ಹಳಿಯಾಳ ; ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ರಾಜಾರೋಷವಾಗಿ ಇಸ್ಪೀಟ್ ಕ್ಲಬ್ಗಳು, ಓಸಿ, ಬೆಟ್ಟಿಂಗ್, ಮಾಂಸಾಹಾರಿ ಹೋಟೇಲ್ಗಳಲ್ಲಿ ಎಗ್ಗಿಲ್ಲದೇ ಮಧ್ಯ ಮಾರಾಟ ಹಾಗೂ ಲಾಡ್ಜ್ಗಳಲ್ಲಿ ವೈಶ್ಯಾವಾಟಿಕೆ ಸೇರಿದಂತೆ ಇನ್ನಿತರ ಅನೈತಿಕ ಚಟುವಟಿಕೆಗಳು ಅವ್ಯಾವಾಹತವಾಗಿ ನಡೆದು ಪಟ್ಟಣ ಅಕ್ರಮಗಳ ಅಡ್ಡೆಯಾಗಿ ಮಾರ್ಪಾಟಾಗುತ್ತಿದ್ದು ಇವುಗಳನ್ನು ತಡೆಯುವಲ್ಲಿ ಹಳಿಯಾಳ ಪಿಎಸ್ಐ ಎಮ್.ಎಸ್. ಹೂಗಾರ ಸಂಪೂರ್ಣ ವಿಫಲರಾಗಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ತಕ್ಷಣ ಅವರನ್ನು ವರ್ಗಾವಣೆ ಮಾಡುವಂತೆ ಹಳಿಯಾಳ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಇಲ್ಲಿಯ ಪುರಸಭಾಭವನದಲ್ಲಿ ಮಂಗಳವಾರ 10ಕ್ಕೂ ಹೆಚ್ಚು ಸಂಘಟನೆಗಳುಳ್ಳ ದಲಿತ ಸಂಘಟನೆಗಳ ಒಕ್ಕೂಟ ನಡೆಸಿದ ಮಹತ್ವಪೂರ್ಣ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ ಹಳಿಯಾಳದಲ್ಲಿ ಅಕ್ರಮವಾಗಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ದಂಧೆಯ ಕೆಲವು ದಾಖಲೆ ಪತ್ರಗಳನ್ನು ಬಿಡುಗಡೆಗೊಳಿಸಿ ಬಡವರು ಮತ್ತು ಅಮಾಯಕರ ಪರವಾಗಿ ಸಂಘಟನೆ ಧ್ವನಿ ಎತ್ತಿದ್ದು ಮುಂದಿನ ದಿನಗಳಲ್ಲಿ ಅಕ್ರಮವಾಗಿ ಹಾಡುಹಗಲೇ ನಡೆಯುತ್ತಿರುವ ವಂಚನೆ ಪ್ರಕರಣಗಳನ್ನು ಬಯಲಿಗೆ ಎಳೆಯಲಾಗುವುದು, ಪಿಎಸೈ ವಿರುದ್ದ ಸೂಕ್ತ ಕ್ರಮಕ್ಕಾಗಿ ಇಗಾಗಲೇ ಎಸ್ಪಿ ಅವರಿಗೆ ದೂರು ದಾಖಲಿಸಲಾಗಿದೆ ಅಲ್ಲದೇ ದಲಿತ ಒಕ್ಕೂಟದ ಮುಖಂಡರ ನಿಯೋಗ ಸೆ.9 ರಂದು ಬೆಂಗಳೂರಿಗೆ ತೆರಳಿ ಪಿಎಸ್ಐ ಮೇಲೆ ಕ್ರಮಕ್ಕಾಗಿ ಆಗ್ರಹಿಸಿ ಪೋಲಿಸ್ ಮಹಾನಿರ್ದೆಶಕರು, ರಾಜ್ಯಪಾಲರು, ಗೃಹ ಸಚಿವರಿಗೆ ದೂರನ್ನು ನೀಡುವುದಾಗಿ ಹೇಳಿದರು.
ಸುದ್ದಿಗೊಷ್ಠಿಯ ನಂತರ ಹಳಿಯಾಳ ವೃತ್ತ ನೀರಿಕ್ಷಕರ ಬಳಿ ತೆರಳಿದ ಸಂಘಟನೆಯವರು ಸಿಪಿಐ ಸುಂದ್ರೇಶ ಹೊಳೆನ್ನವರ ಅವರಿಗೆ ಪೋಲಿಸ್ ಮಹಾನಿದೇಶರಿಗೆ ಬರೆದ ಮನವಿಪತ್ರವನ್ನು ಸಲ್ಲಿಸಿ, ಪಿಎಸೈ ಎಮ್.ಎಸ್.ಹೂಗಾರ ಅವರಿಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು. ಮನವಿಯಲ್ಲಿ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಕಳೆದ ಒಂದುವರೆ ವರ್ಷದಿಂದ ಪಿಎಸೈ ಆಗಿ ಸೇವೆ ಸಲ್ಲಿಸುತ್ತಿರುವ ಎಮ್.ಎಸ್. ಹೂಗಾರ ಅವರು ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ ಕುರಿತು ದಲಿತ ಸಂಘಟನೆಗಳು ಮತ್ತು ದಲಿತ ಮುಖಂಡರು ದೂರುಗಳನ್ನು ನೀಡಿದರೂ ಅವುಗಳನ್ನು ದಾಖಲಿಸುವಲ್ಲಿ ಹಿಂದೆಟು ಹಾಕುತ್ತಿದ್ದಾರೆ.
ನ್ಯಾಯ ಕೋರಿ ಪೋಲಿಸ್ ಠಾಣೆಯ ಮೆಟ್ಟಿಲ್ಲನ್ನು ಹತ್ತಿದ ಶಂಕರ ಅಮ್ರಾಪೂರಕರ ಅವರಿಗೆ ನ್ಯಾಯ ನೀಡುವ ಬದಲು ಅವರ ದೂರನ್ನು ಸ್ವೀಕರಿಸದೇ ಸುಮಾರು ಎರಡು ತಿಂಗಳು ಕಾಲ ವಿಳಂಭ ಧೋರಣೆಯನ್ನು ಅನುಸರಿಸುವುದರ ಜೊತೆಗೆ ಅವರ ಸಹಾಯಕ್ಕಾಗಿ ಧಾವಿಸಿದ್ದ ದಲಿತ ಮುಖಂಡರಾದ ಯಲ್ಲಪ್ಪ ಹೋನ್ನೋಜಿ ಮತ್ತು ರವಿ ವಡ್ಡರ ಅವರ ಮೇಲೆ ಇಲ್ಲಿಯ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡುವಂತೆ ಎದುರುದಾರರಿಗೆ ಕುಮ್ಮಕ್ಕು ನೀಡಿ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ದೂರನ್ನು ನೀಡಲು ಹೋದರೆ ನಿಮ್ಮ ದೂರನ್ನು ಸ್ವೀಕರಿಸುವುದಿಲ್ಲ ಎಂದು ನೇರವಾಗಿ ಹೇಳುವ ಅವರು ಎಸ್ಪಿ ಅವರಿಗೆ ಭೇಟಿಯಾಗಿ ದೂರನ್ನು ಸಲ್ಲಿಸಿ ಎಂದು ಹೇಳವುದರ ಮೂಲಕ ದಲಿತ ವಿರೋಧಿ ನೀತಿಯನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾನೂನು ಬಾಹಿರವಾಗಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವ ಬೆಳಗಾವಿ ಮೂಲದ ಬಾಗೇವಾಡಿ ಸಹೋದರರು ಮತ್ತು ಅವರಿಗೆ ಬೆಂಬಲ ನೀಡುತ್ತಿರುವ ಹಳಿಯಾಳ ಪುರಸಭೆ ಸದಸ್ಯ ಫಯಾಜ್ ಶೇಖ ಅವರ ಮೇಲೆ ಹಳಿಯಾಳ ಠಾಣೆಯಲ್ಲಿ ದೂರನ್ನು ಸಲ್ಲಿಸಲಾಗಿದ್ದು ತಕ್ಷಣ ಇವರನ್ನು ಬಂಧಿಸಬೇಕು ಇಲ್ಲದಿದ್ದರೇ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಯಲ್ಲಪ್ಪ ಹೊನ್ನೋಜಿ, ರವಿ ವಡ್ಡರ, ಬಡೇಸಾಬ ಕಕ್ಕೇರಿ,ಮೇಘರಾಜ ಮೇತ್ರಿ, ಜ್ಞಾನೇಶ್ವರ ಗಜಕೋಶ, ರಾಮಕೃಷ್ಣ ಘಟಕಾಂಬಳೆ, ಹನುಮಂತ ತಳವಾರ, ಪವಿತ್ರ ಮೇತ್ರಿ, ಅನ್ವರ ಅರಳಿಕಟ್ಟಿ, ಮತ್ತಯ್ಯಾ ಮಾದರ, ಸಂತೋಷ ರಾಠೋಡ, ಮಂಜುನಾಥ ಗಜಕೋಶ, ರಾಯಪ್ಪ ಹೊಂಗಲ್ ಮತ್ತು ರಮೇಶ ಮಾದರ ಇತರರು ಇದ್ದರು.
Leave a Comment