ ಒಕ್ಕಲಿಗರು ತಲೆ ತಲಾಂತರಗಳಿಂದ ತೊಡಗಿಸಿಕೊಂಡಿದ್ದಾರೆ. ಯಕ್ಷಗಾನಬಳಗವನ್ನು ಕಟ್ಟಿಕೊಂಡಿರುವುದು ಉತ್ತಮ ಕೆಲಸ. ಎಳೆಯರನ್ನು ಪ್ರೋತ್ಸಾಹಿಸುವ ಹಿರಿಯರಿಗೆ ಸಲ್ಲಬೇಕಾದ ಗೌರವವನ್ನು ದೊರಕಿಸುವ ನಿಟ್ಟಿನಲ್ಲಿ ಮತ್ತು ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗುವುದಕ್ಕೂ ಬಳಗ ಮುಂದಾಗಲಿ ಎಂದರು.
ಕಲೆಯೆನ್ನುವುದು ಸಾಗರವಿದ್ದಂತೆ ಇಲ್ಲಿ ಅವರವರ ಪ್ರಯತ್ನಕ್ಕೆ ತಕ್ಕಷ್ಟು ಪ್ರತಿಫಲ ಮಾತ್ರ ಸಿಗುತ್ತದೆ. ನಾಡಿನಲ್ಲಿ ಹಲವು ರಂಗಗಳಲ್ಲಿ ಸಮಾಜದವರು ಸಾಧನೆ ಮಾಡಿದ್ದಾರೆ. ಅದೇರೀತಿ ಯಕ್ಷಗಾನದಲ್ಲಿಯೂ ಒಕ್ಕಲಿಗರು ಛಾಪು ಮೂಡಿಸಿರುವುದು ಹೆಮ್ಮೆಯ ಸಂಗತಿ ಎಂದು ಶಿಕ್ಷಕ ಎಂ.ಟಿ ಗೌಡ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗರ ಯಕ್ಷಗಾನ ಬಳಗದ ಅಧ್ಯಕ್ಷ ರಾಮ ಗೌಡ ಕಲಾವಿದರ ಕಷ್ಟ ಮತ್ತು ಇಷ್ಟವನ್ನು ಹೇಳಿಕೊಂಡು ಸಂಘಟನೆ ಕಟ್ಟಿಕೊಂಡು ಮುಂದುವರಿಯಲು ಸಹಕಾರ ನೀಡುತ್ತಿರುವ ಎಲ್ಲರನ್ನೂ ನೆನೆದು ಮುಂದೆಯೂ ನೆರವಿಗೆ ನಿಲ್ಲುವಂತೆ ಮನವಿಮಾಡಿದರು. ಭಾಗವತರಾದ ಉಮೇಶ ಮರಾಠಿ, ಮೃದಂಗ ವಾದಕ ಸಚಿನ್ ಭಂಡಾರಿ ಹಾಗೂ ಕೊರೊನಾ ಸಂಕಷ್ಟದ ದಿನಗಳಲ್ಲಿ ಯಕ್ಷಗಾನ ತಾಳಮದ್ದಲೆ ಸಂಘಟಿಸಿ ಕಲಾವಿದರ ನೆರವಿಗೆ ನಿಂತ ಹಲವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಜೆ.ಗೌಡ, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ, ಯುವವೇದಿಕೆಯ ಅಧ್ಯಕ್ಷ ಸುಬ್ರಾಯ ಗೌಡ, ಗ್ರಾಮಪಂಚಾಯತ ಮಾಜಿ ಸದಸ್ಯ ಶಿವಾನಂದ ಗೌಡ, ಕರವೇ ತಾಲೂಕಾಧ್ಯಕ್ಷ ಮಂಜುನಾಥ ಗೌಡ, ನಿವೃತ್ತ ಸೈನಿಕ ತಿಮ್ಮಪ್ಪ ಗೌಡ, ಚಂದ್ರ ಗೌಡ, ಲಕ್ಷ್ಮಣ ಗೌಡ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷ ಕಲಾವಿದ ಚಂದ್ರಹಾಸ ಗೌಡ ಸ್ವಾಗತಿಸಿದರು, ನಾಗೇಶ ಗೌಡ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಶಿಕ್ಷಕ ಎಸ್.ಹೆಚ್. ಗೌಡ ವರದಿ ವಾಚಿಸಿದರು ಶಿಕ್ಷಕರಾದ ಗಣಪಯ್ಯ ಗೌಡ, ಗಣಪತಿ ಗೌಡ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಬಳಗದ ಕಲಾವಿದರಿಂದ ವೀರಬರ್ಬರಿಕ ಯಕ್ಷಗಾನ ಪ್ರದರ್ಶನ ನಡೆಯಿತು.
Leave a Comment