ಹೊನ್ನಾವರ :
ತಾಲೂಕಿನ ಕರ್ಕಿ ಸೋನಾರವಾಡದ ನಿವಾಸಿ 17 ವರ್ಷದ ಯುವತಿಯೋರ್ವಳ ಮೇಲೆ ನಿರಂತರ ಅತ್ಯಾಚಾರ ನಡೆಸಿ ಆಕೆ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿ ಕರ್ಕಿಯ ಸುಬ್ರಹ್ಮಣ್ಯ ರಾಮ ಭಂಡಾರಿ ಈತನನ್ನು ಹಿಡಿದು ಬಂಧಿಸಿ ನೊಂದ ಯುವತಿಗೆ ನ್ಯಾಯಕೊಡಿಸುವಂತೆ ಆಗ್ರಹಿಸಿ ತಾಲೂಕಾ ಅಂಗವಿಕಲರ ಸಂಘಟನೆಯಿಂದ ತಹಸೀಲ್ದಾರ ಮೂಲಕ ರಾಜ್ಯ ಗೃಹಸಚಿವರಿಗೆ ಮನವಿ ನೀಡಲಾಗಿದೆ.
ಕರ್ಕಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈ ಯುವತಿಯನ್ನು ಎಸ್ಡಿಎಂಸಿ ಮಾಜಿ ಅಧ್ಯಕ್ಷ ಮತ್ತು ಕಾಂಟ್ರೆಕ್ಟರ್ ಸುಬ್ರಹ್ಮಣ್ಯ ರಾಮ ಭಂಡಾರಿ ಈತ ನಿರಂತರ ಅತ್ಯಾಚಾರ ಎಸಗಿದ್ದಾನೆ. ಆರೋಗ್ಯ ಸಮಸ್ಯೆಯಿಂದ ಈ ಮುಂಚಿನಿಂದ ಬಳಲುತ್ತಿದ್ದ ಈಕೆಯ ಶಾರೀರಿಕ ಲಕ್ಷಣಗಳು ಬದಲಾದ ವೇಳೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೇಳೆ ಈಕೆ 7 ತಿಂಗಳ ಗರ್ಭಿಣಿ ಆಗಿರುವುದು ಹಾಗೂ ಇದಕ್ಕೆ ಸುಬ್ರಹ್ಮಣ್ಯ ರಾಮ ಭಂಡಾರಿ ಕಾರಣ ಎಂಬುದು ಬೆಳಕಿಗೆ ಬಂದಿದೆ.
ಈ ವೇಳೆ ಈಕೆಯ ಕುಟುಂಬದವರು ಅಂಗವಿಕಲರ ತಾಲೂಕಾ ಸಂಘಟನೆಯನ್ನು ಸಂಪರ್ಕಿಸಿದ ವೇಳೆ ಅಂಗವಿಕಲರ ಒಕ್ಕೂಟವು ಈ ಬಗ್ಗೆ ಯುವತಿಯ ಕಡೆಯಿಂದ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಆರೋಪಿ ಸುಬ್ರಹ್ಮಣ್ಯ ರಾಮ ಭಂಡಾರಿ ತಲೆಮರೆಸಿಕೊಂಡಿದ್ದು ಈವರೆಗೂ ಪತ್ತೆಹಚ್ಚಿ ಬಂಧಿಸಲಾಗಿಲ್ಲ.
ಕೂಡಲೇ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ಕಾನೂನು ಕ್ರಮ ಕೈಗೊಂಡು ನೊಂದಿರುವ ಕುಟುಂಬಕ್ಕೆ ರಕ್ಷಣೆಯನ್ನು ನ್ಯಾಯವನ್ನು ನೀಡಬೇಕು ಎಂದು ಸಂಘಟನೆಯಿಂದ ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ.
-gaju
Leave a Comment