ಬುಡಕಟ್ಟು ಸಿದ್ದಿ ಸಮುದಾಯದ ಧ್ವನಿಯಾಗಿದ್ದ ಡಿಯೋಗ ಸಿದ್ದಿ ಇಹಲೋಕ ತ್ಯಜಿಸಿದ್ದಾರೆ. 75 ವರ್ಷ ವಯಸ್ಸಿನ ಡಿಯೋಗ ಸಿದ್ದಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ತಮ್ಮ ತಂದೆ ಬಸ್ತ್ಯಾಂವ ರಿಂದ ಸಿದ್ದಿ ಸಮುದಾಯದ ಏಳಿಗೆಯ ದೀಕ್ಷೆ ಪಡೆದ ಡಿಯೋಗ ಸಿದ್ದಿ ಕಳೆದ ಐದು ದಶಕಗಳಿಂದ ತಮ್ಮ ಸಮುದಾಯದ ಸರ್ವಾಂಗೀಣ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಕೆಡಿಡಿಸಿ ಸಂಸ್ಥೆಯಲ್ಲಿ ಸಮಾಜ ಸೇವಾ ಕಾರ್ಯಕರ್ತ ತರಬೇತಿ ಪಡೆದು ಕಾರ್ಯಕ್ಕಿಳಿದಿದ್ದು.

ಗ್ರೀನ್ ಇಂಡಿಯಾ ಸಂಸ್ಥೆಯ ಕಾರ್ಯಕರ್ತರೂ ಸಹ ಆಗಿದ್ದರು. ವನಶ್ರೀ ಗಿರಿಜನರ ವಿವಿದೋದ್ದೇಶಗಳ ಸಹಕಾರಿ ಸಂಘವನ್ನು ಸಂಸ್ಥಾಪನೆ ಮಾಡಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯ ಮಟ್ಟದಲ್ಲಿ ಬುಡಕಟ್ಟು ಸಂಘಟನೆಯ ಉಪಾಧ್ಯಕ್ಷರಾಗಿದ್ದವರು. ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯರಾಗಿದ್ದವರು. ಬುಡಕಟ್ಟು ಸಮುದಾಯದ ಏಳಿಗೆಗಾಗಿ ಡಿಯೋಗ ಸಿದ್ದಿ ರವರ ಸೇವಾ ಕಾರ್ಯ ಗುರುತಿಸಿದ್ದ ಕರ್ನಾಟಕ ಸರ್ಕಾರವು ಇವರನ್ನು ವಾಲ್ಮಿಕಿ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.
ಸಮಾಜ ಕಲ್ಯಾಣ ಇಲಾಖಾ ಸಚಿವ ಹೆಚ್ ಆಂಜನೇಯ ರವರಿಗೆ ಹಳಿಯಾಳ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಿಸಿ ಸಿದ್ದಿ ಸಮುದಾಯದವರಿಗೆ ವೈಯಕ್ತಿಕ ಮತ್ತು ಸಾಮುದಾಯಿಕ ಪ್ರಗತಿಗೆ ಕೊಟ್ಯಾಂತರ ಮೊತ್ತದ ಪ್ಯಾಕೆಜ್ ಮಂಜೂರಿ ಮಾಡಿಸಿದ್ದರು. ದೇಶದ ಹಲವಾರು ಕಡೆಗಳಲ್ಲಿ ಆಯೋಜಿಸಲಾಗುತ್ತಿದ್ದ ಕಾರ್ಯಾಗಾರಗಳಲ್ಲಿ ಭಾಗವಹಿಸಿ ವ್ಯವಸ್ಥಿತವಾಗಿ ಬುಡಕಟ್ಟು ಜನಾಂಗದ ಅಭಿವೃದ್ಧಿ ವಿಷಯ ಮಂಡನೆ ಮಾಡುತ್ತಿದ್ದರು. ಹಳಿಯಾಳ ತಾಲೂಕಿನಲ್ಲಿ ಕಾಳನದಿ ನೀರಾವರಿ ಯೋಜನೆ ಜಾರಿಯಾಗಬೇಕು ಎಂದು ಬಹುಹಿಂದೆಯೇ ಪರಿಕಲ್ಪನೆ ಮೂಡಿಸಿದ್ದ ಮಹಾನುಭಾವರು.
ಹಳಿಯಾಳ ತಾಲೂಕು ಮಾತ್ರವಲ್ಲದೇ ಉತ್ತರ ಕನ್ನಡ ಜಿಲ್ಲೆ, ರಾಜ್ಯ , ರಾಷ್ಟ್ರಾದ್ಯಂತ ಅನೇಕ ಜನರೊಂದಿಗೆ ಒಡನಾಡ ಹೊಂದಿದ್ದ ಡಿಯೋಗ ಸಿದ್ದಿ ಎಂಬ ಶ್ರೇಷ್ಠ ವ್ಯಕ್ತಿ ನಿಧನರಾಗಿದ್ದು. ಬುಡಕಟ್ಟು ಜನಾಂಗದ ಗಟ್ಟಿ ಧ್ವನಿ ಇನ್ನಿಲ್ಲವಾದಂತಾಗಿದೆ. ಮೃತ ಡಿಯೋಗ ಸಿದ್ದಿ ರವರು ಸಹೋದರ, ಸಹೋದರಿ, ಪತ್ನಿ , ಇಬ್ಬರು ಪುತ್ರಿಯರು, ಇಬ್ಬರು ಪುತ್ರರು, ಸಮಾಜಬಾಂಧವರು , ಅಭಿಮಾನಿಗಳು, ಆಪ್ತರನ್ನು ಅಗಲಿದ್ದಾರೆ.
ವರದಿ;ಮಂಜುನಾಥ. ಎಚ್ . ಎಮ್ ಹಳಿಯಾಳ
Leave a Comment