ಭಟ್ಕಳ: ತನ್ನ 2 ಟಿಪ್ಪರ್ ಲಾರಿಗಳನ್ನು ಪೊಲೀಸರು ಯಾವುದೇ ಸಕಾರಣ ಇಲ್ಲದೇ, ಯಾವುದೇ ಪ್ರಕರಣವನ್ನೂ ದಾಖಲಿಸದೇ ಕಾನೂನು ಬಾಹೀರವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಖಾಸಗಿ ದೂರಿನ ಮೇರೆಗೆ ಕೋರ್ಟ ಕಮಿಷನ್ನಿಂದ ವರದಿ ಪಡೆದ ಭಟ್ಕಳ ಜೆಎಮ್ಎಫ್ಸಿ ನ್ಯಾಯಾಲಯ, ಭಟ್ಕಳ ಶಹರ ಪೊಲೀಸ್ ಠಾಣಾ ಆವರಣ ಶೋಧನೆಗೆ ಆದೇಶ ನೀಡಿದೆ.

ಈ ಸಂಬಂಧ ಕುಂದಾಪುರದ ನ್ಯಾಯವಾದಿ ಎನ್.ಎಸ್.ಆರ್. ಭಟ್, ಸುದ್ದಿಗಾರರಿಗೆ ಮಾಹಿತಿ ನೀಡಿದರು. ತಾಲೂಕಿನ ನವಾಯತ ಕಾಲೋನಿಯ ಮಹ್ಮದ್ ಫರ್ಹಾನ್ ಶಾಬಂದ್ರಿ ಎಂಬುವವರು, ಕಳೆದ ಜ.7ರಂದು ಭಟ್ಕಳ ತಾಲೂಕಿನ ಸಿದ್ದೀಕ್ ಸ್ಟ್ರೀಟ್ನಲ್ಲಿ ಟಿಪ್ಪರ್ ವಾಹನಗಳನ್ನು ಉಪಯೋಗಿಸಿಕೊಂಡು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿಗಳು, ಯಾವುದೇ ಕಾರಣ ನೀಡದೇ ತನ್ನ ಎರಡೂ ಟಿಪ್ಪರ್ಗಳನ್ನು ವಶಕ್ಕೆ ಪಡೆದುಕೊಂಡು ಭಟ್ಕಳ ಶಹರ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ, ಟಿಪ್ಪರ್ಗಳನ್ನು ತಮ್ಮ ಬಳಿಯೇ ಅಕ್ರಮವಾಗಿ ಇಟ್ಟುಕೊಂಡಿದ್ದು, ಇಲ್ಲಿಯವರೆಗೂ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ತನಗೆ ಆಗಿರುವ ನಷ್ಟವನ್ನೂ ಭರಿಸಿಕೊಡಬೇಕು ಎಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಾಲಯ, ಈ ಕುರಿತು ವರದಿ ನೀಡುವಂತೆ ಕೋರ್ಟ ಕಮಿಷನ್ನನ್ನು ನೇಮಿಸಿತ್ತು. ನಂತರ ಕಮಿಷನ್ನ ವಕೀಲರು ನೀಡಿದ ವರದಿಯನ್ನು ಪರಿಗಣಿಸಿ ಪೊಲೀಸ್ ಠಾಣಾ ಆವರಣ ಸರ್ಚಗೆ ಆದೇಶ ನೀಡಿದ್ದು, ಎರಡೂ ಟಿಪ್ಪರ್ಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ತಿಳಿಸಿದೆ ಎಂದು ವಿವರಿಸಿದರು.
Leave a Comment