ಯಲ್ಲಾಪುರ: ಸಹ್ಯಾದ್ರಿ ಸಂಚಯ ಸಂಸ್ಥೆಯ ವತಿಯಿಂದ ದಿನೇಶ ಹೊಳ್ಳ ಅವರ ನೇತೃತ್ವದಲ್ಲಿ ಅಡವಿ ಮಕ್ಕಳ ವಿದ್ಯಾ ವಿಕಾಸಕ್ಕಾಗಿ ವನ ಚೇತನ ಶಿಬಿರ ನಡೆಸಲಾಗುತ್ತಿದೆ. ಕಳೆದ ತಿಂಗಳು ಯಲ್ಲಾಪುರ ತಾಲೂಕಿನ ನಂದೊಳ್ಳಿ ಶಾಲೆಯಿಂದ ಆರಂಭಗೊAಡು ಈವರೆಗೆ ೧೯ ಶಾಲೆಗಳಲ್ಲಿ ಶಿಬಿರ ನಡೆದಿದೆ. ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಕುಂಬ್ರಿ ಹಳ್ಳಕ್ಕೆ ದಿನೇಶ ಹೊಳ್ಳ ನೇತೃತ್ವದ ವನ ಚೇತನ ತಂಡ ಕಾಲು ಸಂಕ ನಿರ್ಮಿಸುವ ಮೂಲಕ ಗ್ರಾಮಸ್ಥರಿಗೆ ನೆರವಾಗಿದೆ.
ಬೆಟ್ಟದ ಮೇಲೆ ೩ ಮನೆಗಳು, ಬೆಟ್ಟದ ಕಣಿವೆಯಲ್ಲಿ ತಾಳಿಕುಂಬ್ರಿ ಹೊಳೆ, ಸುತ್ತಲೂ ದಟ್ಟ ಅರಣ್ಯ. ಹಳ್ಳದಾಚೆಗಿನ ಜನರಿಗೆ ಹಳ್ಳ ದಾಟಿ ಹೋಗುವುದೇ ಒಂದು ಸಮಸ್ಯೆ ಆಗಿತ್ತು. ಅಲ್ಲಿನ ಮಕ್ಕಳಿಗೆ ಶಾಲೆಗೆ ಹೋಗಲು, ಗ್ರಾಮಸ್ಥರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಾಟ ಮಾಡಲು ಈ ಹಳ್ಳ ದಾಟಿಯೇ ಹೋಗಬೇಕು.
ಯಾರಾದರೂ ಅನಾರೋಗ್ಯಕ್ಕೀಡಾದರೆ ಆಸ್ಪತ್ರೆಗೆ ಸಾಗಿಸುವುದಂತೂ ದೂರದ ಮಾತು. ಹಳ್ಳ ದಾಟಲು ಗ್ರಾಮಸ್ಥರೇ ಮಾಡಿಕೊಂಡ ಮರದ ಕಾಲು ಸಂಕವೇ ಗತಿ. ಮಳೆಗಾಲದಲ್ಲಿ ಮಳೆಯ ಅಬ್ಬರ ಜೋರಾದರೆ ಹಳ್ಳ ಮೇಲೇರಿ ಬಂದು, ಆ ಕಾಲು ಸಂಕ ನೀರುಪಾಲಾಗುತ್ತದೆ. ಹಾಗಾದಲ್ಲಿ ಗ್ರಾಮಸ್ಥರದು ಸಂಪರ್ಕಕೊAಡಿ ಕಳಚಿಕೊಂಡು ಪರದಾಡುವಾಂತಾಗುತ್ತದೆ.
ಗ್ರಾಮಸ್ಥರು ಕಳೆದ ಹಲವಾರು ವರ್ಷಗಳಿಂದ ಈ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳಲ್ಲಿ ಆಗ್ರಹಿಸುತ್ತ ಬಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಕಳೆದ ಜುಲೈನಲ್ಲಿ ಬಂದ ಪ್ರವಾಹದ ಸಂದರ್ಭದಲ್ಲೂ ಗ್ರಾಮಸ್ಥರು ನಿರ್ಮಿಸಿಕೊಂಡ ಕಾಲು ಸಂಕಕ್ಕೆ ಧಕ್ಕೆಯಾಗಿ ಹಳ್ಳ ದಾಟುವುದು ಸಮಸ್ಯೆಯಾಗಿ ಪರಿಣಮಿಸಿತ್ತು.
ವನ ಚೇತನ’ ತಂಡದವರು ಶಿರ್ಲೆ-ತಾಳಿಕುಂಬ್ರಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರ ದುಸ್ಥಿತಿಯನ್ನು ಕಣ್ಣಾರೆ ಕಂಡಿದ್ದರು. ಇದಕ್ಕೆ ಕೈಲಾದ ಸಹಾಯ ಮಾಡುವ ಕುರಿತು ಚಿಂತನೆ ನಡೆಸಿದಾಗ ಧಾರವಾಡದ ಸಂಜಯ ಉಪ್ಪಿನ ಅವರು ಮುರಿದು ಹೋದ ಸಂಕ ದುರಸ್ತಿಗೆ ಅಗತ್ಯವಾದ ಸಲಕರಣೆಗಳನ್ನು ನೀಡಿ ಸಹಕರಿಸಿದರು. ಮುರಿದು ಹೋದ ಸೇತುವೆಯನ್ನು ದುರಸ್ತಿ ಮಾಡಿ, ಸುಸಜ್ಜಿತಗೊಳಿಸುವ ಕಾರ್ಯವನ್ನು ವನ ಚೇತನ ತಂಡ ನಡೆಸಿತು.
ದಿನೇಶ ಹೊಳ್ಳ ಅವರ ನೇತೃತ್ವದಲ್ಲಿ ವನ ಚೇತನ ತಂಡದ ಅನಂತ ಸಿದ್ದಿ, ರಾಜೇಶ್ವರಿ ಸಿದ್ದಿ, ಸ್ಥಳೀಯರಾದ ಶಿರ್ಲೆಯ ಬಾರ್ಕೆಲ್ ಸಿದ್ದಿ, ಗಣಪ ಸಿದ್ದಿ, ಸೀತಾ ಸಿದ್ದಿ, ಮಾದೇವ ಸಿದ್ದಿ, ನಾಗಪ್ಪ ಸಿದ್ದಿ, ರಾಘವ ಸಿದ್ದಿ, ಸುಬ್ಬಾ ಸಿದ್ದಿ, ಮಂಜು ಸಿದ್ದಿ, ನವೀನ್ ಸಿದ್ದಿ ಇತರರು ಶ್ರಮದಾನ ನಡೆಸಿ, ಸೇತುವೆಯನ್ನು ಮರು ನಿರ್ಮಿಸಿದರು. ಸೇತುವೆಗೆ ಹಗ್ಗ, ಸರಿಗೆ ಇತರ ಸಲಕರಣೆಗಳನ್ನು ಹಾಕಿ ಮುರಿಯದಂತೆ ಗಟ್ಟಿಗೊಳಿಸಿದರು. ಇದೀಗ ಯಾವ ಆತಂಕವಿಲ್ಲದೇ ಗ್ರಾಮಸ್ಥರು, ಮಕ್ಕಳು ಹಳ್ಳ ದಾಟಿ ಹೋಗುವಂತಾಗಿದ್ದು, ವನ ಚೇತನದ ನೆರವಿಗೆ ಗ್ರಾಮಸ್ಥರಿಂದ ಶ್ಲಾಘನೆ ವ್ಯಕ್ತವಾಗಿದೆ.
ಬುಡಕಟ್ಟು ಸಮುದಾಯದ ಮಕ್ಕಳ ಶೈಕ್ಷಣಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ವನ ಚೇತನದ ಮೂಲಕ ನಡೆಸಲಾಗುತ್ತದೆ. ನಗರಗಳಲ್ಲಿ ಶೈಕ್ಷಣಿಕ ವ್ಯವಸ್ಥೆ ಉತ್ತಮಗೊಳಿಸಲು ಸಾಕಷ್ಟು ವ್ಯವಸ್ಥೆಗಳಿರುತ್ತವೆ. ಆದರೆ ಗ್ರಾಮೀಣ ಭಾಗದ ಬುಡಕಟ್ಟು ಜನರಿಗೆ ಈ ವ್ಯವಸ್ಥೆಗಳಿರುವುದಿಲ್ಲ. ಅವರ ಮನೋವಿಕಾಸಕ್ಕೆ ಅಗತ್ಯವಾದ ಪರ್ಯಾಯ ಕಲಿಕೆಯನ್ನು ಶಿಬಿರದ ಮೂಲಕ ನೀಡಲಾಗುತ್ತಿದೆ. ಅದಕ್ಕೆ ಅಗತ್ಯವಿದ್ದಲ್ಲಿ ಟಿವಿ, ಕಲಿಕಾ ಸಾಮಗ್ರಿಗಳನ್ನೂ ಸಹ ನೀಡಲಾಗುತ್ತದೆ. ಬುಡಕಟ್ಟು ಜನರ ಹಾಡಿಗಳಿಗೆ ತೆರಳಿ, ಅವರ ಬದುಕಿನ ಬವಣೆಗಳನ್ನು ಅರಿತು ಅವರಿಗೆ ನೆರವಾಗುವ ಪ್ರಯತ್ನವನ್ನೂ ಮಾಡಲಾಗುತ್ತಿದೆ —– ವನ ಚೇತನ ತಂಡದ ಮುಖ್ಯಸ್ಥ ದಿನೇಶ ಹೊಳ್ಳ ತಿಳಿಸಿದರು
Leave a Comment