ಭಟ್ಕಳ:
ದೇಶದ ಅಭಿವೃದ್ಧಿಗಾಗಿ ಯಾರೆಲ್ಲ ಶ್ರಮಿಸುತ್ತಿದ್ದಾರೋ ಅಂತಹವರಿಗಾಗಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಚೇರ್ಮೆನ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಡಿ. ಹೇಳಿದರು.
ಅವರು ಇಲ್ಲಿನ ಸತ್ಕಾರ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಸಮಿತಿ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಭಟ್ಕಳ, ಅಭಿಯೋಜನೆ ಇಲಾಖೆ, ಕಾರ್ಮಿಕರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಎರ್ಪಡಿಸಲಾಗಿದ್ದ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಮಿಕನಿಲ್ಲದೇ ದೇಶದ ಅಭಿವೃದ್ಧಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕರಿಗಾಗಿ ಹಲವಾರು ಯೋಜನೆಯನ್ನು, ಸೌಕರ್ಯಗಳನ್ನು ನೀಡುತ್ತಾ ಬಂದಿದ್ದು, ಇದರ ಸದುಪಯೋಗವನ್ನು ಕಾರ್ಮಿಕರು ಪಡೆದುಕೊಳ್ಳಬೇಕಾಗಿದೆ. ಅದೇ ರೀತಿ ಕಾನೂನು ಸೇವಾ ಪ್ರಾಧಿಕಾರದಿಂದಲೂ ಹಲವಾರು ಯೋಜನೆಗಳಿದ್ದು, ಇದರಲ್ಲಿ ಕಾರ್ಮಿಕರಿಗಾಗಿ ಉಚಿತ ಕಾನೂನು ಸೇವೆ ಸೌಲಭ್ಯವಿದ್ದು ಕಾರ್ಮಿಕರು ತಮಗೆ ತೊಂದರೆಯಾದಾಗ ಬಳಸಿಕೊಳ್ಳಬಹುದು. ಕಾರ್ಮಿಕರೂ ಕೂಡಾ ಕಾನೂನಿನ ಅರಿವು ಹೊಂದಿದಲ್ಲಿ ತಮಗೇನಾದರೂ ಅನ್ಯಾಯವಾದಲ್ಲಿ ಅದನ್ನು ಸರಿಪಡಿಸಕೊಳ್ಳಲು ಸಾಧ್ಯವಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಉಪಾಧ್ಯಕ್ಷ ರಾಜವರ್ಧನ ನಾಯ್ಕ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದ ನ್ಯಾಯವಾದಿ ಎಮ್.ಟಿ.ನಾಯ್ಕ, ಡಾಟಾ ಎಂಟ್ರಿ ಆಪರೇಟರ್ ಗಣಪತಿ ನಾಯ್ಕ, ನ್ಯಾಯವಾದಿ ಜಿ.ಟಿ.ನಾಯ್ಕ ಕಾರ್ಮಿಕರಿಗೆ ಉಪಯುಕ್ತ ಕಾನೂನಿನ ಕುರಿತು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಭಟ್ಕಳ ತಾಲೂಕಾ ಸಹಾಯಕ ಸರ್ಕಾರಿ ಅಭಿಯೋಜಕಿ ಇಂದಿರಾ ನಾಯ್ಕ, ಹಿರಿಯ ನ್ಯಾಯವಾದಿ ಹಾಗೂ ನೋಟರಿ ಆರ್.ಆರ್. ಶ್ರೇಷ್ಠಿ, ಪೊಲೀಸ್ ಸರ್ಕಲ್ ಇನ್ಸಪೆಕ್ಟರ್ ಸುರೇಶ ನಾಯಕ, ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಅಣ್ಣಪ್ಪ ಮೊಗೇರ, ಎಚ್.ಬಿ.ಕುಡಗುಂಟಿ ಮುಂತಾದವರು ಉಪಸ್ಥಿತರಿದ್ದರು.
ನ್ಯಾಯವಾದಿ ಎಸ್. ಜೆ. ನಾಯ್ಕ ಸ್ವಾಗತಿಸಿದರು. ನ್ಯಾಯವಾದಿ ಆರ್.ಜಿ.ನಾಯ್ಕ ನಿರೂಪಿಸಿದರು
Leave a Comment