ಕಾರವಾರ:
2004 ರಿಂದ ಜಾರಿಗೆ ಬಂದಿರುವ ಹೊಸ ಪಿಂಚಣಿ ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನೆ ಮುಂದವರಿಸಬೇಕು ಮತ್ತು ಏಳನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಎಲ್ಲ ರಾಜ್ಯಗಳಲ್ಲಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಪ್ರಧಾನ ಮಂತ್ರಿಗೆ ಶನಿವಾರ ಮನವಿ ಸಲ್ಲಿಸಿದರು.
ನೂತನ ಪಿಂಚಣಿ ರದ್ದುಗೊಳಿಸಿ ಹಳೆ ಪಿಂಚಣಿ ಜಾರಿ ಮಾಡಬೇಕು. ಪ್ರಾರ್ಥಮಿಕ ಶಿಕ್ಷಣದ ಅಭಿವೃದ್ಧಿಗಾಗಿ ಪ್ರಾಥಮಿಕ ಶಿಕ್ಷಣ ಮಂಡಳಿ ಸ್ಥಾಪಿಸಬೇಕು. ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾರ್ಥಮಿಕ ಶಿಕ್ಷಣ ಆರಂಭಿಸಬೇಕು. ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಕನಿಷ್ಠ ವರ್ಗಕ್ಕೆ ಒಬ್ಬ ಶಿಕ್ಷಕ ಅತವಾ ಶಿಕ್ಷಕಿಗೆ ಶಾಲೆಗೊಬ್ಬ ಮುಖ್ಯೋಧ್ಯಾಪಕರನ್ನು ನಿಯುಕ್ತಿಗೊಳಿಸುವಂತೆ ಒತ್ತಾಯಿಸಿದರು. ನೂತನ ಪಿಂಚಣಿ ವ್ಯವಸ್ಥೆಯು ದೇಶದ ವಿವಿಧ ಇಲಾಖೆಗಳ ನೌಕರರಿಗೆ ಹಾಗೂ ಶಿಕ್ಷಕರಿಗೆ ಸಮರ್ಪಕವಾಗಿ ದೊರೆಯದಂತಾಗಿದೆ. ಇದು ಅಭದ್ರತೆಯ ಯೋಜನೆಯಾಗಿದ್ದು, ನಿವೃತ್ತ ನೌಕರರಲ್ಲಿ ಆತಂಕ ಸೃಷ್ಠಿಸುತ್ತಿದೆ. ಅಲ್ಲದೆ ನಿವೃತ್ತಿಯಾದವರಿಗೆ ವೃದ್ದಾಪ್ಯದಲ್ಲಿ ಸೂಕ್ತ ಪಿಂಚಣಿ ವ್ಯವಸ್ಥೆ ಸಿಗದೆ ಕಷ್ಟ ಅನುಭವಿಸುವಂತಾಗಿದೆ ಎಂದು ವಿವರಿಸಿದರು.
6ನೇ ವೇತನ ಆಯೋಗದ ಶಿಪಾರಸ್ಸಿನಲ್ಲಿ ವೇತನಕ್ಕಿಂತ ಹೆಚ್ಚಿನದಾಗಿ ಪಿಂಚಣಿ ಕುರಿತಾಗಿ ಒತ್ತು ನೀಡಲಾಗಿದೆ. ಸರ್ವೋಚ್ಚ ನ್ಯಾಯಾಲಯ ಕೂಡ ಸರಕಾರಿ ನೌಕರರು ನಿವೃತ್ತಿ ನಂತರವೂ ಈ ಹಿಂದಿನಂತೆ ಜೀವನ ನಡೆಸುವಂತಾಗಬೇಕು. ಪಿಂಚಣಿಯು ನೌಕರರು ಗಳಿಸಿದ ಹಣವೇ ಆಗಿದ್ದು, ಸಾರ್ವಜನಿಕ ನೌಕರನಾಗಿ ಸರಕಾರಕ್ಕೆ ಸಲ್ಲಿಸಿದ ಸೇವೆಗೆ ಪ್ರತಿಫಲವಾಗಿ ನೀಡಲಾಗುತ್ತಿದೆ. ಇದು ಪ್ರತಿಯೊಬ್ಬರ ನೌಕರನ ಹಕ್ಕು ಎಂದು ವ್ಯಾಖ್ಯಾನಿಸಿರುವುದದನ್ನು ಉಲ್ಲೇಖಿಸಿ ಮನವಿ ಸಲ್ಲಿಸಿದರು.
ಈ ವಿಷಯವಾಗಿ ಮಾ. 31 ರಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ಸರಕಾರದಿಂದ ಯಾವುದೇ ಪ್ರತಿಕ್ರಿಯೇ ಬಂದಿಲ್ಲ. ಈ ಹಿನ್ನೆಲೆಯಲ್ಲಿ ತಾಲೂಕು ಮಟ್ಟದಿಂದ ಹೋರಾಟವನ್ನು ಪ್ರಾರಂಭಿಸಲಾಗುತ್ತಿದ್ದು, ಸರಕಾರ ಸೂಕ್ತ ರಿತಿಯಲ್ಲಿ ಸ್ಪಂಸಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಸಂಘದ ಅಧ್ಯಕ್ಷ ನಾರಾಯಣ ಬಿ. ಗಾಂವಕರ್, ಪ್ರಧಾನ ಕಾರ್ಯದರ್ಶಿ ಎನ್.ಎಸ್. ನಾಯ್ಕ, ರತ್ನಾಕರ ನಾಯ್ಕ, ಶಂಕರ ನಾಯ್ಕ, ವಿಜಯ ನಾಯಕ, ಎನ್.ಎಸ್ ನಾಯ್ಕ, ಚಂದ್ರಕಲಾ ನಾಯ್ಕ, ಎಂ.ಜಿ. ನಾಯ್ಕ ಇನ್ನಿತರರು ಹಾಜರಿದ್ದರು.
Leave a Comment