ಹಳಿಯಾಳ : ಅರಣ್ಯದ ಅಂಚಿನ ಗ್ರಾಮಗಳ ಜನತೆ ಸಾಗುವಳಿ ಯೋಗ್ಯ ಅರಣ್ಯವನ್ನು ಅತಿಕ್ರಮಿಸಿ ಸುಮಾರು 70 ವರ್ಷಗಳಿಂದಲೂ ತಮ್ಮ ಉಪಜೀವನಕ್ಕಾಗಿ ವ್ಯವಸಾಯ ಮಾಡುತ್ತಿದ್ದು ಈ ಕೃಷಿ ಜಮೀನನ್ನು ಈವರೆಗೂ ಬಡ ರೈತರಿಗೆ ಮಂಜೂರು ಮಾಡಲಾಗಿಲ್ಲ ಕಾರಣ ಕೂಡಲೇ ಸರ್ಕಾರ ಅತಿಕ್ರಮ ಭೂಮಿ ಸಕ್ರಮಗೊಳಿಸಿ ಪಟ್ಟಾ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ಕೆಂಪು ಸೇನೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ.
ರೈತರು ಕೆಂಪು ಸೇನೆಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯ ಮೂಲಕ ಇಲ್ಲಿಯ ಮಿನಿವಿಧಾನಸೌಧಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ಮನವಿಯಲ್ಲಿ ಸ್ವಾತ್ಯಂತ್ರ ದೊರೆತು 70 ವರ್ಷಗಳು ಕಳೆದರು ಸಹ ಇದುವರೆಗೂ ಸಾಗುವಳಿ ಮಾಡುತ್ತಿರುವ ಅರಣ್ಯ ಅತಿಕ್ರಮಣದಾರರಿಗೆ ಜಮೀನು ನೀಡದೇ ಸರಕಾರಗಳು ತಮ್ಮ ನಿರ್ಲಕ್ಷ ಧೋರಣೆಯನ್ನು ಅನುಸರಿಸಿವೆ.ಇದರಿಂದ ಬಡವರು, ಕೃಷಿ ಕೂಲಿಕಾರ್ಮಿಕರು ಮತ್ತು ಚಿಕ್ಕ ಚಿಕ್ಕ ರೈತರು ತಮ್ಮ ಉಪಜೀವನಕ್ಕೆ ಅವಲಂಬಿಸಿರುವ ಜಮೀನು ತಮ್ಮ ಪಾಲಿಗೆ ಸಿಗದೇ ಅವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ಅವರ ಹೆಸರಿಗೆ ಜಮೀನು ಮಂಜೂರಿ ಮಾಡಬೇಕು.
ಮುಂದಿನ ದಿನಗಳಲ್ಲಿ ಅರಣ್ಯ ಅತಿಕ್ರಮಣ ಜಮೀನು ಅರ್ಹರಿಗೆ ಸಿಗದಿದ್ದರೇ ಕೆಂಪು ಸೇನೆಯಿಂದ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದು, ಅತಿಕ್ರಮಣ ಜಮೀನಿನ ಸಕ್ರಮ ಪಟ್ಟಾ ವಿತರಿಸುವಂತೆ ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷರಾದ ರಾಮಚಂದ್ರ ವಡ್ಡರ, ಎನ್.ಎಸ್. ಉದ್ದಣ್ಣವರ, ಜಯಲಕ್ಷ್ಮೀ ಚವ್ಹಾಣ, ಜಯರಾಮ್ ವಡ್ಡರ, ಟಿಕ್ಕಪ್ಪಾ ಲಮಾಣಿ, ಸುರೇಶ ಸಿಂದೋಳಕರ, ಎ.ಪಿ.ಮುಜಾವರ, ಪರಶುರಾಮ ವಡ್ಡರ, ನಂದಾ ಪಾಟೀಲ್, ಲಕ್ಷ್ಮೀ ಭಜಂತ್ರಿ, ನವೀನ್ ಸಿದ್ದಿ, ನಿಸಾರ ಸರ್ಕಾವಸ್ ಮತ್ತು ವಿಲ್ಸನ್ ಗುತ್ತೀಕರ ಇದ್ದರು
Leave a Comment