ಭಟ್ಕಳ:ಭಯೋತ್ಪಾದಕ ಸಂಘಟನೆ ‘ಐಸಿಸ್’ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಭಟ್ಕಳದ ವ್ಯಕ್ತಿಯೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್.ಐ.ಎ), ಸ್ಥಳೀಯ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆಯಲ್ಲಿ ಶುಕ್ರವಾರ ಬಂಧಿಸಿ ಇಂದು ಹೊನ್ನಾವರ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಶಂಕಿತ ಭಯೋತ್ಪಾದಕನನ್ನ ಹಾಜರು ಪಡಿಸಿದ್ದಾರೆ.
ಜಾಲಿಯ ಉಮರ್ ಸ್ಟ್ರೀಟ್ ನಿವಾಸಿ ಜುಫ್ರಿ ಜವಾಹರ್ ದಾಮುದಿ (30) ಬಂಧಿತ ಆರೋಪಿ. ಈತ ಉಗ್ರ ಸಂಘಟನೆಯ ನಿಯತಕಾಲಿಕೆ ‘ವಾಯ್ಸ್ ಆಫ್ ಹಿಂದ್’ ಅನ್ನು ದಕ್ಷಿಣ ಭಾರತದ ಭಾಷೆಗಳಿಗೆ ಭಾಷಾಂತರ ಮಾಡುತ್ತಿದ್ದ. ಈತನ ಹಾಗೂ ಭಟ್ಕಳದ ಸಾಗರ ರಸ್ತೆಯಲ್ಲಿರುವ ಬೇರೊಬ್ಬರ ಮನೆಯಲ್ಲಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದರು. ಎರಡೂ ಕಡೆಗಳಿಂದ ಮೊಬೈಲ್ ಫೋನ್, ಸಿಮ್ಕಾರ್ಡ್ಗಳು, ಹಾರ್ಡ್ಡಿಸ್ಕ್ಗಳು, ಮೆಮೊರಿ ಕಾರ್ಡ್ಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಭಾರತದಲ್ಲಿ ಅಶಾಂತಿ ಉಂಟುಮಾಡಲು ‘ಐಸಿಸ್’ಗೆ ಮುಸ್ಲಿಂ ಯುವಕರನ್ನು ನೇಮಕಾತಿ ಮಾಡಿಕೊಳ್ಳುವ ಆರೋಪದಲ್ಲಿ ‘ವಾಯ್ಸ್ ಆಫ್ ಹಿಂದ್’ ವಿರುದ್ಧ ದೆಹಲಿಯಲ್ಲಿ ಈ ವರ್ಷ ಜೂನ್ 29ರಂದು ಪ್ರಕರಣ ದಾಖಲಾಗಿತ್ತು. ಅದರ ಬರಹಗಳನ್ನು ‘ಅಬು ಹಾಜಿರ್ ಅಲ್ ಬದ್ರಿ’ ಎಂಬ ಐ.ಡಿ ಮೂಲಕ ಭಾಷಾಂತರ ಮಾಡಲಾಗುತ್ತಿತ್ತು. ಆ ವ್ಯಕ್ತಿಯೇ ಶುಕ್ರವಾರ ಭಟ್ಕಳದಲ್ಲಿ ಬಂಧಿತನಾಗಿರುವ ಜುಫ್ರಿ ಜವಾಹರ್ ದಾಮುದಿ ಎಂದು ಗುರುತಿಸಲಾಗಿದೆ. ಈತ ‘ಐಸಿಸ್’ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ 2016ರಲ್ಲಿ ಬಂಧಿತನಾಗಿರುವ ಅದ್ನಾನ್ ಹಸನ್ ದಾಮುದಿಯ ಕಿರಿಯ ಸಹೋದರ ಎಂದು ಎನ್.ಐ.ಎ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 11ರಂದು ಎನ್.ಐ.ಎ ತಂಡವು ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ದಾಳಿ ಮಾಡಿತ್ತು. ಅನಂತನಾಗ್ ಜಿಲ್ಲೆಯ ಅಚಬಲ್ನಲ್ಲಿ ಉಮರ್ ನಿಸಾರ್, ತನ್ವೀರ್ ಅಹ್ಮದ್ ಭಟ್ ಹಾಗೂ ರಮೀಜ್ ಅಹ್ಮದ್ ಲೋನ್ ಎಂಬುವವರನ್ನು ಬಂಧಿಸಿತ್ತು
ನಿನ್ನೆ ಭಟ್ಕಳದಲ್ಲಿ ಮೂವರನ್ನು ವಶಪಡಿಸಿಕೊಂಡು ಎನ್.ಐ. ಎ ತಂಡ ಹೊನ್ನಾವರ ತಾಲ್ಲೂಕಿನ ಮಂಕಿಯಲ್ಲಿ ಮೂವರನ್ನು ವಿಚಾರಣೆ ನಡೆಸಿ ಇಬ್ಬರನ್ನು ಬಿಡುಗಡೆಗೊಳಿಸಿದ್ದು ಓರ್ವ ಆರೋಪಿಯನ್ನು ಬಂಧಿಸಿದ್ದು. ಇಂದು ಬಂದನಕ್ಕೊಳಗಾದ ಶಂಕಿತ ಭಯೋತ್ಪಾದಕನನ್ನ ಹೊನ್ನಾವರ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಭಟ್ಕಳ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ;ನಿಮ್ಮ ಸ್ನೇಹಿತರಿಗೂ ಫಾರ್ವರ್ಡ್ ಮಾಡಿ ಗುಂಪಿಗೆ ಸೇರಿಸಿ.
ಗ್ರುಪ್ ಸೇರಲು ಈ ಲಿಂಕ್ ಒತ್ತಿhttps://chat.whatsapp.com/GtLqeUMgaXDGRtGRyC9KnP
Leave a Comment