
ಹಳಿಯಾಳ :- ನಿಸರ್ಗದೊಂದಿಗೆ ಸ್ನೇಹ ಮಾಡಬೇಕು ಹೊರತು ದ್ವೇಷ ಮಾಡಬಾರದು. ಅರಣ್ಯ ಹೆಚ್ಚಾಗಬೇಕು. ನಿಸರ್ಗದ ಜೊತೆಗೆ ಪರಿಸರ ಕಾಯ್ದುಕೊಳ್ಳಬೇಕು ಇಲ್ಲದಿದ್ದರೇ ಇಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತವೇ ಅಲ್ಲದೇ ಇವೆಲ್ಲ ನಮಗೆ ದೊಡ್ಡ ಪಾಠಗಳಾಗಿವೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ತಹಶೀಲ್ಧಾರ್ ಕಚೇರಿಯಲ್ಲಿ ನಿರಂತರ ಮಳೆಯಿಂದ ಮನೆಗಳಿಗೆ ಹಾನಿಯಾಗಿ ನಷ್ಟ ಅನುಭವಿಸಿದವರಿಗೆ ಸರ್ಕಾರದಿಂದ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಸುಮಾರು 15 ಜನರಿಗೆ ಪರಿಹಾರದ ಚೆಕ್ಗಳನ್ನು ವಿತರಿಸಿ ಬಳಿಕ ಪ್ರಕೃತಿ ವಿಕೋಪದ ಕುರಿತು ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದರು.
ಹಳಿಯಾಳ-ದಾಂಡೇಲಿಯನ್ನೊಳಗೊಂಡು ಒಟ್ಟೂ 6 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದ ಅವರು ಅಧಿಕಾರಿಗಳು ಪಿಡಿಓ, ಕಾರ್ಯದರ್ಶಿಗಳು, ಗ್ರಾಮ ಲೆಕ್ಕಾಧಿಕಾರಿಗಳನ್ನು ಇನ್ನಿತರ ಸಿಬ್ಬಂದಿಗಳನ್ನು ಬಳಸಿಕೊಂಡು ತಂಡ ತಯಾರಿಸಿ ಭಾಗಶಃ ಹಾಗೂ ಸಂಪೂರ್ಣ ಮನೆ ಕಳೆದುಕೊಂಡಿರುವವರ ಬಳಿ ಸಷ್ಟದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ.
ಇನ್ನೂ ದಾಖಲೆಗಳನ್ನು ಕಳೆದುಕೊಂಡವರಿಗೆ ಅಗತ್ಯ ದಾಖಲೆಗಳನ್ನು ನೀಡಲು ತಾಲೂಕಾಡಳಿತ ಸಹಕರಿಸಬೇಕು. ನೆರೆ ಕಡಿಮೆಯಾದ ಬಳಿಕ ಇದು ತುರ್ತು ಪರಿಸ್ಥಿತಿ ಇರುವುದರಿಂದ ಯಾರಿಗೂ ತೊಂದರೆ ನೀಡದೆ ಕೂಡಲೇ ದಾಖಲೆಗಳನ್ನು ಅವರಿಗೆ ಒದಗಿಸಲು ಮುಂದಾಗಬೇಕು ಎಂದ ದೇಶಪಾಂಡೆ ಅತಿಕ್ರಮಣ ಮಾಡಿ ಮನೆ ಕಟ್ಟಿದವರು ಇಂದು ಮನೆ ಕಳೆದುಕೊಂಡಿದ್ದು ಮಾನವೀಯ ನೆಲೆಯ ಮೇಲೆ ಅವರಿಗೂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಈ ಬಗ್ಗೆ ತಾವು ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ತಕ್ಷಣ ಪುನರ್ವಸತಿ ಕಲ್ಪಿಸುವ ಕಾರ್ಯ ಈಗಿನಿಂದಲೇ ಕೈಗೊಳ್ಳಬೇಕು. ಕೆಪಿಸಿಯ ವಸತಿ ನಿವೇಶನಗಳು ಖಾಲಿ ಇದ್ದು ಅಲ್ಲಿ ನಿರಾಶ್ರಿತರಿಗೆ ವಸತಿಗೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದ ಅವರು ಸ್ಥಳದಲ್ಲೇ ಕೆಪಿಸಿಯ ಎಮ್ಡಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತಾತ್ಕಾಲಿಕ ವಸತಿಗೆ ಅವಕಾಶಕ್ಕೆ ಮನವಿ ಮಾಡಿದರು.
ನೆರೆ ಇಳಿದ ಬಳಿಕ ಮುಂದೆ ಆರೋಗ್ಯ, ಪಶು ಸಂಗೋಪನಾ ಹಾಗೂ ಪಶು ವೈದ್ಯ ಇಲಾಖೆ, ಪುರಸಭೆಯವರು ಜಾಗೃತರಾಗಬೇಕು ಎಲ್ಲೆಡೆ ಸ್ವಚ್ಚತೆಯ ಬಗ್ಗೆ ಗಮನ ಹರಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಇನ್ನೂ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪೈಪಲೈನ್ ಯಡೋಗಾ ಸೇತುವೆಯಲ್ಲಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೊಗಿರುವ ಕಾರಣ ಕಳೆದ 3 ದಿನಗಳಿಂದ ಪಟ್ಟಣಕ್ಕೆ ನೀರಿನ ಸರಬರಾಜು ಸ್ಥಗೀತವಾಗಿರುವ ಕಾರಣ ಹೊಸ ಪೈಪಲೈನ್ ಜೊಡಿಸಲು ಕೂಡಲೇ ಹಳಿಯಾಳ ಪುರಸಭೆಯವರು ಯುದ್ದೊಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಹಾಗೂ ಅದಕ್ಕಾಗಿ ಅನುದಾದನ ಕೊರತೆಯಾಗದಂತೆ ತಾವು ಗಮನ ಹರಿಸುವುದಾಗಿ ಹೇಳಿದರು.
ಇನ್ನೂ ನಿರಂತರ ಮಳೆಗೆ ರಸ್ತೆಗಳಿಗೆ ಹಾನಿಯಾಗಿದ್ದು ಕೂಡಲೇ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಪಿಡಬ್ಲೂಡಿ ಅಧಿಕಾರಿಗೆ ದೇಶಪಾಂಡೆ ಸೂಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಜಿಪಂ ಸದಸ್ಯ ಕೃಷ್ಣಾ ಪಾಟೀಲ್, ಪುರಸಭೆ ಸದಸ್ಯ ಶಂಕರ ಬೆಳಗಾಂವಕರ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.
Leave a Comment