ಭಟ್ಕಳ: ಪಟ್ಟಣದ ರಾಜಾಂಗಣದ ಬಳಿಯ ನಾಗಬನದ ಕಂಪೌಂಡ ನಿರ್ಮಾಣ ಕಾರ್ಯದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಭಟ್ಕಳ ಉಪವಿಭಾಗಾಧಿಕಾರಿಗಳು ಸೂಚಿಸಿದರೂ ಯಾರೊ ಕಿಡಿಗೇಡಿಗಳು ಕಂಪೌಂಡ್ ನಿರ್ಮಿಸಿದ್ದಾರೆ ಎಂದು ತಹಸೀಲ್ದಾರ ಎಸ್ ರವಿಚಂದ್ರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಾಗಬನ ಪ್ರಕರಣ ಸುಖಾಂತ್ಯ ಕಂಡಿತು ಎನ್ನುವಷ್ಟರಲ್ಲೆ ಅಧಿಕಾರಿಗಳು ಇನ್ನೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಸೂಸಗಡಿ ಗ್ರಾಮದ ಸರ್ವೇ ನಂಬರ 524ಬ/4ಬ ನೇದರ ಕ್ಷೇತ್ರ 3 ಗುಂಟೆ 4 ಆಣೆ ರಾಜಾಂಗಣ ನಾಗರಬನ ಜಾಗದಲ್ಲಿ ನಾಗಬನದ ಸುರಕ್ಷತೆ ಸಂಬಂಧಿಸಿದಂತೆ ಶುಕ್ರವಾರ ಕಾರವಾರದ ನಿರ್ಮಿತಿ ಕೇಂದ್ರದವರು ಕಾಮಗಾರಿ ಪ್ರಾರಂಭಿಸಿದಾಗ ಕೆಲ ಸಾರ್ವಜನಿಕರು ಕಾಮಗಾರಿ ನಡೆಸದಂತೆ ಅಡ್ಡಪಡಿಸಿದರು.
ಶಾಂತಿ ಸುವ್ಯವಸ್ಥೆಯನ್ನು ಹಾಳುಪಡಿಸಲು ಕೆಲವರು ಪ್ರಯತ್ನಿಸಿದ ಕಾರಣ ಪಟ್ಟಣದಲ್ಲಿ ಶನಿವಾರ 144 ನಿಷೇದಾಜ್ಷೆ ಜಾರಿ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಅಂದಾಜು 100 ರಿಂದ 150 ಜನ ಮುಸ್ಲಿಂ ಸಮುದಾಯದ ಬಂದು ಕಾಮಗಾರಿ ನಡೆಸದಂತೆ ವಿರೋಧ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿಗಳು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿ ಕಛೇರಿಗೆ ಹೋದ ಬೆನ್ನಲ್ಲೆ ಕೆಲ ಕೀಡಿಗೇಡಿ ನಿಷೇದಾಜ್ಷೆ ಉಲ್ಲಂಘಿಸಿ ಕಂಪೌಂಡ ಕಾರ್ಯ ಪೂರ್ಣಗೊಳಿಸಿದ್ದಾರೆ ಎಂದು ಭಟ್ಕಳ ತಹಶೀಲ್ದಾರ ರವಿಚಂದ್ರ ನಗರ ಪೊಲೀಸ್ ಠಾಣೆಯಲ್ಲಿ ರವಿವಾರ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಯಾವುದೇ ವ್ಯಕ್ತಿಯ ಹೆಸರು ದಾಖಲಿಸಲಿಲ್ಲವಾದರೂ ತಹಶೀಲ್ದಾರರ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸೋಮವಾರ ನಾಗಬನ ಕಂಪೌಂಡ್ಗೆ ಗೇಟ್ ಹಾಗೂ ಮತ್ತೀತರ ಸಲಕರಣೆಗಳನ್ನು ಅಳವಡಿಸಲು ತೆರಳಿದವರಿಗೆ ಅವಕಾಶ ನಿರಾಕರಿಸಲಾಗಿದೆ. ಆಡಳಿತ ಪಕ್ಷದ ಶಾಸಕರೆ ಬಂದು ಮನವಿ ಮಾಡಿದರೂ ಶಾಸಕರ ಮಾತಿಗೂ ಕಿಮ್ಮತ್ತೂ ನೀಡದಿರುವದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
Leave a Comment