
ಜೋಯಿಡಾ :-
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ತುತ್ತ ತುದಿಯ ಕವಳಾ ಗುಹೆಯಲ್ಲಿನ ಕವಳೇಶ್ವರನ ದರ್ಶನಕ್ಕೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದು, ಸರತಿಯ ಸಾಲಿನಲ್ಲಿ ನಿಂತು ಗುಹೇಶ್ವರನ ದರ್ಶನ ಪಡೆದು ಕೃತಾರ್ಥರಾದರು.
ಶುಕ್ರವಾರ ಬೆಳಿಗ್ಗೆ 4 ಗಂಟೆಯಿಂದ ಭಕ್ತರು ದೇವರ ದರ್ಶನಕ್ಕೆ ಬರಲು ಆರಂಬಿಸಿದ್ದು, ಹೊತ್ತು ನೆತ್ತಿಗೇರುವ ಹೊತ್ತಲ್ಲಿ ಸಾವಿರಾರು ಸಂಖ್ಯೆಯ ಭಕ್ತಗಣ ಸರತಿಯ ಸಾಲಿನಲ್ಲಿ ಗುಡ್ಡದ ತುದಿಯಲ್ಲಿ ಸಾಲುಗಟ್ಟಿ ನಿಂತು ದೇವರ ದರ್ಶನಕ್ಕೆ ತಾಸುಗಟ್ಟಲೆ ಕಾದು ನಿಂತಿದ್ದರು. ಸಾಯಂಕಾಲ ಆಗುತ್ತಿದ್ದಂತೆ ಭಕ್ತರ ಸಂಖ್ಯೆ ಕೊಂಚ ಇಳಿಮುಕವಾದರೂ ಕತ್ತಲಾಗುತ್ತಿದ್ದರೂ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದುದ್ದು ಕಂಡುಬಂದಿತ್ತು. ಈ ವರ್ಷ ಪ್ರತಿವರ್ಷಕ್ಕಿಂತ ಮೂರು ಪಟ್ಟು ಹೆಚ್ಚು ಭಕ್ತಸಾಗರದ ಕವಳೇಶ್ವರನ ದರ್ಶನ ಆಗಮಿಸಿದ್ದು, ಸ್ಥಳಿಯ ಕಮಿಟಿ ಸದಸ್ಯರಲ್ಲಿರೊಬ್ಬರಾದ ರಾಜಾ ದೇಸಾಯಿ ಹೇಳುವಂತೆ ಸುಮಾರು ಮೂರು ಲಕ್ಷಕ್ಕೂ ಅಧಿಕ ಭಕ್ತರು ಈ ಬಾರಿ ದರ್ಶನ ಪಡೆದಿರುವುದಾಗಿ ತಿಳಿದು ಬಂದಿದೆ.

ರಕ್ಷಿತಾರಣ್ಯದಲ್ಲಿ ಪ್ರವೇಶಕ್ಕೆ ನಿಷೇದ : ಜೋಯಿಡಾ, ದಾಂಡೇಲಿ ಮಾರ್ಗದಿಂದ ಖಾಸಗಿ ವಾಹನ, ಸಾರಿಗೆ ವಾಹನಗಳಲ್ಲಿ ಬಂದ ಭಕ್ತರಿಗೆ ಪಣಸೋಲಿಯಲ್ಲಿ ಕಾಳಿ ಹುಲಲಿ ರಕ್ಷಿತಾರಣ್ಯದ ಪ್ರವೇಶ ದ್ವಾರದಲ್ಲಿ ಇಳಿದು ಅರಣ್ಯ ಇಲಾಖೆ ಹಾಗೂ ಸ್ಥಳಿಯ ಸಂಸ್ಥೆಗಳ ಸಹಯೋಗದಲ್ಲಿ ವ್ಯವಸ್ಥೆಗೊಳಿಸಿದ ಮಿನಿ ಬಸ್ ಹಾಗೂ ಅರಣ್ಯ ಇಲಾಖೆಯ ಕಾಸಗಿ ವಾಹನದಲ್ಲಿ ಹಣನೀಡಿ ಕವಳಾ ದರ್ಶನಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿತ್ತು.
ಪ್ರತಿ ಒಬ್ಬರಿಗೆ ರೂ. 25 ರಂತೆ ಹಣ ಪಡೆದು ವಾಹನದ ಮೂಲಕ 12 ಕಿ.ಮೀ.ದೂರದ ರಕ್ಷಿತಾರಣ್ಯದ ಕವಳಾ ಬಸ್ ನಿಲ್ದಾಣ ತನಕ ಸಾಗಬೇಕಿದ್ದು, ನಂತರ ಅಲ್ಲಿಂದ ಮತ್ತೆ ಕಾಲ್ನಡಿಗೆಯಲ್ಲಿ 5 ಕಿ.ಮೀ. ದೂರ ನಡೆದು ಕವಳೇಶ್ವರನ ದರ್ಶನ ಪಡಪೆಯಬೇಕಿದೆ. ದೂರದೂರದಿಂದ ಬರುವ ಭಕ್ತಾದಿಗಳಿಗೆ ತಮ್ಮ ಖಾಸಗಿ ವಾಹನ ಬಿಟ್ಟು ಅರಣ್ಯ ಇಲಾಖೆಯ ವಾಹನದಲ್ಲಿ ಜನಸಂದಣಿಯಲ್ಲಿ ಸಾಗಬೇಕಾದ ನಿವಾರ್ಯತೆಗೆ ಭಕ್ತಾದಿಗಳು ಕೊಂಚ ಬೇಸರಕ್ಕೆ ಒಳಗಾದರೂ ದೇವರ ದರ್ಶನ ಪಡೆಯಬೇಕೆನ್ನುವ ಹಂಬಲ ಇವರ ಈ ನೋವನ್ನು ಮರೆಸಿದ್ದು, ದೇವರ ದರ್ಶನಕ್ಕೆ ಉತ್ಸಾಹದಿಂದ ಪಾಲ್ಗೊಂಡಿದ್ದು ಕಂಡುಬಂದಿತ್ತು.
Leave a Comment