ಹೊನ್ನಾವರ – ದಿನಕ್ಕೊಂದು ಸರ್ಕಾರದ ಆದೇಶದಿಂದಲೇ ಅಥವಾ ಕೊರೋನಾ ಬಗ್ಗೆ ಇರುವ ಅಸಡ್ಡೆಯಿಂದಲೂ ಸಾರ್ವಜನಿಕರು ಸಾಮಾಜಿಕ ಅಂತರ ಮರೆಯುತ್ತಾ ವಸ್ತುಗಳ ಖರೀದಿಯಲ್ಲಿ ಮುಗಿ ಬೀಳುವುದು ಸರ್ವೆ ಸಾಮನ್ಯವಾಗಿದೆ.
ಸೋಮವಾರ ಹೊನ್ನಾವರ ಪಟ್ಟಣದ ಬಜಾರ ರಸ್ತೆಯಲ್ಲಿ ಎಲ್ಲಿ ನೋಡಿದರೂ ಜನಸ್ತೋಮ ಕಾಣುತ್ತಿತ್ತು. ಕೊರೊನಾ ನಿಯಂತ್ರಣಕ್ಕಾಗಿ ಕರ್ಫ್ಯೂ ಜಾರಿಮಾಡಲಾಗಿದ್ದರೂ ಸರ್ಕಾರ ಕೆಲವು ವಲಯಗಳಿಗೆ ನೀಡಿದ ರಿಯಾಯಿತಿಯನ್ನೇ ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿರುವ ಸಾರ್ವಜನಿಕರು, ಅಂಗಡಿಕಾರರು ಕೊರೊನಾ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ ಪಟ್ಟಣ ಪ್ರದೇಶದಲ್ಲಿ ಬೇಕಾಬಿಟ್ಟಿ ಜನಜಂಗುಳಿಗೆ ಕಾರಣವಾಗುತ್ತಿರುವ ಮಾಹಿತಿ ಲಭ್ಯವಾದ ಕೆಲವೇ ಕ್ಷಣಗಳಲ್ಲಿ ಪೀಲ್ಡ್ಗೆ ಇಳಿದ ಹೊನ್ನಾವರ ಪೊಲೀಸರು ರೂಲ್ಸ್ ಬ್ರೇಕ್ ಮಾಡಿದವರಿಗೆ ಖಡಕ್ ವಾರ್ನ್ ಮಾಡಿವ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ. ಕೊರೊನಾ ಇಡೀ ದೇಶವನ್ನು ಇನ್ನಿಲ್ಲದಂತೆ ಕಂಗೆಡಿಸಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಬೆಡ್ ಸಿಕ್ಕರೂ ಆಕ್ಸಿಜನ್ ಸಿಗುತ್ತಿಲ್ಲ ಎಂದು ಸೋಂಕಿತರು ಅವರ ಸಂಬಂಧಿಕರು ಗೋಳಾಡುತ್ತಿರುವ ದೃಶ್ಯಾವಳಿಗಳು ಮಾಧ್ಯಮದಲ್ಲಿ ದಿನಬೆಳಗಾದರೆ ಪ್ರಸಾರವಾಗುತ್ತಿದೆ. ಕೊರೊನಾ ಮಹಾಮಾರಿಯಿಂದ ಜನರನ್ನು ರಕ್ಷಿಸುವ ಸಲುವಾಗಿ ಸರ್ಕಾರವೂ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಆದರೆ ತಾವು ಸುರಕ್ಷಿತವಾಗಿರುವ ಜೊತೆಗೆ ಇತರರನ್ನೂ ಸುರಕ್ಷಿತವಾಗಿಡಬೇಕಾದ ಜವಾಬ್ಧಾರಿಯನ್ನು ಅರಿತುಕೊಂಡು ನಿಭಾಯಿಸುವಲ್ಲಿ ಸಾರ್ವಜನಿಕರು ಮುಂದಾಗದಿರುವುದು ವ್ಯವಸ್ಥೆಯನ್ನು ನಿರ್ವಹಿಸುವವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಹಾಲು, ಹಣ್ಣು, ಔಷಧಿ, ತರಕಾರಿ, ದಿನಸಿ, ಗೃಹ ನಿರ್ಮಾಣ ಸಾಮಗ್ರಿಗಳು, ಬ್ಯಾಂಕ್, ಆಸ್ಪತ್ರೆಗಳನ್ನು ತೆರೆಯುವುದಕ್ಕೆ ಕೃಷಿಗೆ ಸಂಬಂಧಿಸಿದ ವ್ಯವಹಾರಕ್ಕೆ ತುಸು ರಿಯಾಯಿತಿ ನೀಡಲಾಗಿದೆ. ಇವುಗಳಿಗೂ ಕಡಿವಾಣ ಹಾಕಿದರೆ ಜನ ಸಾಮಾನ್ಯರ ಬದುಕು ಮತ್ತಷ್ಟು ಕಷ್ಟವಾಗಲಿದೆ ಎನ್ನುವ ಕಾರಣಕ್ಕೆ ನೀಡಿದ ರಿಯಾಯಿತಿಯನ್ನೇ ಬಳಸಿಕೊಂಡು ಕೊರೊನಾ ಸುರಕ್ಷತಾ ಕ್ರಮಗಳನ್ನು ದಿಕ್ಕರಿಸಿ ನಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಮಾಜಿಕ ಅಂತರ ಮರೆಯಾಗಿ ಜನರು ಗುಂಪು ಗುಂಪಾಗಿರುವುದು ಹೆಚ್ಚುತ್ತಿದೆ ಪಟ್ಟಣ ವ್ಯಾಪ್ತಿಯ ಬಜಾರ್ ರಸ್ತೆಯಲ್ಲಿ ಜನದಟ್ಟಣೆ ಇರುವ, ಗಂಟೆ ೧೨ ಆದರೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚದೇ ವ್ಯಾಪಾರದಲ್ಲಿ ತೊಡಗಿದ್ದ ದೃಶ್ಯವನ್ನು ಸೆರೆಹಿಡಿದ ಪತ್ರಕರ್ತರೊಬ್ಬರು ಅದನ್ನು ಸೀದಾ ಪೊಲೀಸ್ ಗ್ರೂಪ್ಗೆ ಸೆಂಡ್ ಮಾಡಿದ್ದರು. ಜನದಟ್ಟಣೆ ಉಂಟಾಗಿರುವ ಪೋಟೋ ನೋಡಿದ ಸಿ.ಪಿ.ಐ ಶ್ರೀಧರ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಅಂಗಡಿಗಳನ್ನು ಮುಚ್ಚಿಸಿ ಗುಂಪು ಗೂಡಿದ ಜನರನ್ನು ಚದುರಿಸಿ ಬಜಾರ್ ಪ್ರದೇಶವನ್ನು ನಿರ್ಜನ ಪ್ರದೇಶವನ್ನಾಗಿಸಿದ್ದಾರೆ.ಇಂದಿನಿಂದ ಪೊಲೀಸರು ಮತ್ತಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದರೆ ಅಚ್ಚರಿಯಿಲ್ಲಅಂಗೈ ಕೊಟ್ಟರೆ ಮುಂಗೈ ನುಂಗುವ ಜನರ ಸ್ವಭಾವದಿಂದಾಗಿ ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದರೂ ಜನರ ಓಡಾಟ, ವ್ಯಾಪಾರ ವಹಿವಾಟುಗಳಿಗೆ ಬ್ರೇಕ್ ಬಿದ್ದಿಲ್ಲ. ಪೊಲೀಸರು ತಡೆದು ದಂಡ ಹಾಕಿದರೆ, ಬೆತ್ತ ಬೀಸಿದರೆ ಅದನ್ನೇ ಪೊಲೀಸರ ದಬ್ಬಾಳಿಕೆ ಎಂದು ಬಿಂಬಿಸುವ ಜನರು ತಾಲೂಕಿನಲ್ಲಿ ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೆ ಕಾನೂನು ವ್ಯವಸ್ಥೆ ಸರಿಯಿಲ್ಲ, ಲಾಕ್ಡೌನ್ ನಿಯಮಗಳನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲ ಎಂದು ಮತ್ತದೇ ಪೊಲೀಸ್ ಇಲಾಖೆಯಮೇಲೇ ಗೂಬೆ ಕೂರಿಸುವ ಪ್ರಯತ್ನಕ್ಕೆ ಶುರು ಹಚ್ಚಿಕೊಳ್ಳುತ್ತಾರೆ. ಕಾರಣ ಜನರ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳದ ಪೊಲೀಸರುಮತ್ತಷ್ಟು ಬಿಗಿ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಹೆಚ್ಚಿದೆ.
Leave a Comment