ಮೈಸೂರು: ಅಪ್ರಾಪ್ತ ಬಾಲಕಿ ಹಾಗೂ ವಿದೇಶಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಗರದ ವಿಜಯನಗರ ವಾಟರ್ ಟ್ಯಾಂಕ್ ಬಳಿಯ ಹೊಟೇಲ್ವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಜೊತೆಗೆ ಹಲವಾರು ಮಹಿಳೆಯರನ್ನು ರಕ್ಷಿಸಲಾಗಿದೆ. ಇವರಲ್ಲಿ ಓರ್ವ ಬಾಲಕಿ ಸಹ ಸೇರಿದ್ದು ಇವರಲ್ಲಿ ಕೆಲ ಯುವತಿಯರು ನೆರೆಯ ಬಾಂಗ್ಲಾದೇಶದವರು. ನಗರದ ಒಡನಾಡಿ ಸ್ವಯಂ ಸೇವಾ ಸಂಸ್ಥೆ ಈ ಹೊಟೇಲ್ನಲ್ಲಿ ನಡೆಯುತ್ತಿದ್ದ ದಂಧೆಯ ಬಗ್ಗೆ ಮಾಹಿತಿ ನೀಡಿದ್ದರೂ ಪೊಲೀಸರು ಕ್ರಮವಹಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಒತ್ತಡ ತಂದ ಬಳಿಕವಷ್ಟೇ ಸಂಸ್ಥೆ ಜೊತೆಗೆ ಸಹಕರಿಸಿದ ವಿಜಯನಗರ ಠಾಣೆ ಪೊಲೀಸರು ದಾಳಿ ನಡೆಸಲು ಕೊನೆಗೂ ಒಪ್ಪಿದ ಬಳಿಕ ಈ ಯುವತಿಯರನ್ನು ರಕ್ಷಿಸಲಾಗಿದೆ.
ಇದೇ ವೇಳೆ ಪೊಲೀಸರ ಈ ದಾಳಿಯನ್ನು ಒಡನಾಡಿ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ಸ್ಪ್ಯಾನಿ ಸ್ವಾಗತಿಸಿದ್ದಾರೆ. ಜೊತೆಗೆ ಹೊಟೇಲನ್ನು ಕಾಯಂ ಆಗಿ ಬಂದ್ ಮಾಡಬೇಕೆಂದೂ ಸಹ ಮನವಿ ಮಾಡಿದ್ದಾರೆ. ಮೈಸೂರು ನಗರದ ಹೊರ ವಲಯ ಬಡಾವಣೆಗಳಲ್ಲಿ ಇಂತಹ ಕೆಲ ಘಟನೆಗಳು ಅರಿವಿಗೆ ಬರುತ್ತಿವೆ. ಒಡನಾಡಿ ಸಂಸ್ಥೆ ಈಗಾಗಲೇ ಹಲವು ಕಡೆ ದಾಳಿ ನಡೆಸಿ ದಂಧೆಗೆ ಕಡಿವಾಣ ಹಾಕಲು ಯತ್ನಿಸುತ್ತಿದೆ. ಆದರೆ ಕೆಲವು ಕಡೆಗಳಲ್ಲಿ ನಿರೀಕ್ಷಿತ ಸಹಕಾರ ದೊರೆಯುತ್ತಿಲ್ಲ.
Leave a Comment