ಕಾರವಾರ:ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಇತರ ಚುನಾವಣೆಯಲ್ಲಿ ಪೂರ್ತಿ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಭೆ, ಸಮಾರಂಭ, ಹೊಸ ಕಾಮಗಾರಿಗೆ ಸದ್ಯ ಅವಕಾಶವಿಲ್ಲ ಎಂದರು.

ಕರ್ನಾಟಕ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ದ್ವೈವಾರ್ಷಿಕ ಚುನಾವಣೆ-2021ಘೋಷಣೆಯಾಗಿದ್ದು, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಚುನಾವಣೆಗೆ ಸಂಬಂಧಿಸಿದಂತೆ ನ. 16 ರಂದು ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರಗಳನ್ನು ಸಲ್ಲಿಸಲು 23 ಕೊನೆಯ ದಿನವಾದರೆ, ನ. 24 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್ 10 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, 14 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. 16 ರಂದು ಸಂಪೂರ್ಣವಾಗಿ ಚುನಾವಣೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಲಾಗುವುದು ಎಂದರು.
ಚುನಾವಣಾನೀತಿ ಸಂಹಿತೆಯು ಡಿಸೆಂಬರ್ 16 ರವರೆಗೂ ಜಾರಿಯಲ್ಲಿರಲಿದೆ. ಕಳೆದ ಲೋಕಸಭೆಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಇರುವ ನಿಯಮಗಳು ಹಾಗೂ ವ್ಯವಸ್ಥೆ ಈ ಚುನಾವಣೆಯಲ್ಲೂ ಚಾಲ್ತಿಯಲ್ಲಿರಲಿದೆ. ಜಿಲ್ಲೆಯಲ್ಲಿ ಒಟ್ಟು 227 ಗ್ರಾಮ ಪಂಚಾಯತ್ ಮತ್ತು 11 ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣಾ ನಡೆಯಲಿದ್ದು, ಗ್ರಾಮ ಪಂಚಾಯತಿಯ 2662 ಮತದಾರರು ಮತ್ತು ಸ್ಥಳೀಯ ಸಂಸ್ಥೆಯ 228 ಮತದಾರರು ಸೇರಿ 2890 ಕರಡು ಮತದಾರರು ಇದ್ದು, ಒಟ್ಟು 238 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದರು.
ಚುನಾವಣೆಯನ್ನು ಶಿಸ್ತುಬದ್ದ ಹಾಗೂ ಸೂಸುತ್ರವಾಗಿ ನಡೆಸಲು ತಾಲೂಕಾ ಮಟ್ಟದಲ್ಲಿ ಫ್ಲೈಯಿಂಗ್ ಸ್ಕಾಡ್ ತಂಡ ರಚಿಸಲಾಗಿದೆ. ಎಂ.ಸಿ.ಎಂಸಿ. ತಂಡ ಕೂಡಾ ರಚಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಚ್. ಕೆ. ಕೃಷ್ಣಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಇದ್ದರು.
Leave a Comment