‘ಒಂದು ವಾರದೊಳಗೆ ವಿಲೇವಾರಿಗೆ ಸಮರ್ಪಕವಾಗಿ ನಡೆಯುವಂತೆ ಪಂಚಾಯತ ಪಿಡಿಓಗೆ ಗಢುವು’
ಭಟ್ಕಳ : ಇಲ್ಲಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನಿಫಾಬಾದ್ ನಲ್ಲಿ ಕಸ ಮತ್ತು ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಮಾಡಬೇಕೆಂದು ಆಗ್ರಹಿಸಿ ಹನೀಫ್ ವೆಲ್ಪೇರ್ ಅಸೋಸಿಯೇಶನ್ ವತಿಯಿಂದ ಹೆಬಳೆ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಪಂಚಾಯತ ಎದುರು ಪ್ರತಿಭಟಿಸಿ ಬುಧವಾರದಂದು ಮನವಿ ಸಲ್ಲಿಸಿದರು.
ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನಿಫಾಬಾದ್ ನಲ್ಲಿ ಪಂಚಾಯತ್ ವತಿಯಿಂದ ಸಮರ್ಪಕವಾಗಿ ಕಸ ಮತ್ತು ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ಹನಿಫಾಬಾದ್, ರಹಮದ್ ಅಬಾದ್, ಮಾಸ್ಟರ್ ಕಾಲೊನಿ ‘ತಲಾಹಾ ಕಾಲೋನಿ, ಸರ್ಗಂಡಿ ದೇವಸ್ಥಾನದ ರೋಡ್, ಮೀನಾ ರೋಡ್ ಬದಿಗಳಲ್ಲಿ ಕಸ ತ್ಯಾಜ್ಯಗಳು ಬಿದ್ದಿದ್ದು ದುರ್ವಾಸನೆ ಬೀರುತ್ತಲಿದ್ದು ಪಂಚಾಯತ ಇತ್ತ ಗಮನ ಹರಿಸುತ್ತಿಲ್ಲ.

ಈ ಕಸದಿಂದ ನಾಯಿ, ಹಂದಿ, ದನ, ಜಾನುವಾರುಗಳು ರಸ್ತೆ ಬದಿಯಲ್ಲಿನ ಕಸ ತ್ಯಾಜ್ಯ ತಿನ್ನಲು ಬಂದು ಅಪಘಾತಕ್ಕಿಡಾಗಿ ಸಾವನ್ನಪ್ಪಿದ್ದವೆ. ಮತ್ತು ಇದರಿಂದ ರೋಗ ರುಜಿನಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ಕಸ ವಿಲೇವಾರಿಗೆ ಪಂಚಾಯತ್ ಅವರು ಜಾಮಿಯಾ ಮತ್ತಿತರ ಕಡೆ ದಿನಕ್ಕೆ ನಾಲ್ಕು ಸಲ ಬಂದು ಕಸ ವಿಲೇವಾರಿಗೆ ಮುಂದಾಗಲಿದ್ದಾರೆ ಆದರೆ ಅದೇ ಹನಿಫಾಬಾದ್ ವಾರ್ಡ್ ಕಡೆ ಒಂದು ಸಲವೂ ಬರುತ್ತಿಲ್ಲವಾಗಿದೆ.
ಹನಿಫಾಬಾದ್ ವಾರ್ಡ್ಗೆ ಉಮೇನ್ ಕಾಲೇಜು ವತಿಯಿಂದ ಕಸ ವಿಲೇವಾರಿ ಸಲುವಾಗಿ ಹೊಸ ಒಂದು ಗೂಡ್ಸ್ ರಿಕ್ಷಾವನ್ನು ಪಂಚಾಯತಗೆ ಈಗಾಗಲೇ ನೀಡಲಾಗಿದೆ.ಆ ರಿಕ್ಷಾವನ್ನು ಹನೀಫಾಬಾದ್ ವಾರ್ಡ್ ಬಿಟ್ಟು ಬೇರೆ ವಾರ್ಡ್ ಗೆ ಹೋಗಿದ್ದು ಹಲವಾರು ಸಲ ಕಣ್ಣಿಗೆ ಬಿದ್ದಿದೆ. ಸದ್ಯ ರಿಕ್ಷಾ ನಮ್ಮ ಭಾಗಕ್ಕೆ ಕಸ ವಿಲೇವಾರಿಗೆ ಬಾರದೇ ಇರುವುದು ತುಂಬಾ ಬೇಸರ ಸಂಗತಿಯಾಗಿದೆ. ಕಸ ವಿಲೇವಾರಿ ಮಾಡುವುದು ದಿನ ನಿತ್ಯದ ಕೆಲಸವಾಗಿದೆ. ತ್ಯಾಜ್ಯದ ರಾಶಿಯಿಂದ ಊರು ಗಬ್ಬು ನಾರುತ್ತಿದೆ.
ಪಂಚಾಯತಗೆ ಅಸೋಸಿಯೇಷನನಿಂದ ಮನವಿ:
1. ಹನಿಫಾಬಾದ್ ವಾರ್ಡ್ ನಿಂದ ಪ್ರತಿದಿನ ಒಂದು ಸಲ ಕಸ ವಿಲೇವಾರಿ ಮಾಡಬೇಕು.
2. ಡೋರ್ ಟು ಡೋರ್ ದಿನ ಬಿಟ್ಟು ದಿನ ಗೂಡ್ ರಿಕ್ಷಾದಲ್ಲಿ ಕಸ ವಿಲೇವಾರಿ ಮಾಡಬೇಕು.
3. ಕಸ ಹಾಕಲಿಕ್ಕೆ ಪಂಚಾಯತ್ ವತಿಯಿಂದ ಜಾಗ ಗುರುತಿಸಿ ನೀಡಬೇಕು.
4. ಇಲ್ಲವಾದರೆ ಹನೀಫಾಬಾದ್ ವಾರ್ಡನ್ನು ಪಟ್ಟಣ ಪಂಚಾಯ್ತಿ ಅಥವಾ ಪುರಸಭೆಗೆ ಹೋಗಲು ಠರಾವ್ ಪಾಸ್ ಮಾಡಿ ಅವಕಾಶ ನೀಡಬೇಕು.
ಇನ್ನಾದರೂ ಈ ಭಾಗದಲ್ಲಿ ಕಸ ವಿಲೇವಾರಿಗೆ ಪಂಚಾಯತ್ ಆಡಳಿತ ಗಮನ ಹರಿಸುವುದು ತೀರಾ ಅಗತ್ಯವಾಗಿದೆ. ದಿನಪ್ರತಿ ನಮ್ಮ ಭಾಗದಲ್ಲಿ ಕಸ ವಿಲೇವಾರಿಗಾಗಿ ವಾಹನ ಕಳುಹಿಸುವುದು ಅಗತ್ಯವಿದೆ. ಪಂಚಾಯತ್ ಆಡಳಿತ ನಮ್ಮ ಮನವಿಗೆ ಸ್ಪಂದಿಸಿ ಸಮರ್ಪಕ ಕಸ ತ್ಯಾಜ್ಯ ವಿಲೇವಾರಿಗೆ ಮುಂದಾಗಬೇಕಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಮನವಿಗೆ ಸ್ಪಂದಿಸಿ 7 ದಿವಸಗಳ ಕಾಲ ಕಾದು ಪಂಚಾಯತನಿಂದ ಸ್ಪಂದನೆ ಸಿಗದಿದ್ದಲ್ಲಿ ನಂತರ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲಿದ್ದೇವೆ ಎಂಬ ಎಚ್ಚರಿಕೆಯನ್ನು ಇದೇ ಸಂಧರ್ಬದಲ್ಲಿ ಹನೀಫ್ ವೆಲ್ಪೇರ್ ಅಸೋಸಿಯೇಶನ್ ನೀಡಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಪಂಚಾಯತ ಅಭಿವೃದ್ಧಿ ಅಧಿಕಾರಿ ಜಯಂತಿ ನಾಯ್ಕ ಹಾಗೂ ಹೆಬಳೆ ಗ್ರಾಮ ಪಂಚಾಯತಿ ಅಧ್ಯಕ್ಷರು ಈ ಕುರಿತು ಒಂದು ವಾರದೊಳಗಾಗಿ ಸಭೆ ಕರೆದು ಒಂದು ನಿರ್ಣಯ ತೆಗೆದುಕೊಂಡು ಅದನ್ನು ಕಾರ್ಯರೂಪಕ್ಕೆ ತರಲಿದ್ದೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹನೀಫ್ ವೆಲ್ಪೇರ್ ಅಸೋಸಿಯೇಶನ್ ಅಧ್ಯಕ್ಷ ನಿಸ್ಸಾರ ಅಹ್ಮದ್ ರುಕ್ನುದ್ದಿನ್, ಕಾರ್ಯದರ್ಶಿ ಅಬ್ದುಲ್ಲಾ ರುಕ್ನುದ್ದಿನ್, ಉಪಾಧ್ಯಕ್ಷ ಅಬ್ದುಲ್ ಖಾದಿರ್, ಸದಸ್ಯರಾದ ಮೋಗೈರ ಎಮ್.ಜೆ., ಉಮೈದ್ ರುಕ್ನುದ್ದಿನ್ , ಉಮೇರ ಎಸ್.ಎಮ್., ಶಬ್ಬೀರ ಕುಂದನಗುಡಾ, ಮಾಜಿ ಪಂಚಾಯತ ಸದಸ್ಯ ಉಪೇಂದ್ರ ಮೋಗೇರ, ಹಾಲಿ ಹೆಬಳೆ ಐದು ಮಂದಿ ಪಂಚಾಯತ ಸದಸ್ಯರು, ಸಾರ್ವಜನಿಕರು ಇದ್ದರು.
Leave a Comment