ಕಾರವಾರ:
ವಿವಿಧ ಇಲಾಖೆಗಳ ಸಭೆ ನಡೆಸಿದ ಅವರು, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವಿಷಯದಲ್ಲಿ ಕೇಳಿಬಂದ ಆರೋಪಗಳಿಗೆ ಉತ್ತರಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಡವರು ಹಾಗೂ ಶ್ರೀಮಂತರು ಎಂದು ತಾರತಮ್ಯ ಮಾಡದೇ ಎಲ್ಲರಿಗೂ ಒಂದೇ ಬಗೆಯ ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಕುರಿತು ಸಚಿವ ನಡೆದ ಸಭೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗೈರಾಗಿದ್ದು ಆಕ್ರೋಶಕ್ಕೆ ಕಾರಣವಾಯಿತು. ಶಾಸಕ ಸತೀಶ ಸೈಲ್ ಹಾಗೂ ಮಂಕಾಳು ವೈದ್ಯ ವಿಷಯ ಪ್ರಸ್ತಾಪಿಸಿ ಮುಖ್ಯವಾಗಿ ಸಭೆಯಲ್ಲಿರಬೇಕಾದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗೈರಾಗಿದ್ದಾರೆ. ಅವರೇ ಇಲ್ಲದೇ ಸಭೆಯಲ್ಲಿ ಚರ್ಚೆ ನಡೆದು ಪ್ರಯೋಜನವೇನು ಎಂದು ಅಸಮಧಾನ ಹೊರ ಹಾಕಿದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಮಾತನಾಡಿ, ಹೆದ್ದಾರಿ ಇಲಾಖೆ ಅಧಿಕಾರಿಗಳು ಯಾವಾಗಲೂ ಮಂಗಳೂರಿನಲ್ಲಿಯೇ ಇರುತ್ತಾರೆ. ಸಭೆಗೆ ಆಮಂತ್ರಿಸಿದರೆ ನೆಪ ಹೇಳಿ ತಪ್ಪಿಸಿಕೊಳ್ಳುತ್ತಾರೆ ಎಂದು ದೂರಿದರು. ಕಾರವಾರದಿಂದ ಭಟ್ಕಳವರೆಗಿನ ಹೆದ್ದಾರಿ ಅಂಚಿನಲ್ಲಿ ಕುಸಿತ ಉಂಟಾಗಬಹುದಾದಂತಹ 28 ಸ್ಥಳಗಳನ್ನು ಗುರುತಿಸಲಾಗಿದ್ದು, ಇನ್ನಷ್ಟು ಸ್ಥಳದ ಬಗ್ಗೆ ಚರ್ಚಿಸಲು ಈವರೆಗೂ ಆಗಮಿಸಿಲ್ಲ ಎಂದು ಹೇಳಿದರು. ಹೆದ್ದಾರಿ ಅಗಲೀಕರಣದ ಗುತ್ತಿಗೆ ಪಡೆದ ಐ.ಆರ್.ಬಿ. ಕಂಪನಿ ಅಧಿಕಾರಿಗಳು ಹಾಜರಿದ್ದರಾದರೂ ಅವರು ಜನಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಲು ತಡವರಿಸಿದರು.ಭಟ್ಕಳದಿಂದ ಕಾರವಾರದವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಎಲ್ಲಿಯೂ ಕೂಡ ಒಂದು ನಿಗದಿತ ಉದ್ದದ ರಸ್ತೆ ನಿರ್ಮಾಣ ಮಾಡಿಲ್ಲ. ಅರೆಬರೆ ಕಾಮಗಾರಿ ನಡೆದಿದೆ ಎಂದು ಶಾಸಕ ಮಂಕಾಳು ವೈದ್ಯ ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಐ.ಆರ್.ಬಿ. ಅಧಿಕಾರಿಗಳು ಕೆಲವೊಂದು ಜಾಗದ ಸಮಸ್ಯೆಗಳು ಕಾರ್ಯ ನಿರ್ವಹಿಸದಂತೆ ತಡೆ ಒಡ್ಡುತ್ತಿದ್ದು ಕಾಮಗಾರಿಗೆ ತೊಡಕಾಗಿದೆ ಎಂದರು. ಶಾಸಕ ಸತೀಶ ಸೈಲ್ ಮಾತನಾಡಿ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟ ಎಂಬ ಕಾರಣಕ್ಕೆ ಕಲ್ಲು ಕ್ವಾರಿಗಳನ್ನು ನಡೆಸಲು ಅನುಮತಿಯಿಲ್ಲ. ಆದರೆ ಈ ಐ.ಆರ್.ಬಿ.ಯವರು ಮಾತ್ರ ತಮಗಿಷ್ಟ ಬಂದ ಸ್ಫೋಟಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ದೂರಿದರು. ಟಿಪ್ಪರನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಲೋಡ್ ಬಾರ ಸಾಗಿಸಲಾಗುತ್ತಿದೆ. ಇದರಿಂದ ರಸ್ತೆ ಹಾಳಾಗುತ್ತಿದೆ ಎಂಬುದನ್ನು ಗಮನಕ್ಕೆ ತಂದರು. ಬಡವರು ಹಾಗೂ ಶ್ರೀಮಂತರಿಗೆ ಒಂದೇ ಬಗೆಯ ನ್ಯಾಯ ಒದಗಿಸಬೇಕು ಎಂದು ಸೂಚಿಸಿದ ಸಚಿವರು ಗುತ್ತಿಗೆ ಪಡೆದ ಕಂಪನಿಯವರು ಕಾನೂನನ್ನು ಮೀರಿದರೆ ಅವರ ವಿರುದ್ದವೂ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
Leave a Comment