ಯಲ್ಲಾಪುರ : .ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. . ಅನಾಥ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲು ಕಾನೂನಿನಲ್ಲಿ ಸೌಲಭ್ಯವಿದೆ. ಆದರೆ ಜನತೆಗೆ ಇದರೆ ಬಗ್ಗೆ ಅರಿವಿಲ್ಲದಂತಾಗಿದೆ. ಇದರ ಕುರಿತು ಅರಿವನ್ನು ಮೂಡಿಸುವ ಕಾರ್ಯ ನಮ್ಮೆಲ್ಲರಿಂದ ಹಾಗೂ ವಿಶೇಷವಾಗಿ ಜನರೊಡನೆ ನೇರವಾಗಿ ಬೆರೆಯುವ ಆಶಾ ಕಾರ್ಯಕರ್ತೆಯರಿಂದ ಆಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ನಾಗಮ್ಮ ಎಚ್. ಇಚ್ಚಣಗಿ ಹೇಳಿದರು.
ಅವರು ಪಟ್ಟಣದ ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಿವಿಲ್ ನ್ಯಾಯಾಧೀಶಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸಹ ಕಾರ್ಯದರ್ಶಿ ಓಂಕಾರ ಮೂರ್ತಿ ಎಚ್. ಮಾತನಾಡಿ, ಸಾಮಾನ್ಯವಾಗಿ ಮಾನಸಿಕ ರೋಗಿಗಳು ಎಂದರೆ ಹುಚ್ಚರು ಎಂಬ ಭಾವನೆ ಇದೆ. ಆದರೆ ಸಾಮಾನ್ಯ ಕಾಯಿಲೆಗಳಂತೆ ಮಾನಸಿಕ ರೋಗವೂ ಎಲ್ಲರನ್ನು ಕಾಡುತ್ತಿದೆ. ಮಾನಸಿಕ ಆರೋಗ್ಯವೂ ಸರಿಯಾಗಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಈ ಕುರಿತು ಇನ್ನಷ್ಟು ಜಾಗೃತರಾಗೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಮಾನವ ದುಡ್ಡಿನ ಹಿಂದೆ ಓಡುತ್ತಿದ್ದಾನೆ. ಅದನ್ನು ಸಂಪಾದಿಸಲು ತನ್ನೆಲ್ಲ ಮಿತಿಗಳನ್ನು ಮೀರುತ್ತಿದ್ದಾನೆ. ಇವೆಲ್ಲವಗಳು ಮಾನವನ ಮಾನಸಿಕ ಆರೋಗ್ಯವನ್ನು ಕೆಡಿಸುತ್ತಿವೆ. ಜನರು ಒತ್ತಡದ ಜೀವನವನ್ನು ಜೀವಿಸುವಂತಾಗಿದೆ. ಇವಲ್ಲವುಗಳಿಗೆ ಪರಿಹಾರವೆಂದರೆ ಉತ್ತಮ ಜೀವನ ಪದ್ದತಿ, ನಾವು ಎಷ್ಟೇ ಒತ್ತಡದಲ್ಲಿದ್ದರೂ ಕೆಲ ಸಮಯವನ್ನು ನಮ್ಮಿಷ್ಟದ ಹವ್ಯಾಸಕ್ಕಾಗಲೀ, ವ್ಯಾಯಾಮಕ್ಕಾಗಲಿ ಕಾಯ್ದಿರಿಸುವುದರಿಂದ, ಒತ್ತಡವನ್ನು ದೂರಮಾಡಬಹುದು. ಇದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವೂ ಸಹ ಉತ್ತಮವಾಗಿರಲು ಸಾಧ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ಭಟ್ ಮಾತನಾಡಿ, ಹಿಂದಿನ ಭಾರತೀಯ ಪದ್ಧತಿಯಂತೆ ಇಂದೂ ಸಹ ಜೀವನ ನಡೆದುಕೊಂಡು ಬಂದಿದ್ದಲ್ಲಿ, ಇಂದು ಈ ಮಾನಸಿಕ ಆರೋಗ್ಯ ದಿನವನ್ನು ಆಚರಿಸುವ ಪ್ರಮೆಯ ವೇ ಇರುತ್ತಿರಲಿಲ್ಲ.
ವಕೀಲ ಎನ್.ಟಿ. ಗಾಂವ್ಕರ ವಿಶ್ವ ಮಾನಸಿಕ ದಿನದ ಕುರಿತು ಉಪನ್ಯಾಸ ನೀಡಿ, ಈ ದಿನವು ಮಾನಸಿಕ ಅಸ್ವಸ್ಥರ ಕುರಿತು ಯೋಚಿಸುವ ದಿನವಾಗಿದೆ. ಹೊರಗಿನಿಂದ ಸಾಮಾನ್ಯವಾಗಿ ಜೀವನ ನಡೆಸುವ ಎಷ್ಟೋ ಜನ ಒಳಗಿನಿಂದ ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿರುತ್ತಾರೆ. ಅಂತವರನ್ನು ಗುರುತಿಸಿ, ಸರಿಯಾದ ಮಾರ್ಗದರ್ಶನ ನೀಡಿ, ಉತ್ತಮ ಜೀವನ ನಡೆಸಲು ಸಹಾಯ ಮಾಡಬೇಕಿದೆ. ಎಂದರು
ಈ ಸಂದರ್ಭದಲ್ಲಿ ನಂದೊಳ್ಳಿ ಪಿ.ಎಚ್.ಸಿ. ವೈದ್ಯಾಧಿಕಾರಿ ಡಾ. ತೇಜಸ್ವಿ, ವಕೀಲೆ ಬೀಬಿ ಅಮೀನಾ ವೇದಿಕೆಯಲ್ಲಿದ್ದರು. ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ತಾಲೂಕಾಸ್ಪತ್ರೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ. ಭಟ್ ಸ್ವಾಗತಿಸಿ ನಿರೂಪಿಸಿದರು.
Leave a Comment