ಹಳಿಯಾಳ:- ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ವಿಧಾನಸಭಾ ಅಧಿವೇಶನದಲ್ಲಿ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಶ್ನೇಗಳನ್ನು ಕೆಳುವ ಮೂಲಕ ಗಮನ ಸೆಳೆದಿದ್ದಾರೆ.
ಘೋಟ್ನೇಕರ ಅವರು ಚುಕ್ಕೆ ಗುರುತಿಲ್ಲದ ಎರಡು ಪ್ರಶ್ನೇಗಳನ್ನು ಕೆಳಿದ್ದು ಅದಕ್ಕೆ ಸಂಬಂಧಿಸಿದ ಇಲಾಖೆಯ ಸಚಿವರು ಉತ್ತರಿಸಿದ್ದಾರೆ.
ಪ್ರಶ್ನೇ1- ಜೋಯಿಡಾ ತಾಲೂಕಿನ ಉಳವಿ ಗ್ರಾಪಂ ವ್ಯಾಪ್ತಿಯ ಶಿವಪೂರ, ಹೆಬ್ಬಾಳ, ನೇತುರ್ಗಾ ರಸ್ತೆಯು ತೀರಾ ಹದಗೆಟ್ಟಿದ್ದು ಈ ರಸ್ತೆಯ ಅಭಿವೃದ್ದಿಗೆ ಅರಣ್ಯ ಇಲಾಖೆಯಿಂದ ತೊಂದರೆಯಾಗುತ್ತಿರುವ ಸಂಗತಿ ಸರ್ಕಾರದ ಗಮನಕ್ಕೆ ಬಂದಿದೆಯೇ? ಎಂದು ಕೇಳಲಾಗಿದ್ದು ಇದಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಅರವಿಂದ ಲಿಂಬಾವಳಿ ಅವರು ಉತ್ತರಿಸಿದ್ದು, ಜೋಯಿಡಾದ ಗುಂದ ಹಾಗೂ ಅಣಶಿಯು ವನ್ಯಜೀವಿ ವಲಯ ವ್ಯಾಪ್ತಿಗಳಲ್ಲಿನ ಉಳವಿ ಗ್ರಾಮ ಪಂಚಾಯತಿಯಲ್ಲಿ ಬರುವ ರಸ್ತೆಗಳ ಸುಧಾರಣೆ ಕಾಮಗಾರಿ ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮಾರ್ಗಸೂಚಿಗಳು ಮತ್ತು ಅರಣ್ಯ ಹಕ್ಕು ಕಾಯ್ದೆ 2006ರ ಸೆಕ್ಷನ್ 3(2) ರಲ್ಲಿಯ ಅವಕಾಶಗಳನ್ನು ಉಪಯೋಗಿಸಿಕೊಂಡು ಸಾರ್ವಜನೀಕರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಅನುಮತಿ ನೀಡಲಾಗಿರುತ್ತದೆ. ಸದರಿ ರಸ್ತೆ ಸುಧಾರಣೆಗೆ ಅರಣ್ಯ ಇಲಾಖೆಯಿಂದ ಯಾವುದೇ ತೊಂದರೆ ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಶ್ನೇ2- ಜೋಯಿಡಾ ತಾಲೂಕಿನ ರೈತರ ಆದಾಯದ ಮೂಲವಾದ ಭತ್ತದ ಖರೀದಿ ಕೇಂದ್ರವು ಇಲ್ಲದೇ ಇರುವುದರಿಂದ ದೂರದ ಹಳಿಯಾಳ ಪಟ್ಟಣದಲ್ಲಿ ಭತ್ತ ಖರೀದಿ ಕೇಂದ್ರಕ್ಕೆ ಹೋಗಲು ಆಗದೆ ಬೆಳೆದ ಭತ್ತಕ್ಕೆ ಬೆಂಬಲ ಬೆಲೆ ಸಿಗದೆ ದಲ್ಲಾಳಿಗಳಿಂದ ರೈತರು ಮೋಸ ಹೊಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ? ಹಾಗೂ ಈ ರೀತಿ ಭತ್ತ ಖರೀದಿ ಕೇಂದ್ರ ಜೋಯಿಡಾದಲ್ಲಿ ಇಲ್ಲದೆ ಇರುವುದರಿಂದ ಸಂಕಷ್ಟದಲ್ಲಿರುವ ರೈತರ ಹಿತ ದೃಷ್ಟಿಯಿಂದ ಸರ್ಕಾರ ಕೂಡಲೇ ಜೋಯಿಡಾದಲ್ಲಿ ಮತ್ತು ರಾಮನಗರದಲ್ಲಿ ಭತ್ತದ ಖರೀದಿ ಕೇಂದ್ರ ಪ್ರಾರಂಭಿಸಲು ಕ್ರಮ ಕೈಗೊಳ್ಳುವುದೇ ?, ಹಾಗಾದರೇ ಸರ್ಕಾರಕ್ಕೆ ಸದರಿ ಭತ್ತದ ಖರೀದಿ ಕೇಂದ್ರ ಪ್ರಾರಂಭೀಸಲು ಬೇಕಾಗುವ ಕಾಲಾವಕಾಶ ಎಷ್ಟು? ಎಂದು ಘೊಟ್ನೇಕರ ಅವರು ಪ್ರಶ್ನೀಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ ಅವರು ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ ಸಮೀತಿಯ ಸಭೆಯ ತೀರ್ಮಾನದಂತೆ ಕಾರವಾರ ಜಿಲ್ಲೆಯ ಹಳಿಯಾಳ, ಮುಂಡಗೋಡ, ಶಿರಸಿ ಮತ್ತು ಕುಮಟಾ ತಾಲೂಕುಗಳಲ್ಲಿ ರೈತ ನೊಂದಣಿ ಕೇಂದ್ರ ತೆರೆಯಲಾಗಿರುತ್ತದೆ. ಇದುವರೆಗೆ ಜೋಯಿಡಾ ತಾಲೂಕಿನ ಇಬ್ಬರು ರೈತರು ಭತ್ತವನ್ನು ನೀಡಲು ನೊಂದಣಿ ಮಾಡಿಕೊಂಡಿರುತ್ತಾರೆ. ಹೆಚ್ಚಿನ ಸಂಖ್ಯೆಯ ರೈತರು ಭತ್ತವನ್ನು ನೀಡಲು ನೊಂದಣಿ ಮಾಡಿಕೊಂಡಲ್ಲಿ ಅಗತ್ಯ ಅನುಗುಣವಾಗಿ ಜೋಯಿಡಾ ತಾಲೂಕಿನಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗುವುದು ಎಂದು ಸಚಿವರು ಲಿಖಿತವಾಗಿ ಆಶ್ವಾಸನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಇನ್ನೂ ಹಲವಾರು ಪ್ರಶ್ನೇಗಳನ್ನು ಕೇಳಿದ್ದು ಅವುಗಳಿಗೆ ಉತ್ತರ ಬರಬೇಕಾಗಿದೆ. ಕ್ಷೇತ್ರದಲ್ಲಿನ ಜನರ ಸಮಸ್ಯೆಗಳ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
Leave a Comment