ಹಳಿಯಾಳ :
ಅಂತರಜಾಲದ ಮೂಲಕ ಮಾರಾಟ ಮಾಡುವ ಜೌಷದಿಗಳ ವ್ಯಾಪಾರವನ್ನು ಹಾಗೂ ಯಾವುದೆ ಅಡೆತಡೆಯಿಲ್ಲದೇ ಸಿಗುವ ಮಾದಕ ಮತ್ತು ಪ್ರತಿಬಂಧಕ ವಸ್ತುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಿಸಿ ಅಖಿಲ್ ಭಾರತ ಜೌಷಧ ವ್ಯಾಪಾರಿಗಳ ಸಂಘ ಹಾಗೂ ಕರ್ನಾಟಕ ಔಷಧ ವ್ಯಾಪಾರಿಗ ಸಂಘದವರು ನೀಡಿದ ಬಂದ್ ಕರೆಯ ಹಿನ್ನಲೆಯಲ್ಲಿ ಹಳಿಯಾಳ ಪಟ್ಟಣದ ಎಲ್ಲಾ ಮೆಡಿಕಲ್ ಶಾಪ್ಗಳನ್ನು ಮುಚ್ಚುವುದರ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತ ಪಡಿಸಿದರು.
ಮುಂಜಾನೆಯಿಂದಲೇ ಹಳಿಯಾಳದ ಎಲ್ಲ ಜೌಷಧಿ ಮಾರಾಟಗಾರರ ಅಂಗಡಿಗಳ ಮಾಲಿಕರು ತಮ್ಮ ತಮ್ಮ ಮೆಡಿಕಲ್ ಅಂಗಡಿಗಳನ್ನು ಮುಚ್ಚುವುದರ ಮೂಲಕ ಬಂದ್ಗೆ ಬೆಂಬಲಿಸಿ ಬಳಿಕ ಪ್ರತಿಭಟನಾ ಮೇರವಣಿಗೆ ಮೂಲಕ ಇಲ್ಲಿಯ ಮಿನಿ ವಿಧಾನಸೌಧಕ್ಕೆ ತೆರಳಿ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು. ಯಾವುದೇ ಮುನ್ಸೂಚನೆ ನೀಡದೆ ಹಠಾತ್ತನೆ ಮೆಡಿಕಲ್ಗಳನ್ನು ಮುಚ್ಚಿದ್ದರಿಂದ ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಯಿತು.
ಮನವಿಯಲ್ಲಿ ಅಂತರಜಾಲದ ಮೂಲಕ ಮಾರಾಟ ಮಾಡುವ ಜೌಷದಿಗಳ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ಅಲ್ಲದೇ ಅಂತರಜಾಲದ ಮೂಲಕ ಯಾವುದೆ ಅಡೆತಡೆಯಿಲ್ಲದೇ ಸಿಗುವ ಮಾದಕ ಮತ್ತು ಪ್ರತಿಬಂಧಕ ವಸ್ತುಗಳ ಮಾರಾಟ ನಿಷೇದ ಮತ್ತು ಅದರ ಮೂಲಕ ಯುವ ಪೀಳಿಗೆಯ ಮೇಲೆ ಆಗುವ ದುಷ್ಪಪರಿಣಾಮಗಳನ್ನು ನಿಲ್ಲಿಸಬೇಕು, ಕಳಪೆ ಗುಣಮಟ್ಟದ ಜೌಷಧ ಮಾರಾಟದಿಂದ ಜೀವ ಹಾನಿಯಾಗುವ ಸಂಭವ ಹಾಗೂ ಸುಮಾರು 9 ಲಕ್ಷ ಕುಟುಂಬಗಳು ಮತ್ತು ಸುಮಾರು 50 ಲಕ್ಷಕ್ಕೂ ಅಧಿಕ ನೌಕರರು ಇದೇ ವ್ಯವಹಾರವನ್ನು ನಂಬಿ ಬದುಕು ಸಾಗಿಸುತ್ತಿದ್ದು, ಅವರ ಮುಂದಿನ ಜೀವನದ ಕುರಿತು ಮುಂದಾಲೋಚನೆ ಮಾಡಬೇಕು ಮತ್ತು ಪರವಾನಗೆ ಪತ್ರದ ನವೀಕರಣದಲ್ಲಿ ಆಗುತ್ತಿರುವ ಗೊಂದಲಗಳನ್ನು ಕೂಡ ಸರಿಪಡಿಸಬೇಕು, ಜೌಷಧಿಗಳನ್ನು ವೈದ್ಯರ ಸಲಹೆ ಮತ್ತು ಚೀಟಿಗಳ ಮೂಲಕ ಸದ್ಯ ಕಾರ್ಯನಿರ್ವಹಿಸುತ್ತಿರುವ ಮೆಡಿಕಲ್ ಶಾಪ್ಗಳ ಮೂಲಕವೇ ಖರೀದಿ ಮಾಡಲು ಅವಕಾಶ ನೀಡಬೇಕು. ಆನ್ಲೈನ್ ಮೂಲಕ ಆಗುವ ಅನಾಹುಗಳನ್ನು ತಪ್ಪಿಸಿ ಮುಂದಿನ ದಿನಗಳಲ್ಲಿ ಮೊದಲಿನ ಪದ್ದತಿಯನ್ನೇ ಮುಂದುವರೆಸುವಂತೆ ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವಾಗ ಸಂಘದ ಮಹೇಶ ತೇರಗಾಂವಕರ, ಶ್ರೀಧರ ದೊಡಮನಿ, ಮಹೇಶ ನಾಯ್ಕ, ವಿಶ್ವನಾಥ ಬೆಂಗಳೂರು, ಮೋಹನ ಕಣಿಮೆಹಳ್ಳಿ, ವಿಶ್ವನಾಥ ಇಂಗಳ್ಳಿ, ಸಾವಿತ್ರಿ ದೀವೇಕರ, ಸಮೀರ ಶೇಖ, ಸಂತೋಷ ಶ್ಯಾನಬಾಗ್,. ಅಣ್ಣಪ್ಪಾ ಪಾಟೀಲ್, ರಾಕೇಶ ದೊಡಮನಿ,ಮದನ ಆನೇಗುಂದಿ ಇತರರು ಇದ್ದರು.
Leave a Comment