( ನಾನು ಇಪ್ಪತೈದು ವರ್ಷಗಳಿಂದಲೂ ಕಾಂಗ್ರೆಸ್ ಕಾರ್ಯಕರ್ತ – ಮಂಜು ಗೌಡ ಕಾಸರಕೋಡ ಗ್ರಾಮಪಂಚಾಯತ ನೂತನ ಅಧ್ಯಕ್ಷ)
ಹೊನ್ನಾವರ – ಈ ಬಾರಿಯ ಗ್ರಾಮಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿಲ್ಲ, ಕ್ಷೇತ್ರದಲ್ಲಿ ಶಾಸಕರೂ ಇಲ್ಲ ಆದರೂ ಮಂಕಿ ಬ್ಲಾಕ್ ವ್ಯಾಪ್ತಿಯ 16 ಪಂಚಾಯತಗಳಲ್ಲಿ 10 ಪಂಚಾಯತಗಳಲ್ಲಿ ಪಕ್ಷದ ಕಾರ್ಯಕರ್ತರು ಅಧಿಕಾರ ಹಿಡಿಯುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ ಎಂದು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು.

ಅವರು ಪಕ್ಷದ ಕಛೇರಿಯಲ್ಲಿ ನಡೆಸಿದ ಪತ್ರಿಕಾಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನ ದಿನಪತ್ರಿಕೆಯಲ್ಲಿ ಬಿಜೆಪಿ ಶಾಸಕರು ಒಂದು ಜಾಹೀರಾತನ್ನು ಹಾಕಿಕೊಂಡಿದ್ದು ಅದರಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಅಧಿಕಾರ ಹಿಡಿದ ಪಂಚಾಯತಗಳ ಪಟ್ಟಿಯಲ್ಲಿ ಮಾವಿನಕುರ್ವಾ, ಕಾಸರಕೋಡ ಮತ್ತು ಕೆಳಗಿನ ಇಡಗುಂಜಿಯನ್ನು ಸೇರಿಸಿಕೊಂಡಿದ್ದಾರೆ. ಈ ಮೂರೂ ಪಂಚಾಯತಗಳಲ್ಲಿ ಕಾಂಗ್ರೆಸ್ ಬೆಂಬಲಿಗರೇ ಅಧಿಕಾರ ಹಿಡಿದಿದ್ದಾರೆ. ಮಾವಿನಕುರ್ವಾ ಗ್ರಾಮಪಂಚಾಯತ ಉಪಾಧ್ಯಕ್ಷ ಜಿ.ಜಿ.ಶಂಕರ ಕಾಂಗ್ರೆಸ್ ಪಕ್ಷದ ತಾಲೂಕಾ ಕಾರ್ಯದರ್ಶಿಯಾಗಿದ್ದಾರೆ. ಕಾಸರಕೋಡ ಗ್ರಾಮಪಂಚಾಯತ ಅಧ್ಯಕ್ಷರಾದ ಮಂಜು ಜಟ್ಟಿ ಗೌಡ ನಮ್ಮ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದಾರೆ. ತಮ್ಮ ಪಕ್ಷದ ಸಾಧನೆಯನ್ನು ಹೇಳಿಕೊಳ್ಳುವುದು ತಪ್ಪಲ್ಲ, ಆದರೆ ಬೇರೆ ಪಕ್ಷದವರು ಗೆದ್ದ ಪಂಚಾಯತಗಳನ್ನು ತಮ್ಮದೆಂದು ಸಮಾಜಕ್ಕೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ಈ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು ಎಂದು ಮಾದ್ಯಮಗೋಷ್ಠಿ ನಡೆಸಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಕಾಸರಕೋಡ ಗ್ರಾಮಪಂಚಾಯತ ಅಧ್ಯಕ್ಷ ಮಂಜು ಗೌಡ ಮಾತನಾಡಿ ನಾನು ಕಳೆದ 25 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದೇನೆ. ಪಕ್ಷ ನನಗೆ ಅನೇಕ ಹುದ್ದೆಗಳನ್ನು ಜವಾಬ್ಧಾರಿಗಳನ್ನು ನೀಡಿದ್ದು ಅದನ್ನು ನಿರ್ವಹಿಸಿದ್ದೇನೆ. ಈ ಬಾರಿ ನಡೆದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ನಾಲ್ಕನೇಬಾರಿ ಪಂಚಾಯತ ಸದಸ್ಯನಾಗಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತರು 19 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಈ ಬಾರಿ ಅಧಿಕಾರ ಹಿಡಿಯುವುದು ಪಕ್ಕಾ ಆಗಿತ್ತು. ನಮ್ಮ ಪಕ್ಷದ ಸದಸ್ಯರು ಹಾಗೂ ಉಳಿದ ಪಕ್ಷದ ಕೆಲ ಸದಸ್ಯರೂ ನೀವೇ ಈ ಬಾರಿ ಅಧ್ಯಕ್ಷರಾಗಬೇಕು ಎಂದು ಒತ್ತಾಯಿಸಿದ್ದರಿಂದ ಸ್ಪರ್ದಿಸಿ 18 ಮತಗಳನ್ನು ಪಡೆದು ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದೇನೆ. ನಾನೊಬ್ಬ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ಎಂದರು.
ಕೆಳಗಿನೂರು ಗ್ರಾಮಪಂಚಾಯತ ನೂತನ ಅಧ್ಯಕ್ಷ ಗಂಗಾಧರ ಗೌಡ, ತಾಲೂಕಾ ಪಂಚಾಯತ ಸದಸ್ಯ ಗಣಪಯ್ಯ ಗೌಡ, ಕಾಸರಕೋಡ ಗ್ರಾಮಪಂಚಾಯತ ಉಪಾಧ್ಯಕ್ಷೆ ಅನಿತಾ ನಾಯ್ಕ, ತಾಲೂಕಾ ಪಂಚಾಯತ ಮಾಜಿ ಸದಸ್ಯ ರಾಜು ನಾಯ್ಕ ಮಂಕಿ, ಗ್ರಾಮಪಂಚಾಯತ ಸದಸ್ಯರಾದ ಲಿಂಗಾ ಗೌಡ, ಚಂದ್ರಹಾಸ ಗೌಡ, ಕೇಶವ ಗೌಡ ಮುಂತಾದವರು ಹಾಜರಿದ್ದರು.
Leave a Comment