ಯಲ್ಲಾಪುರ: ಜಿಲ್ಲೆಯ ಕೇಂದ್ರ ಸ್ಥಳ ದಲ್ಲಿರುವ ಯಲ್ಲಾಪುರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಬೇಕೆಂಬ ಬಹುಕಾಲದ ಕನಸನ್ನು ನನಸು ಮಾಡುವ ದಾರಿಯಲ್ಲಿ ಈಗ ಯಲ್ಲಾಪುರ ಲಾರಿ ಮಾಲೀಕರ ಸಂಘದ ಅಭಿವೃದ್ದಿ ಸಮಿತಿ ಹೆಜ್ಜೆ ಇಟ್ಟಿದ್ದು, ಟರ್ಮಿನಲ್ಗೆ ಮೀಸಲಿಟ್ಟ ಜಾಗವನ್ನು ಭರದಿಂದ ಸಮತಟ್ಟು ಮಾಡುವ ಕಾರ್ಯವನ್ನು ಆರಂಭ ಮಾಡಿದೆ.
ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ೬೩ ಹಾದು ಹೋಗಿರುವುದರಿಂದ ಲಾರಿಗಳು ರಸ್ತೆಯ ಮೇಲೆಯೇ ನಿಲ್ಲುವುದು ಸಾಮಾನ್ಯವಾಗಿತ್ತು. ಇದು ಸಾಕಷ್ಟು ಅಪಘಾತ, ಜೀವಹಾನಿಗೆ ದಾರಿ ಮಾಡಿಕೊಟ್ಟಿತ್ತು. ಜೊತೆಗೆ ದೂರದೂರದಿಂದ ಬರುವ ಲಾರಿ ಚಾಲಕರಿಗೂ ವಿಶ್ರಾಂತಿಗೆ ಅಗತ್ಯ ವ್ಯವಸ್ಥೆಯ ಕೊರತೆಯಿತ್ತು.
ಈ ಹಿನ್ನೆಲೆಯಲ್ಲಿ ಯಲ್ಲಾಪುರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಿಕೊಳ್ಳುವಂತೆ
ಸಿಪಿಐ ಸುರೇಶ ಯಳ್ಳೂರ ಲಾರಿ ಮಾಲಕರ ಸಂಘದವರಿಗೆ ಸಲಹೆ ನೀಡಿದ್ದರು . ಕಳೆದ ವರ್ಷ ಲಾರಿ ಮಾಲಕರ ಅಭಿವೃದ್ದಿ ಸಂಘದಿಂದ ಈ ಬೇಡಿಕೆ ಈಡೇರಿಕೆಗೆ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಿದಾಗ. ಟ್ರಕ ಟರ್ಮಿನಲ್ಗೆ ಈಗಾಗಲೇ ಜಾಗ ಮೀಸಲಿರುವ ಬಗ್ಗೆ ಅವರು ಮಾಹಿತಿ ನೀಡಿದ್ದರು. ಇದರ ಆಧಾರದಲ್ಲಿ ಅಂದಿನ ತಹಶೀಲ್ದಾರ ಗಣಪತಿ ಶಾಸ್ತ್ರಿ ಅವರು ಈ ಹಿಂದೆ ಬ್ರಿಟಿಷರ ಕಾಲದಲ್ಲಿಯೇ ೩೪ ಗುಂಟೆ ಜಾಗ ಮೀಸಲಿಟ್ಟಿರುವುದನ್ನು ಪತ್ತೆ ಹಚ್ಚಿ ಸರ್ವೇ ಸಹ ಮಾಡಿಸಿದ್ದರು.
ಈಗ ಈ ಜಾಗದ ಮಂಜೂರಾತಿ ಪ್ರಕ್ರಿಯೆ ಮುಗಿದಿದ್ದು, ಎಲ್ಲ ಇಲಾಖೆಯಿಂದ ಅನುಮತಿ ಪತ್ರ ಪಡೆಯಲಾಗಿದೆ ಎಂದು ಲಾರಿ ಮಾಲೀಕರ ಅಭಿವೃದ್ದಿ ಸಂಘದ ಅಧ್ಯಕ್ಷ ನಾಗೇಂದ್ರ ಕವಾಳೆ ತಿಳಿಸಿದ್ದಾರೆ.
ಹಿಂದೂ ರುದ್ರಭೂಮಿಯ ಪಕ್ಕದಲ್ಲಿರುವ ಈ ಜಾಗದಲ್ಲಿ ಯಲ್ಲಾಪುರ ಲಾರಿ ಮಾಲೀಕರ ಸಂಘದ ಅಭಿವೃದ್ದಿ ಸಮಿತಿಯಿಂದ ಅಲ್ಲಿ ಗಿಡ ಗಂಟಿ ತೆರವುಗೊಳಿಸಿ ಜೆಸಿಬಿಯಿಂದ ಜಾಗ ಸಮತಟ್ಟು ಮಾಡುವ ಕಾರ್ಯ ಭರದಿಂದ ಸಾಗಿದೆ. ಅಲ್ಲಿದ್ದ ಸಂಘದ ಕಾರ್ಯದರ್ಶಿ ಸಂಜಯ್ ಮರಾಠಿ, ಖಜಾಂಚಿ ಮೋಹಿದ್ದಿನ್ ಖಾನ್ ಅತ್ತಾರ, ಎಂದು ಮಾಹಿತಿ ನೀಡಿದರು ರಾಜ್ಯ , ಹೊರ ರಾಜ್ಯದಿಂದ ಬರುವ ಲಾರಿ ಚಾಲಕರಿಗೆ ವಿಶ್ರಮಿಸಲು ಅವಕಾಶ ಸಿಗಲಿದೆ. ಚಾಲಕರು ವಿಶ್ರಾಂತಿ ಗೃಹಗಳಲ್ಲಿ ನೀರು ಸ್ನಾನ, ಶೌಚ ಮುಗಿಸಿ ವಿಶ್ರಮಿಸಿಕೊಳ್ಳಬಹುದು. ವಾಹನಗಳ ಮೇಲೆ ಸಿಸಿ ಕ್ಯಾಮರಾ ನಿಗಾ, ಕಾವಲುಗಾರನ ವ್ಯವಸ್ಥೆ ಇರಲಿದೆ. ಇದರಿಂದ ಬಿಡಿಭಾಗಗಳ ಕಳುವು ನಿಲ್ಲಲಿದೆ. ವಿಶಾಲವಾದ ಜಾಗ ಇರುವ ಕಾರಣ ಸಂಚಾರಕ್ಕೆ ಸಂಚಕಾರ ಆಗುವುದು ತಪ್ಪಲಿದೆ.
ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಲಾರಿ ಚಾಲಕರಿಗೆ ವಿಶ್ರಮಿಸಲು ಇಲ್ಲಿ ವಿಶ್ರಾಂತಿ ಗೃಹ , ಸಿಸಿ ಕ್ಯಾಮರಾ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲಾಗುವುದು
– ನಾಗೇಂದ್ರ ಕವಾಳೆ ಅಧ್ಯಕ್ಷರು, ಲಾರಿಮಾಲೀಕರ ಅಭಿವೃದ್ದಿ ಸಂಘ
Leave a Comment