ಕಾರವಾರ:
ಜಿಲ್ಲೆಯ ಮೀನುಗಾರಿಕಾ ಬಂದರುಗಳಲ್ಲಿ ಮೂಲಸೌಕರ್ಯ ಒದಗಿಸುವಂತೆ ಮತ್ತು ಮೀನುಗಾರರ ವಿವಿಧ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಶಾಸಕ ಸತೀಶ್ ಸೈಲ್, ಮಂಕಾಳು ವೈದ್ಯ ಮುಂದಾಳತ್ವದಲ್ಲಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಸರ್ಕಾರ ರೈತರಿಗೆ 50 ಸಾವಿರ ರು.ವರೆಗೆ ಕೃಷಿ ಸಾಲ ಮನ್ನಾ ಮಾಡಿದಂತೆ ಮೀನುಗಾರರು ಪಡೆದ ಸಾಲವನ್ನೂ ಮನ್ನಾ ಮಾಡಬೇಕು. ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಮಹಿಳೆಯರಿಗೆ ಈ ಹಿಂದೆ ಸರ್ಕಾರ ಮತ್ಸ್ಯ ಮಹಿಳಾ ಸ್ವಾವಲಂಬನಾ ಯೋಜನೆಯಡಿ ನೀಡುತ್ತಿರುವ 50 ಸಾವಿರ ರು.ವನ್ನು 1 ಲಕ್ಷ ರು.ಗೆ ಏರಿಕೆ ಮಾಡಬೇಕು. ಇದಕ್ಕಾಗಿ ಫೆಡರೇಶನ್ನಿಗೆ ಹೆಚ್ಚುವರಿಯಾಗಿ 3 ಕೋಟಿ ರು. ನೀಡಬೇಕು. ಕಾರವಾರದಿಂದ ಭಟ್ಕಳದವರೆಗಿನ ಮೀನುಗಾರಿಕಾ ಬಂದರಿನಲ್ಲಿರುವ ಜಟ್ಟಿ ನಿರ್ಮಾಣದೊಂದಿಗೆ ಇನ್ನಿತರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು. ಫೆಡರೇಶನ್ನಿನ ಮೂಲಕ ವಿವಿಧ ಮೀನುಗಾರಿಕಾ ಬಂದರುಗಳಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ ಲೀಸ್ ಮೇಲೆ ಪಡೆದ ಭೂಮಿಯ ವಾರ್ಷಿಕ ಬಾಡಿಗೆ ಏರಿಕೆ ಮಾಡಿರುವುದನ್ನು ಹಿಂಪಡೆದು ಈ ಹಿಂದಿನ ದರದಲ್ಲಿ ಭೂಬಾಡಿಗೆ ವಸೂಲಿ ಪಡೆಯುವಂತೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದರ ಜೊತೆಗೆ ಮೀನುಗಾರರ ಇನ್ನಿತರ ಸಮಸ್ಯೆಗಳಾದ ಹೊನ್ನಾವರದ ಶರಾವತಿ ಅಳಿವೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸಚಿವರ ಬಳಿ ಆಗ್ರಹಿಸಲಾಯಿತು. ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರಲ್ಲದೇ ಕಾರವಾರದ ಮೀನುಗಾರಿಕಾ ಜೆಟ್ಟಿಯ ವಿಸ್ತರಣೆಗೆ ಸಮ್ಮತಿಸಿದ್ದಾರೆ. ಸಚಿವರ ಗಮನಕ್ಕೆ ಫೆಡರೇಶನ್ನಿನ ಪ್ರಮುಖರು ತಂದಿದ್ದಾರೆ. ಫೆಡರೇಶನ್ ಅಧ್ಯಕ್ಷ ಗಣಪತಿ ಆರ್.ಮಾಂಗ್ರೆ, ನಿರ್ದೇಶಕ ಉಮೇಶ ಜಿ.ಮೇಸ್ತ ಮತ್ತು ಮೀನುಗಾರ ಮುಖಂಡ ಕೆ.ಟಿ.ತಾಂಡೇಲ್, ಮೀನುಗಾರಿಕೆ ಇಲಾಖೆ ನಿರ್ದೇಶಕರ ವೀರಪ್ಪ ಗೌಡ ಉಪಸ್ಥಿತರಿದ್ದರು.
Leave a Comment