ಭಟ್ಕಳ:- ಕರಾವಳಿಯ ಸಮಾಚಾರ ವೆಬ್ ಪೋರ್ಟಲ್ನ ವರದಿಗಾರ ಅರ್ಜುನ ಮಲ್ಯ ಮೇಲೆ ಮುಸುಕುದಾರಿಗಳ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ನಡೆದಿದೆ.
ಕಚೇರಿ ಮುಚ್ಚಿ ಅರ್ಜುನ್ ಅವರು ಮನೆಗೆ ತೆರಳುತ್ತಿದ್ದಾಗ ಈ ಹಲ್ಲೆ ನಡೆದಿದೆ. ಅರ್ಜುನ ಅವರು ತಾಲೂಕಿನ ಬೆಳಕೆ ಬಳಿ ತಲುಪಿದಾಗ ಬೈಕ್ಗಳ ಮೇಲೆ ಮುಖಕ್ಕೆ ಮುಸುಕು ಹಾಕಿಕೊಂಡು ಬಂದ 6 ಜನ ದುಷ್ಕರ್ಮಿಗಳು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ರಾಡ್ ಹಾಗೂ ಮರದ ತುಂಡುಗಳಿಂದ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಹೊಡೆದಿರುವ ದುಷ್ಕರ್ಮಿಗಳ ಹಲ್ಲೆಯ ಪರಿಣಾಮ ಮೂಳೆ ಮುರಿದು ಅರ್ಜುನ್ ಕೈ ನೇತಾಡುತ್ತಿತ್ತು. ಹೆಲ್ಮೇಟ್ ಧರಿಸಿದ್ದರಿಂದ ತಲೆಗೆ ತೀವ್ರ ಗಾಯಗಳಾಗದೆ ಪಾರಾಗಿದ್ದಾರೆ .
ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅರ್ಜುನ ಅವರು ಕ್ಲಬ್ವೊಂದರಲ್ಲಿ ನಡೆಯುತ್ತಿದ್ದ ಅಕ್ರಮದ ಬಗ್ಗೆ ವರದಿ ಮಾಡಿದ್ದ ಕಾರಣಕ್ಕೆ ಈ
ಹಲ್ಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಗ್ರಾಮೀಣ ಠಾಣೆ ಪೊಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈ ಕೊಂಡಿದ್ದಾರೆ.
ಖಂಡನೆ: ಅರ್ಜುನ ಮಲ್ಯ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಹಲ್ಲೆಯನ್ನು ಕರ್ನಾಟಕ ಜರ್ನಲಿಸ್ಟ್ ಅಸೋಸಿಯೇಶನ್ನ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ ತೀವ್ರವಾಗಿ ಖಂಡಿಸಿದ್ದಾರೆ. ಪತ್ರಕರ್ತರು ತಮ್ಮ ಕರ್ತವ್ಯವನ್ನು ನಿರ್ಭೀತಿಯಿಂದ ಮಾಡಲು ಅವಕಾಶ ಸಿಗಬೇಕು. ಹೀಗೆ ದುಷ್ಕರ್ಮಿಗಳು ಕಾನೂನನ್ನು ಪದೇ ಪದೇ ಕೈಗೆ ತೆಗೆದುಕೊಂಡು ಹಲ್ಲೆ ನಡೆಸಿದರೆ ಕರ್ತವ್ಯ ನಿರ್ವಹಿಸುವುದು ಪತ್ರಕರ್ತರಿಗೆ ಕಷ್ಟವಾಗುತ್ತದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ಗಮನಹರಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
Leave a Comment