ಭಟ್ಕಳ:
ಜನತೆಗೆ ಅನುಕೂಲವಾಗುವಂತಹ, ಅಗತ್ಯಕ್ಕೆ ತಕ್ಕಂತಹ ಕೆಲಸ ಮಾಡಿಕೊಡಬೇಕಾಗಿದ್ದು ಇದು ಬ್ಯಾಂಕಿಂಗ್ ಕ್ಷೇತ್ರಕ್ಕೂ ಹೊರತಾಗಿಲ್ಲ ಎಂದು ಶಾಸಕ ಮಂಕಾಳ ಎಸ್. ವೈದ್ಯ ಹೇಳಿದರು. ಅವರು ಇಲ್ಲಿನ ಸರಕಾರಿ ನೌಕರರ ಭವನದ ಕಟ್ಟಡದಲ್ಲಿ ಹೊನ್ನಾವರ ಅರ್ಬನ್ ಕೋ-ಅಪರೇಟಿವ್ ಬ್ಯಾಂಕಿನ ಭಟ್ಕಳ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತರ ಕನ್ನಡದಲ್ಲಿ ಕಳೆದ 98 ವರ್ಷಗಳಿಂದ ಜನತೆಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಾ, ಗ್ರಾಹಕ ಸ್ನೇಹಿಯಾಗಿ ಬೆಳೆದು ಬಂದ ಬ್ಯಾಂಕು ಹೆಚ್ಚಿನ ಶಾಖೆಗಳನ್ನು ತೆರೆದು ಇನ್ನೂ ಹೆಚ್ಚು ಜನರಿಗೆ ಸೇವೆಯನ್ನು ನೀಡುವಂತಾಗಬೇಕು. ಬ್ಯಾಂಕುಗಳು ಅನೇಕ ವಿದ್ಯಾವಂತರಿಗೆ ಉದ್ಯೋಗಾವಕಾಶ ಮಾಡಿಕೊಡುವುದರ ಜೊತೆಗೆ ಉದ್ಯೋಗ ಮಾಡಲು ಸಹಕಾರಿಯಾಗಿವೆ. ಜನಸಾಮಾನ್ಯರು ತಮ್ಮ ಜೀವನ ರೂಪಿಸಿಕೊಳ್ಳಲೂ ಕೂಡಾ ಬ್ಯಾಂಕುಗಳು ನೆರವಾಗುತ್ತಿರುವುದರಿಂದ ಸಮಾಜದಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.
ಹೊನ್ನಾವರ ಅರ್ಬನ್ ಬ್ಯಾಂಕ್ ಎಲ್ಲಾ ವಿದಧ ಸಾಲವನ್ನು ನೀಡುತ್ತಿದ್ದು ಉತ್ತರ ಕನ್ನಡ ಜಿಲ್ಲೆಯು ಶೈಕ್ಷಣಿಕವಾಗಿ ಮುಂದುವರಿದಿದ್ದು ಎಲ್ಲ ರೀತಿಯ ವಿದ್ಯೆಯನ್ನು ಕಲಿಯಲು ಇಲ್ಲಿಯೇ ಅವಕಾಶವಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸಹಕಾರ ನೀಡುತ್ತಿರುವ ಬ್ಯಾಂಕಿನ ಕಾರ್ಯವನ್ನು ಶ್ಲಾಘಿಸಿದ ಅವರು ಬಡವರಿಗೆ ವಿದ್ಯೆಯನ್ನು ಮುಂದುವರಿಸುವುದು ಕಷ್ಟಕರವಾಗುತ್ತಿದೆ. ಅಂತಹ ಬಡ ವಿದ್ಯಾರ್ಥಿಗಳಿ ಶೈಕ್ಷಣಿಕ ಸಾಲವನ್ನು ನೀಡುತ್ತ ಬ್ಯಾಂಕು ಮುಂದೆ ಬರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ರಾಘವ ವಿಷ್ಣು ಬಾಳೇರಿ ಮಾತನಾಡಿ ಭಟ್ಕಳದಲ್ಲಿ ಬ್ಯಾಂಕಿನ 7ನೇ ಶಾಖೆಯನ್ನು ಆರಂಭಿಸುತ್ತಿದ್ದೇವೆ. ತಮ್ಮ ಬ್ಯಾಂಕು 1919ರಲ್ಲಿ ಆರಂಭಗೊಂಡು ಶತಮಾನೋತ್ಸವ ವರ್ಷಕ್ಕೆ ಬಹಳ ಹತ್ತಿರದಲ್ಲಿದ್ದೇವೆ. ನಮ್ಮ ಬ್ಯಾಂಕು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಸೇವೆ ಈ ಮೂರನ್ನು ಅಳವಡಿಸಿಕೊಂಡು ಗ್ರಾಹಕ ಸ್ನೇಹಿಯಾಗಿದೆ. ನಮ್ಮಲ್ಲಿ ಯಾವುದೇ ನಿರ್ದೇಶಕರು ಭತ್ತೆಯನ್ನು ತೆಗೆದುಕೊಳ್ಳದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ತಮಗೆ ಬ್ಯಾಂಕಿನ ಗ್ರಾಹಕರ ತೃಪ್ತಿ ಮುಖ್ಯವಾಗಿದ್ದು ಆ ದಿಶೆಯಲ್ಲಿ ಸಿಬ್ಬಂದಿಗಳು ಕೂಡಾ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭಟ್ಕಳ ಎಜ್ಯಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ನಾಯಕ ಮಾತನಾಡಿ ಕಳೆದ 40 ವರ್ಷಗಳ ತಮ್ಮ ಹಾಗೂ ಹೊನ್ನಾವರ ಅರ್ಬನ್ ಬ್ಯಾಂಕಿನ ಸಂಭಂಧವನ್ನು ನೆನಪಿಸಿಕೊಂಡರು. 98 ವರ್ಷಗಳನ್ನು ಕಳೆದ ಬ್ಯಾಂಕು ಇನ್ನಷ್ಟು ಶಾಖೆಗಳನ್ನು ತೆರೆದು ಶತಮಾನೋತ್ಸವಕ್ಕೆ ಸಜ್ಜಾಗಬೇಕಿದೆ. ಯುವ ಉತ್ಸಾಹಿ ಪಡೆಯಿರುವಾಗ ಅದು ಕಷ್ಟವಾಗದು ಎಂದೂ ಹೇಳಿದರು. ಹಿಂದೆ ಬ್ಯಾಂಕುಗಳಿಗೆ ಉತ್ತಮ ಠೇವಣಿ ನೀಡುವವರು ಬೇಕಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ, ಬ್ಯಾಂಕು ಠೇವಣಿದಾರರನ್ನು ಬಿಟ್ಟು ಉತ್ತಮ ಸಾಲ ಪಡೆಯುವವರನ್ನು, ಕ್ಲಪ್ತ ಸಮಯಕ್ಕೆ ಮರುಪಾವತಿ ಮಾಡುವ ಗ್ರಾಹಕರನ್ನು ಹುಡುಕಿಕೊಂಡು ಹೋಗುತ್ತಿವೆ ಎಂದು ಬದಲಾದ ಸನ್ನಿವೇಶವನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಯ್ಕ, ಸಹಕಾರ ಸಂಘಗಳ ಉಪನಿಬಂಧಕ ಜಿ.ಎಸ್. ಜಯಪ್ರಕಾಶ ಮಾತನಾಡಿದರು. ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜಿ.ವಿ.ನಾಯ್ಕ, ಪ್ರಧಾನ ವ್ಯವಸ್ಥಾಪಕ ರಾಜೀವ ಶ್ಯಾನಭಾಗ ಉಪಸ್ಥಿತರಿದ್ದರು.
ಬ್ಯಾಂಕಿನ ಸಿಬ್ಬಂದಿಗಳಾದ ಪೂನಂ ಮೋಹನ ತೇಲಂಗ ಹಾಗೂ ಪೂಜಾ ಸುಭೋದ ಅರವಾರೆ ಪ್ರಾರ್ಥಿಸಿದರು. ಬ್ಯಾಂಕಿನ ಅಧ್ಯಕ್ಷ ರಾಘವ ವಿಷ್ಣು ಬಾಳೇರಿ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ರಾಜೀವ ಶ್ಯಾನಭಾಗ ವರದಿ ವಾಚಿಸಿದರು. ಎಸ್.ಟಿ.ಭಟ್ಟ ಬುರ್ಡೆ ನಿರೂಪಿಸಿದರು. ಭಟ್ಕಳ ಶಾಖೆಯ ಶಾಖಾಧಿಕಾರಿ ಧನಂಜಯ ವಿ.ಪೈ ವಂದಿಸಿದರು. ಬ್ಯಾಂಕಿನ ಹಿರಿಯ ನಿರ್ಧೇಶಕರಾದ ಡಿ.ಎ.ಕಾಮತ್, ಎಂ.ಎಂ.ಜಾಲಿಸತ್ಗಿ ಸಹಕರಿಸಿದರು.
Leave a Comment