ಭವ್ಯ ಸಮಾಜ ನಿರ್ಮಾಣವಾಗುವುದು ಶಿಕ್ಷಣದಿಂದ ಮಾತ್ರ ಸಾಧ್ಯ ಅಂತಹ ಶಿಕ್ಷಣಗಳು ನಗರ ಪ್ರದೇಶಕ್ಕೆ ಸೀಮಿತವಾಗದೆ ಹಳ್ಳಿಗಳಿಗೆ ಪ್ರವೇಶವಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿಗಳಾದ ಶ್ರೀ ಮಾರುತಿ ಗುರೂಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಉಪೋಣಿ ಕ್ಲಸ್ಟರ್ ವ್ಯಾಪ್ತಿಯ ಯಲಕೊಟ್ಟಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಕೊಡುಗೆ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಗ್ರಾಮಸ್ಥರಲ್ಲಿ ಒಗ್ಗಟ್ಟಿದ್ದರೆ ಯಾವುದೇ ಕಾರ್ಯವನ್ನು ಸುಲಲಿತವಾಗಿ ಮಾಡಬಹುದು. ಖನಿಜ ರೂಪದಲ್ಲಿರುವ ಚಿನ್ನವು ಮಸುಕಾಗಿರುತ್ತದೆ.
ಅದಕ್ಕೆ ಹೊಳಪು ನೀಡಿದರೆ ಚಿನ್ನವಾಗುತ್ತದೆ.ಹಾಗೆಯೇ ಯಲಕೊಟ್ಟಿಗೆ ಶಾಲೆ ಖನಿಜ ರೂಪದಿಂದ ಹೊಳಪನ್ನು ನೀಡುವ ಕಾರ್ಯವು ನಡೆಯುತ್ತಿದೆ ಎಂದರು. “ಸಾಮಾಜಿಕ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಯಲಕೊಟ್ಟಿಗೆ ನಾಗರಿಕರು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯ”.ವಿದ್ಯಾರ್ಥಿಗಳು ದಾನ ಪಡೆಯುವ ಜೊತೆ ದಾನ ನೀಡುವ ವ್ಯಕ್ತಿಯಾಗಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು. ಮಕ್ಕಳು ಪುಸ್ತಕದವಸ್ತುವಾಗಬಾರದು,ಮೌಲ್ಯಯುತ ಸಂಸ್ಕಾರಯುತ ವ್ಯಕ್ತಿಗಳಾಗಬೇಕು. ತಂದೆ-ತಾಯಿಗಳು ಮಕ್ಕಳಿಗೆ ಅನುಭವದ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು. ಏಕರೂಪ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು ಅದನ್ನು ಎಲ್ಲರೂ ಸ್ವಾಗತಿಸಿ ಎಂದರು. ಸಂಸ್ಕ್ರತಿ, ಆಚಾರ-ವಿಚಾರಗಳು ವ್ಯಕ್ತರೂಪದಲ್ಲಿರಬೇಕು ಅದು ಶಿಕ್ಷಕರಿಂದ ಸಾಧ್ಯ ಎಂದರು. ಈ ನಿಟ್ಟಿನಲ್ಲಿ ಇಲ್ಲಿನ ಶಿಕ್ಷಕರ ಸೇವೆ ಶ್ಲಾಘನೀಯ ಎಂದರು.ರಾಷ್ಟ್ರಮಟ್ಟದ ಹೆಸರು ಗಳಿಸುತ್ತಿರುವ ಈ ಶಾಲೆಯ ವಿದ್ಯಾರ್ಥಿಗಳು ಬಂಗಾರದ ಚಿಲುಮೆಗಳಾಗಿ ಹೊರಹೊಮ್ಮಲಿ ಇನ್ನಷ್ಟು ಶೈಕ್ಷಣಿಕ ಪ್ರಗತಿ ಸಾಧಿಸಲು ಸಂಘಟಿತರಾಗಿ ಶ್ರಮಿಸಿ ಎಂದು ಕರೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಮ್ ಹೆಗಡೆ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯಾಗುತ್ತಿದೆ. ಕೊವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲಾವೃಂದದೊಂದಿಗೆ ,ಊರ ನಾಗರಿಕರು ಆನ್ಲೈನ್ ಶಿಕ್ಷಣ ವ್ಯವಸ್ಥೆ ಕಲ್ಪಿಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಯಶಸ್ವಿಯಾದರು. ಈ ಶಾಲೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮ ಹಬ್ಬದಂತೆ ಸಂಭ್ರಮಿಸುತ್ತಾರೆ. ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಎನ್ನದೆ ಅದನ್ನು ಮೀರಿಸಿ ಮುಂದೆ ಹೋಗುತ್ತಿರುವುದು ಶಿಕ್ಷಣ ಇಲಾಖೆಗೆ ಹೆಮ್ಮೆ, ಇದು ಜಿಲ್ಲೆಗೆ ಮಾದರಿ ಶಾಲೆ ಆಗಿದೆ ಎಂದರು.
ಮುರಾರ್ಜಿ ದೇಸಾಯಿ ಮತ್ತು ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಚಿದಾನಂದ ನಾಯ್ಕ, ಮಿಥುನ್ಗೌಡ, ಪ್ರತಿಕಾ ನಾಯ್ಕ ಮತ್ತು ಪ್ರಿಯಾಂಕ ಮರಾಠಿ ಅವರನ್ನುಸನ್ಮಾನಿಸಿ ಪುರಸ್ಕರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಕೇಶವ ಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಲೆಗೆ ವಿಠಲ್ ಮರಾಠಿ ಅವರು ಒಂದು ಕಂಪ್ಯೂಟರ್, ಸತೀಶ ನಾಯ್ಕ ಬೀರನಗೋಡ ಅವರು ಕಲರ್ ಪ್ರಿಂಟರ್, ಮಂಜುನಾಥ ನಾಯ್ಕ ಅವರು ಡಯಾಸ್ ಕೊಡುಗೆ ನೀಡಿದರು. ಬಂಡೂರೇಶ್ವರಿ ದೇವಸ್ಥಾನದ ಪ್ರಶಾಂತ್ ನಾಯ್ಕ ಅವರು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಪ್ರಭಾರ ಮುಖ್ಯ ಶಿಕ್ಷಕ ಸುಬ್ರಾಯ ಶಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಆರ್ಪಿ ಸತೀಶ ನಾಯ್ಕ, ಸಿಆರ್ಪಿ ಸುಭಾಷ ನಾಯ್ಕ, ಉಪೋಣಿ ಗ್ರಾಪಂ ಸದಸ್ಯ ಮಂಜುನಾಥ ಗೌಡ, ಎಸ್ ಡಿಎಂಸಿ ಉಪಾಧ್ಯಕ್ಷೆ ನಾಗರತ್ನ ನಾಯ್ಕ,ಶಿಕ್ಷಕಿ ಶೋಭಾ ಶಾನಭಾಗ, ವನಮಾಲಿನಿ ಸೇವಾ ಸಮಿತಿ ಅಧ್ಯಕ್ಷ ರಾಮಗೌಡ ಇತರರು ಉಪಸ್ಥಿತರಿದ್ದರು.ಎಮ್.ಟಿ ನಾಯ್ಕ ಮೂಡ್ಕಣಿ ಕಾರ್ಯಕ್ರಮ ನಿರ್ವಹಿಸಿದರು.
ಶಾಲಾ ವಿಧ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆದು ಮನರಂಜಿಸಿತು.
Leave a Comment