ಕಾರವಾರ:
ಗ್ರಾಮ ಪಂಚಾಯತದ ಉದ್ಯೋಗ ಖಾತರಿ ಯೋಜನೆಯಲ್ಲಿ ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸಲು ನೇಮಕಗೊಂಡ ಸಮುದಾಯ ತಾಂತ್ರಿಕ ಸಹಾಯಕರುಗನ್ನು ದುಡಿಸಿಕೊಂಡ ಸರ್ಕಾರ ಏಳು ತಿಂಗಳಿನಿಂದ ವೇತನ ನೀಡಿಲ್ಲ.
ಕೇಂದ್ರ ಮತ್ತು ರಾಜ್ಯ ಗ್ರಾಮೀಣ ಮಂತ್ರಾಲಯದ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದವರನ್ನು ಜಿಲ್ಲೆಯ ಆಯಾ ತಾಲೂಕಿಗೆ ನಿಯೋಜನೆ ಮಾಡಲಾಗಿತ್ತು. ಹೀಗೆ ನಿಯೋಜನೆ ಗೊಂಡ ಸಮುದಾಯ ತಾಂತ್ರಿಕ ಸಿಬ್ಬಂದಿಗಳಿಗೆ ಮಾಹೆಯಾನ ರೂ. ಹತ್ತು ಸಾವಿರ ಗೌರವಧನ ನಿಗದಿಪಡಿಸಲಾಗಿತ್ತು. ಈ ಬಗ್ಗೆ ಸರಕಾರದ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಮೂರು ತಿಂಗಳ ತರಬೇತಿಯನ್ನು ಮುಗಿಸಿಕೊಂಡು ಬಂದ ಸ.ತಾ.ಸಿಬ್ಬಂದಿಗಳನ್ನು ಅವರ ತಾಲೂಕನ್ನು ಹೊರತು ಪಡಿಸಿ ಬೇರೆ ತಾಲೂಕುಗಳಿಗೆ ನಿಯೋಜನೆ ಮಾಡಲಾಗಿತ್ತು. ಅದೇ ರೀತಿ ಅವರು ತಮ್ಮ ಕಾರ್ಯವನ್ನು ಮಾಡಲಾರಂಭಿಸಿದರು. ರಾಜ್ಯದಲ್ಲಿ ಪ್ರಥಮ ಹಂತದಲ್ಲಿ ತರಬೇತಿ ಮುಗಿಸಿ ಕಾರ್ಯನಿರ್ವಹಿಸುತ್ತಿರುವ ಬಿ.ಎಪ್.ಟಿ ಗಳ ಸಂಖ್ಯೆ ಸುಮಾರು 730 ಇದೆ. ಈ ಸಿಬ್ಬಂದಿ ಆಯ್ಕೆ ಪ್ರಕ್ರಿಯೆಯು ಆಯಾ ಜಿಲ್ಲಾ ಪಂಚಾಯತ ಹಂತದಲ್ಲಿ ಆಯಾ ತಾಲೂಕಿನ ಕಾಮಗಾರಿಗಳ ಸಂಖ್ಯೆಯನ್ನು ಅವಲಂಬಿಸಿ ಉದ್ಯೋಗ ಖಾತರಿ ಯೋಜನೆಯಲ್ಲಿ ನೊಂದಾಯಿತ ಕುಟುಂಬದವರಾಗಿರಬೇಕು. ಯೋಜನೆಯ ಬಗ್ಗೆ ತಿಳಿದಿರಬೇಕು. ಕನಿಷ್ಟ ಹತ್ತನೆ ತರಗತಿ ಆಭ್ಯಸಿಸಿರಬೇಕು. ಎನ್ನುವ ಮಾನದಂಡ ಆಧರಿಸಿ ಆಯ್ಕೆ ಪ್ರಕ್ರಿಯೆಯನ್ನು ಮಾಡಲಾಗಿತ್ತು. ಹೀಗೆ ಆಯ್ಕೆಯಾದವರನ್ನು ಕೇಂದ್ರ ಮತ್ತು ರಾಜ್ಯ ಗ್ರಾಮೀಣಾಭಿವೃದ್ದಿ ವಿಭಾಗದಿಂದ ರಾಜ್ಯದ ಬೇರೆ ಬೇರೆ ತರಬೇತಿ ಕೇಂದ್ರದಲ್ಲಿ ವಿಶೇಷ ತರಬೇತಿ ವಿನ್ಯಾಸಗಳನ್ನೊಳಗೊಂಡತೆ 3 ತಿಂಗಳ ಸಮಗ್ರವಾದ ತರಬೇತಿಯನ್ನು ನೀಡಲಾಗಿತ್ತು.
ರಾಜ್ಯದ ಎಲ್ಲ ಜಿಲ್ಲೆಯಗಳಲ್ಲಿ ಗ್ರಾಮ ಪಂಚಾಯತದ ಹಂತದಲ್ಲಿ ಖಾತರಿ ಯೋಜನೆಯಲ್ಲಿ ಸಮರೋಪಾದಿಯಲ್ಲಿ ಕಾಮಗಾರಿಗಳು ನಡೆಯುತ್ತಿರುವದರಿಂದ ಈ ಎಲ್ಲ ಕಾಮಗಾರಿಗಳ ಅಳತೆಗಳನ್ನು ಮಾಡಲು ಎಂ.ಬಿ. ದಾಖಲಿಸಲು ತಾಂತ್ರಿಕ ಸಹಾಯಕರುಗಳಿಂದ ಸಾಧ್ಯವಾಗಿಲ್ಲ. ಹೀಗಾಗಿ ಸಮುದಾಯ ತಾಂತ್ರಿಕ ಸಹಾಯಕರುಗಳನ್ನು (ಭೇರ್ ಪುಟ್ ಟೆಕ್ನಿಷಿಯನ್ಸ) ಮಾರ್ಗಸೂಚಿಯ ಪ್ರಕಾರ ನೇಮಕಾತಿ ಪ್ರಕ್ರಿಯನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ಮುನಿಷ್ ಮೌದ್ಗಿಲ್ ಎನ್ನುವವರು ಆಯುಕ್ತರಾಗಿದ್ದ ಅವಧಿಯಲ್ಲಿ ಅಂದರೆ ಏಳೆಂಟು ತಿಂಗಳ ಹಿಂದೆ ಮಾಡಲಾಗಿತ್ತು. ಸಮುದಾಯ ತಾಂತ್ರಿಕ ಸಿಬ್ಬಂದಿಗಳ ಕೆಲಸವೆಂದರೆ ಸಿವಿಲ್ ಎಂಜಿನಿಯರಿಂಗ್ ಪರಿಕಲ್ಪನೆಗೆ ಸಂಬಂಧಿಸಿ ಗ್ರಾ.ಪಂ ಹಂತದಲ್ಲಿ ಕಾಮಗಾರಿಗಳ ಗುರುತಿಸುವಿಕೆ, ಮಾರ್ಕ ಮಾಪನ, ಅಂದಾಜು ಪಟ್ಟಿ ಸಿದ್ದಪಡಿಸುವದು, ಕಾಮಗಾರಿ ಸ್ಥಳದಲ್ಲಿ ಅಳತೆ ಬರೆಯುವದು, ಕೆಲಸದ ಪರಿಮಾಣ ಮತ್ತು ಕೂಲಿ ಪಾವತಿಯ ಬಗ್ಗೆ ದಾಖಲಿಸಿಕೊಳ್ಳುವದು, ಉದ್ಯೋಗ ಚೀಟಿಗಳ ಪರಿಷ್ಕರಣೆ ಪ್ರಕ್ರಿಯೆ, ಇತ್ಯಾದಿ ಇವರ ಕರ್ತವ್ಯವಾಗಿದೆ. ತಾಂತ್ರಿಕ ಎಂಜಿನಿಯರುಗಳಿಗೆ ಸಹಾಯಕರಾಗಿ ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಾರೆ.
ನಾಲ್ಕಾರು ತಿಂಗಳು ಕಳೆದ ಮೇಲೆ ಅವರ ತಮ್ಮ ಸಂಬಳಕ್ಕಾಗಿ ಸರಕಾರದ ಮುಂದೆ ಮವನಿ ಸಲ್ಲಿಸಿದರೆ ಯಾವ ಶಿರ್ಷಿಕೆಯಡಿ ನೀಡಬೇಕೆಂಬ ಸ್ಪಷ್ಟ ಮಾರ್ಗದರ್ಶನವಿಲ್ಲ. ಆದರೂ ತಮ್ಮ ಕೆಲಸಕ್ಕೆ ಸಂಬಳ ದೊರೆಯಬಹುದು ಎಂದು ಕಾರ್ಯದಲ್ಲಿಯೇ ಏಳೆಂಟು ತಿಂಗಳು ಕಳೆದರು. ಈ ಮಧ್ಯಂತರದಲ್ಲಿ ಹಲವು ಬಾರಿ ಜಿ.ಪಂ ಹಾಗೂ ಸರಕಾರದ ಗ್ರಾಮೀಣಾಭಿವೃದ್ದಿ ಇಲಾಖೆಯ ಅಧಿಕಾರಿಗಳಿಗೆ ತಮ್ಮ ಅಳಲಿನ ಮನವಿಯನ್ನು ಸಲ್ಲಿಸುತ್ತಲೆ ಬಂದರು. ಆದರೆ ಅವರ ಸಮಸ್ಯೆಗೆ ಸ್ಪಂದಿಸುವವರೆ ಯಾರು ಇಲ್ಲವಾಗಿದ್ದಾರೆ.
ಗ್ರಾಮೀಣಾಭಿವೃದ್ದಿ ಸಚಿವರಿಗೂ ಬರೆದರೂ ಕೂಡ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದೆ ನಿರಾಶರಾಗಿರುವ ಬಿ.ಎಪ್.ಟಿ ಗಳು ಈದೀಗ ಅಸಹಾಯಕರಾಗಿ ಕುಳಿತುಕೊಳ್ಳುವಂತಾಗಿದೆ. ಸರಕಾರ ಮೂರು ತಿಂಗಳುಗಳ ಕಾಲ ಸಾಕಷ್ಟು ಖರ್ಚು ಮಾಡಿ ತರಬೇತಿಯನ್ನು ನೀಡಿ ಅವರಿಂದ ಏಳೆಂಟು ತಿಂಗಳುಗಳ ಕಾಲ ಕೆಲಸ ತೆಗೆದುಕೊಂಡು ಈಗ ಯಾರು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅವರು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ತಮ್ನನ್ನು ಬೇರೆ ಬೇರೆ ತಾಲೂಕಿಗೆ ನಿಯೋಜನೆ ಮಾಡಲಾಗಿದ್ದು, ಸಂಸಾರದ ಭಾರದಲ್ಲಿ ಸಂಬಳವಿಲ್ಲದೆ ಎಷ್ಟುದಿನ ಹೇಗೆ ಕೆಲಸ ಮಾಡುವದು ಎನ್ನುವದು ಅವರ ಅಳಲು. ಒಂದೆಡೆ ಸಂಬಳವಿಲ್ಲವೆಂದು ಕೆಲಸಕ್ಕೆ ಹೋಗದಿದ್ದರೆ ತಾಲೂಕಿನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯತಗಳಿಂದ ಒತ್ತಡ. ಇನ್ನೊಂದೆಡೆ ಬೇರೆ ಎಲ್ಲಿಯೂ ಕೆಲಸಕ್ಕೆ ಹೋಗದ ಇಕ್ಕಟ್ಟಿನಲ್ಲಿ ಸಿಲುಕಿ ಒದ್ದಾಡುವ ಸ್ಥಿತಿ ತಮ್ಮದಾಗಿದೆ ಎನ್ನುತ್ತಾರೆ.
Leave a Comment