ಹಳಿಯಾಳ : . ರಾಜ್ಯ ಕಾಂಗ್ರೇಸ್ ಸರ್ಕಾರ ಹಲವಾರು ಯೋಜನೆಗಳ ಮೂಲಕ ಮಕ್ಕಳು ಮತ್ತು ಮಹಿಳೆಯರ ಅಭಿವೃದ್ದಿಗೆ ಶ್ರಮಿಸುತ್ತಿದ್ದು ಮುಂಬರುವ ಅಕ್ಟೋಬರ ತಿಂಗಳಲ್ಲಿ ಗರ್ಭಿಣಿ ಮಹಿಳೆಯರಿಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರವನ್ನು ತಯಾರಿಸಿ ವಿತರಿಸುವ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದವರು 2012-13 ನೇ ಹಣಕಾಸಿನ ಯೋಜನೆಯಲ್ಲಿ 4.40 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಅಭಿವೃದ್ದಿ ಮತ್ತು ಮಹಿಳೆಯರ ಆರೈಕೆಗಾಗಿ ತಾಲೂಕಿನ 231 ಅಂಗನವಾಡಿಗಳಿಗೆ ಪೌಷ್ಠಿಕ ಆಹಾರದ ಕೊರತೆಯಾಗದಂತೆ ನೊಡಿಕೊಳ್ಳಲಾಗುತ್ತಿದೆ ಹಾಗೂ ಎಲ್ಲಾ ಮಕ್ಕಳಿಗೆ ಸಾಕಷ್ಟು ಆಟಿಕೆಯ ಸಾಮಗ್ರಿಗಳನ್ನು ಸಹ ವಿತರಿಸಲಾಗಿದ್ದು ಪೊಷಕರು ಸರ್ಕಾರದ ಯೋಜನೆಗಳ ಬಗ್ಗೆ ಅರಿತು ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಬೇಕೆಂದರು.
ಸರ್ಕಾರವು ಗ್ರಾಮೀಣ ಭಾಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು, ಇಗಾಗಲೇ ಬೆಳೆ ವಿಮೆ, ಬೆಳೆ ಹಾನಿ, ಮತ್ತು ಸಾಲ ಮನ್ನಾ ಸೇರಿದಂತೆ ತಾಲೂಕಿಗೆ ಇದುವರೆಗೆ 114 ಕೋಟಿ ರೂಗಳನ್ನು ನೀಡುವುದರ ಜೊತೆಗೆ ಹಣವು ನೇರವಾಗಿ ರೈತರ ಖಾತೆಗಳಿಗೆ ಜಮಾ ಆಗುವಂತೆ ಮಾಡಲಾಗಿದೆ. ಮುಂದಿನ ಕೇವಲ ಒಂದು ತಿಂಗಳ ಅವಧಿಯಲ್ಲಿ 18 ಸಾವಿರ ಎಕರೆ ನೀರು ಉಣಿಸುವ ತಾಲೂಕಿನ ಬಹುನಿರೀಕ್ಷಿತ 220 ಕೋಟಿ ರೂ ಮೊತ್ತದ ಕಾಳಿ ಎತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುವುದು ಇದಕ್ಕಾಗಿಯೇ ಸುಮಾರು 160 ಕೆರೆಗಳನ್ನು ಇಗಾಗಲೆ ಹೊಳೆತ್ತುವುದರ ಮೂಲಕ ಎಲ್ಲಾ ಬಾಂದಾರು ಮತ್ತು ಚೆಕ್ ಡ್ಯಾಂಗಳ ಮೂಲಕ ರೈತರ ಹೊಲಗಳಿಗೆ ನೀರಾವರಿಗೆ ಅನುಕೂಲವಾಗುವಂತೆ ಜೊತೆಗೆ ಅಂತರಜಲದ ಮಟ್ಟವು ಹೆಚ್ಚಾಗುವಂತೆ ಮಾಡಲಾಗುವುದೆಂದರು.
ವಿಪ ಸದಸ್ಯ ಎಸ್.ಎಲ್.ಘೋಟ್ನೆಕರ ಮಾತನಾಡಿ, ಹಲವಾರು ಯೋಜನೆಗಳ ಮೂಲಕ ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚಿನ ಮಹತ್ವನ್ನು ನೀಡಿದೆ. ಶಿಕ್ಷಣವು ಇಂದು ಜನರ ಮನೆ ಬಾಗಿಲಿಗೆ ಬಂದು ತಲುಪಿದ್ದು, ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಲಾಗುತ್ತಿದೆ ಪಾಲಕರು ತಮ್ಮ ಮಕ್ಕಳಿಗೆ ಅಂಗನವಾಡಿ ಮತ್ತು ಶಾಲೆಗಳಿಗೆ ಕಳುಹಿಸಲು ಆಸಕ್ತಿ ವಹಿಸಿ ಅವರ ಶೈಕ್ಷಣಿಕ ಮಟ್ಟ ಹೆಚ್ಚುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷ ಹನುಮಂತ ಸಾವಂತ, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಉಪಾಧ್ಯಕ್ಷೆ ನೀಲವ್ವಾ ಮಡಿವಾಳ, ತಹಶೀಲದಾರ ವಿದ್ಯಾದರ ಗುಳಗುಳಿ, ತಾಪಂ ಸದಸ್ಯ ದಯಾನಂದ ಜಾವಳೇಕರ, ತಾಪಂ ಇಓ ಲಕ್ಷ್ಮಣರಾವ್ ಯಕ್ಕುಂಡಿ, ಸಿಡಿಪಿಓ ಶಾರದಾ ಮರಾಠೆ, ಡಾ. ಅರುಣಾ ಸಾನು, ಮೇಲ್ವಿಚಾರಕಿ ಸುವರ್ಣಾ ಹೂಗಾರ, ನಿರ್ಮಿತಿ ಕೇಂದ್ರದ ಕುಮಾರ ಇತರರು ಇದ್ದರು.
Leave a Comment