ಕಾರವಾರ:
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಉಂಟಾಗುತ್ತಿರುವ ಭೂಕುಸಿತ ಹಾಗೂ ಅನಾಹುತಗಳನ್ನು ತಪ್ಪಿಸಲು ವೈಜ್ಞಾನಿಕವಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (ಎನ್ಎಚ್ಎಐ) ಹಾಗೂ ಐಆರ್ಬಿ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕುಮಟಾದ ತಂಡ್ರಕುಳಿಯಲ್ಲಿ ಸಂಭವಿಸಿದ ಅನಾಹುತ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಎನ್ಎಚ್ಎಐ ಹಾಗೂ ಐಆರ್ಬಿ ಸಂಸ್ಥೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಸ್ಪಷ್ಟ ಸೂಚನೆಗಳನ್ನು ನೀಡಿದರು.
ತಂಡ್ರಕುಳಿಯಲ್ಲಿ ಕಳೆದ ಭಾನುವಾರ ದುರ್ಘಟನೆ ಸಂಭವಿಸಿದ ವೇಳೆ ರಕ್ಷಣಾ ಚಟುವಟಿಕೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಲು ಐಆರ್ಬಿಯ ತಂತ್ರಜ್ಞರು ಲಭ್ಯವಿರಲಿಲ್ಲ. ಇದೇ ರೀತಿ ಯಂತ್ರೋಪಕರಣಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಇರಲಿಲ್ಲ. ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ಮುಂದೆ ಈ ರೀತಿ ದುರ್ಘಟನೆ ಸಂಭವಿಸಿದರೆ ಐಆರ್ಬಿ ಹಾಗೂ ಎನ್ಎಚ್ಎಐ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಮಳೆಗಾಲದಲ್ಲಿ ಅನಾಹುತ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಿ ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಐಆರ್ಬಿ ಸಂಸ್ಥೆಗೆ ಮೊದಲೇ ಸೂಚನೆ ನೀಡಲಾಗಿತ್ತು. ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳದಿರುವುದು ಹಾಗೂ ಅನಾಹುತ ಸಂಭವಿಸಿದಾಗ ತುರ್ತು ಸ್ಪಂದನೆ ಮಾಡದಿರುವುದು ಸ್ಪಷ್ಟವಾಗಿದೆ. ಜನರ ಜೀವಕ್ಕಿಂತ ಯಾವುದೇ ಯೋಜನೆಗಳು ದೊಡ್ಡದಲ್ಲ. ರಸ್ತೆ ಸುರಕ್ಷತಾ ಕ್ರಮಗಳನ್ನು ನೋಡಿಕೊಳ್ಳಬೇಕಾದುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೆಲಸವಾಗಿದ್ದು, ಪ್ರಾಧಿಕಾರ ಸರಿಯಾಗಿ ನಿಗಾ ವಹಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅವರು ತೀವ್ರ ತರಾಟೆಗೆ ತೆಗೆದುಕೊಂಡರು.
ಹೆದ್ದಾರಿಯುದ್ದಕ್ಕೂ ಗುಡ್ಡ ಕುಸಿತ ಸಾಧ್ಯತೆ ಸ್ಥಳಗಳನ್ನು ಕಂದಾಯ ಇಲಾಖೆ ವತಿಯಿಂದ ಈಗಾಗಲೇ ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್ಬಿ ಸಂಸ್ಥೆಗಳು ಪ್ರತ್ಯೇಕ ಪರಿಶೀಲನೆ ನಡೆಸಿ ಅಂತಹ ಸ್ಥಳಗಳನ್ನು ಗುರುತಿಸಿ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಬಗ್ಗೆ ಶುಕ್ರವಾರದ ಒಳಗಾಗಿ ವರದಿಯನ್ನು ಸಲ್ಲಿಸಬೇಕು. ಐಆರ್ಬಿಯ ಹಿರಿಯ ತಾಂತ್ರಿಕ ಅಧಿಕಾರಿಯನ್ನು ಮಳೆಗಾಲ ಅವಧಿ ಮುಗಿಯುವವರೆಗೆ ಕಾರವಾರದಲ್ಲಿ ಕಡ್ಡಾಯವಾಗಿ ನಿಯೋಜಿಸಬೇಕು ಎಂದರು.
ಹೆದ್ದಾರಿಯಲ್ಲಿ ಸಂಭವಿಸುವ ಹಲವು ಅಪಘಾತಗಳಿಗೆ ಐಆರ್ಬಿ ಕಂಪೆನಿಯೇ ನೇರ ಹೊಣೆಯಾಗಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ನಾಮಕಾವಸ್ತೆ ಬೋರ್ಡ್ಗಳನ್ನು ಹಾಗೂ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ. ಅಪಾಯಕಾರಿ ತಿರುವುಗಳಲ್ಲಿ ಸಹ ರಸ್ತೆ ಬದಿಯಲ್ಲಿ ಗುಂಡಿ ತೋಡಲಾಗಿದ್ದು, ಭದ್ರ ಬ್ಯಾರಿಕೇಡಿಂಗ್ ಮಾಡಿರುವುದಿಲ್ಲ. ಸಮರ್ಪಕವಾದ ಸೂಚನಾ ಫಲಕಗಳು, ಭದ್ರ ಬ್ಯಾರಿಕೇಡ್ಗಳು, ಎಚ್ಚರಿಕೆ ಲೈಟ್ಗಳನ್ನು ಅಳವಡಿಸಬೇಕು. ಐಆರ್ಬಿ ನಿರ್ಲಕ್ಷತೆಯಿಂದ ಅಪಘಾತಗಳು ಸಂಭವಿಸಿರುವುದು ಕಂಡು ಬಂದರೆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿನಾಯಕ ಪಾಟೀಲ್ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜನರಲ್ ಮ್ಯಾನೇಜರ್ ಪ್ರಸಾದ್ ಹಾಗೂ ಐಆರ್ಬಿ ಜನರಲ್ ಮ್ಯಾನೇಜರ್ ಅಗರವಾಲ್, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಉಪವಿಭಾಗಾಧಿಕಾರಿಗಳಾದ ರಮೇಶ ಕಳಸದ, ಶಿವಾನಂದ ಕರಾಳೆ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment